ಕೊನೆ ದಿನಗಳನ್ನು ಎಣಿಸುತ್ತಿರುವ ಕನ್ನಡದ ಹಳೆಯ ಸುದ್ದಿ ವಾಹಿನಿ ಉದಯ ನ್ಯೂಸ್
ಬೆಂಗಳೂರು, ಆಗಸ್ಟ್ 24: ಮಾರನ್ ಸೋದರರ ಒಡೆತನದ ಸನ್ ಟಿವಿ ನೆಟ್ವರ್ಕ್ ಸಂಸ್ಥೆಯು ಕನ್ನಡದ ಅತ್ಯಂತ ಹಳೆಯ ಸುದ್ದಿ ವಾಹಿನಿ 'ಉದಯ ನ್ಯೂಸ್' ಮುಚ್ಚಲು ನಿರ್ಧರಿಸಿದೆ.
ಅಕ್ಟೋಬರ್ 24 ರಿಂದ ಉದಯ ನ್ಯೂಸ್ ಅನ್ನು ಮುಚ್ಚಲಾಗುವುದು ಎಂದು ಸನ್ ಟಿವಿ ಉಪಾಧ್ಯಕ್ಷ ಎಸ್.ಡಿ. ಜವಾಹರ್ ಮೈಕಲ್ ಪ್ರಕಟಣೆ ಹೊರಡಿಸಿದ್ದಾರೆ. ಈ ಸಂಬಂಧ ಕಾರ್ಮಿಕ ಇಲಾಖೆಗೆ ಪತ್ರ ಬರೆಯಲಾಗಿದೆ.

ಕಳೆದ 19 ವರ್ಷಗಳಿಂದ ಪ್ರಸಾರವಾಗುತ್ತಿರುವ ಉದಯ ಸುದ್ದಿವಾಹಿನಿಯಲ್ಲಿ ಸದ್ಯ 73 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಉದಯ ನ್ಯೂಸ್ ಬಂದ್ ಆಗುತ್ತಿದ್ದಂತೆ ಎಲ್ಲರೂ ಕೆಲಸ ಕಳೆದುಕೊಳ್ಳಲಿದ್ದಾರೆ.
ಸುದ್ದಿ ವಾಹಿನಿಯ ವೀಕ್ಷಕರ ಸಂಖ್ಯೆ ಕಡಿಮೆ ಕಡಿಮೆಯಾಗುತ್ತಿದ್ದು, ಈ ಸುದ್ದಿ ವಾಹಿನಿ ನಿರೀಕ್ಷಿತ ಮಟ್ಟದಲ್ಲಿ ಆದಾಯ ಗಳಿಸುವಲ್ಲಿ ವಿಫಲವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೂ ಕಳೆದ ಕೆಲವು ವರ್ಷಗಳಿಂದ ನಷ್ಟ ಅನುಭವಿಸುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ, ಸನ್ ನೆಟ್ವರ್ಕ್ ಒಡೆತನದ 33ಕ್ಕೂ ಅಧಿಕ ಟಿವಿ ಚಾನೆಲ್ ಗಳು ಹಾಗೂ 45ಕ್ಕೂ ಅಧಿಕ ಎಫ್ ಎಂ ಚಾನೆಲ್, ಸೂರ್ಯನ್ ಎಫ್ ಎಂ ಹಾಗೂ ರೆಡ್ ಎಫ್ ಎಂ ಎಲ್ಲವೂ ಪ್ರಸಾರ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿತ್ತು.

ಭ್ರಷ್ಟಾಚಾರ, ಮನಿ ಲಾಂಡ್ರಿಂಗ್ ಹಾಗೂ ಅಕ್ರಮವಾಗಿ ಟೆಲಿಕಾಂ ಸಂಪರ್ಕ ಹೊಂದಿದ ಆರೋಪ ಇರುವುದರಿಂದ ಸನ್ ನೆಟ್ವರ್ಕ್ ಸಲ್ಲಿಸಿದ ಲೈಸನ್ ನವೀಕರಣ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ, ಗೃಹ ಇಲಾಖೆ ಪ್ರತಿಕ್ರಿಯಿಸಿತ್ತು.












Click it and Unblock the Notifications