ಬ್ಯಾಂಕ್ ಗ್ರಾಹಕರೇ ಗಮನಿಸಿ: ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ನಿಮ್ಮ ಖಾತೆ ಸ್ಥಗಿತ!
ಕೆವೈಸಿ ಮಾನದಂಡ ಅನುಸರಿಸದ ಹಲವು ಗ್ರಾಹಕರ ಖಾತೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸ್ಥಗಿತಗೊಳಿಸಿದೆ. ಮತ್ತು ಕೂಡಲೇ ಗ್ರಾಹಕರು ತಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಎಸ್ಬಿಐನ ಕೆವೈಸಿ ಅಭಿಯಾನ ಜುಲೈ 1ಕ್ಕೆ ಕೊನೆಯಾಗಿದೆ. ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡದ ಗ್ರಾಹಕರ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಕೌಂಟ್ ಸ್ಥಗಿತವಾಗಿರುವುದರಿಂದ ಖಾತೆದಾರರು ವಹಿವಾಟು ನಡೆಸಲಾಗದೆ ಪರದಾಡುವಂತಾಗಿದೆ.
ಎಸ್ಬಿಐನ ಹಲವಾರು ಗ್ರಾಹಕರು ಈ ಬಗ್ಗೆ ಟ್ವಿಟರ್ ನಲ್ಲಿ ದೂರು ನೀಡಿದ್ದಾರೆ. ಎಸ್ಬಿಐ ಅಧಿಕೃತ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಎಸ್ಬಿಐ ಗ್ರಾಹಕರಲ್ಲೊಬ್ಬರಾದ ಅಜಿತ್ ವಾಲೆ ಎನ್ನುವವರು ಟ್ವೀಟ್ ಮಾಡಿದ್ದು "ನನ್ನ ಖಾತೆಯ ಹಣ ವರ್ಗಾವಣೆಯನ್ನು ನಿಷೇಧಿಸಲಾಗಿದೆ. ಕೆವೈಸಿ ಪೂರ್ಣಗೊಳಿಸಲು ಕರೆ ಮಾಡಿ ಅಥವಾ ಮೇಲ್ ಮಾಡಿ ಎಂಬ ಸಂದೇಶವನ್ನು ತೋರಿಸುತ್ತಿದೆ. ಆದರೆ ಎಸ್ಬಿಐ ನೇರವಾಗಿ ವಹಿವಾಟು ನಿಲ್ಲಿಸಿದೆ. ನಾನು ವಿದೇಶದಲ್ಲಿ ನೆಲೆಸಿದ್ದೇನೆ ಹೇಗೆ ಕೆವೈಸಿ ಪೂರ್ಣಗೊಳಿಸಬೇಕು ಎಂದು ದಯವಿಟ್ಟು ಮಾರ್ಗದರ್ಶನ ನೀಡಿ" ಎಂದು ಕೇಳಿದ್ದಾರೆ.
ಗ್ರಾಹಕರಿಗೆ ಉತ್ತರಿಸಿದ ಎಸ್ಬಿಐ, "ಕೆವೈಸಿ ನಿಯಮಿತ ಮಧ್ಯಂತರದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ನಿಮ್ಮ ಖಾತೆಯು ಕೆವೈಸಿ ಮಾಡಲು ಬಾಕಿಯಿದೆ ಎಂದು ತೋರುತ್ತಿದೆ, ಆದ್ದರಿಂದ ಸಂದೇಶವನ್ನು ನಿಮಗೆ ಫಾರ್ವರ್ಡ್ ಮಾಡಲಾಗಿದೆ. ದಯವಿಟ್ಟು ಶಾಖೆಗೆ ಭೇಟಿ ನೀಡಿ ಮತ್ತು ಖಾತೆಯ ಸುಗಮ ಕಾರ್ಯನಿರ್ವಹಣೆಗಾಗಿ ಕೆವೈಸಿ ವಿವರ ಅಪ್ಡೇಟ್ ಮಾಡಿ" ಎಂದು ಹೇಳಿದೆ.

ಕೆವೈಸಿ ವಿವರ ಅಪ್ಡೇಟ್ ಮಾಡಲು ಸೂಚನೆ
ಮತ್ತೊಬ್ಬ ಎಸ್ಬಿಐ ಗ್ರಾಹಕ ಗೌರವ್ ಅಗರ್ವಾಲ್ ಟ್ವೀಟ್ ಮಾಡಿ, "ಕೆವೈಸಿ ಅವಧಿ ಮೀರಿದ ಕಾರಣ ನನ್ನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಯಾರೂ ನನ್ನನ್ನು ಕೆವೈಸಿಗಾಗಿ ಕೇಳಲಿಲ್ಲ, ಹಾಗಾದರೆ ನನ್ನ ಖಾತೆಯನ್ನು ಸ್ಟಾಪ್ (STOP) ಮೋಡ್ನಲ್ಲಿ ಏಕೆ ಇರಿಸಲಾಗಿದೆ. ಎಸ್ಬಿಐನಲ್ಲಿ ಎಲ್ಲರೂ ಮೂರ್ಖರೇ?" ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಎಸ್ಬಿಐ, "ಆರ್ಬಿಐ ಆದೇಶದ ಪ್ರಕಾರ, ಗ್ರಾಹಕರು ತಮ್ಮ ಕೆವೈಸಿ ಅನ್ನು ನಿಯತಕಾಲಿಕವಾಗಿ ನವೀಕರಿಸುತ್ತಾರೆ. ಆದ್ದರಿಂದ, ಕೆವೈಸಿ ಅಪ್ಡೇಟ್ ಬಾಕಿ ಇರುವ ಗ್ರಾಹಕರಿಗೆ ಹಲವು ಚಾನಲ್ಗಳ ಮೂಲಕ ತಿಳಿಸಲಾಗುತ್ತದೆ" ಎಂದು ಹೇಳಿದೆ.
"ಈ ಅಧಿಸೂಚನೆಯ ಆಧಾರದ ಮೇಲೆ ಒಬ್ಬರು ತಮ್ಮ ಕೆವೈಸಿ ವಿವರ ನವೀಕರಿಸಲು ನಮ್ಮ ಯಾವುದೇ ಶಾಖೆಗಳಿಗೆ ಭೇಟಿ ನೀಡಬಹುದು ಅಥವಾ ಅವರ ಕೆವೈಸಿ ಡಾಕ್ಯುಮೆಂಟ್ಗಳ ನಕಲನ್ನು ನಿಮ್ಮ ನೋಂದಾಯಿತ ಮೇಲ್ ಐಡಿ ಮೂಲಕ (ಕೆವೈಸಿ ವಿವರ ಬದಲಾಗದೆ ಇದ್ದಲ್ಲಿ) ಅವರ ಶಾಖೆಯ ಇಮೇಲ್ ಐಡಿಗೆ ಕಳುಹಿಸಬಹುದು" ಎಂದು ಎಸ್ಬಿಐ ಹೇಳಿದೆ.

ಕೆವೈಸಿ ಕಡ್ಡಾಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್
ಆನ್ಲೈನ್ ವಂಚನೆಗಳ ಹೆಚ್ಚುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರಿಗೆ ಯಾವುದೇ ವಹಿವಾಟುಗಳನ್ನು ನಡೆಸುವ ಹಕ್ಕನ್ನು ನೀಡುವ ಮೊದಲು ಕೆವೈಸಿ ಪ್ರಕ್ರಿಯೆ ಕೈಗೊಳ್ಳಲು ಎಲ್ಲಾ ಬ್ಯಾಂಕ್ಗಳಿಗೆ ಕಡ್ಡಾಯಗೊಳಿಸಿ ಸೂಚನೆ ನೀಡಿದೆ.
ಹೆಚ್ಚಿನ ಅಪಾಯದ ಗ್ರಾಹಕರಿಗೆ ಕನಿಷ್ಠ ಎರಡು ವರ್ಷಗಳಿಗೊಮ್ಮೆ, ಮಧ್ಯಮ ಅಪಾಯದ ಗ್ರಾಹಕರಿಗೆ ಎಂಟು ವರ್ಷಗಳಿಗೊಮ್ಮೆ ಮತ್ತು ಕಡಿಮೆ ಅಪಾಯದ ಗ್ರಾಹಕರಿಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಕೆವೈಸಿ ನವೀಕರಣ ಮಾಡಬೇಕು.

ಕೆವೈಸಿ ಎಂದರೇನು?
ಕೆವೈಸಿ-ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC - Know Your Customer) - ಬ್ಯಾಂಕ್ಗಳು ಗ್ರಾಹಕರ ಗುರುತಿನ ಬಗ್ಗೆ ಮಾಹಿತಿಯನ್ನು ಪಡೆಯುವ ಮೂಲಕ ಅವರ ದೃಢೀಕರಣವನ್ನು ಪರಿಶೀಲಿಸುವ ಒಂದು ಪ್ರಕ್ರಿಯೆಯಾಗಿದೆ. ಗ್ರಾಹಕರು ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆದಾಗ ಅಥವಾ ವಿವಿಧ ಸಾಧನಗಳಲ್ಲಿ ಹೂಡಿಕೆ ಮಾಡುವಾಗ ಕೆವೈಸಿ ಪ್ರಕ್ರಿಯೆ ಪೂರೈಸಬೇಕಾಗುತ್ತದೆ.
ಹೊಸದಾಗಿ ಖಾತೆ ತೆರೆಯುವವರಿಗೆ ಈ ಪ್ರಕ್ರಿಯೆ ಕಡ್ಡಾಯಗೊಳಿಸಲಾಗಿದೆ. ಆದರೆ ಈ ಮೊದಲೇ ಖಾತೆ ಹೊಂದಿರುವವರು ಕೂಡ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಅಗತ್ಯವಿರುವ ದಾಖಲೆಗಳು ಯಾವುವು?
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನೆ ಪರವಾನಗಿ, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್, ನರೇಗಾ ಕಾರ್ಡ್ ಹೊಂದಿರಬೇಕು. ಇದರಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಕಡ್ಡಾಯವಾಗಿದೆ.
ಎಸ್ಬಿಐ ಕೆವೈಸಿ ವಿವರ ನವೀಕರಿಸಲು, ಗ್ರಾಹಕರು ಈ ಹಿಂದೆ ಒದಗಿಸಿದ ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲದಿದ್ದಲ್ಲಿ ಸರಿಯಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ನಿಗದಿತ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಎಸ್ಬಿಐ ಗ್ರಾಹಕರು ಕೆವೈಸಿ ಫಾರ್ಮ್ ಅನ್ನು ತಮ್ಮ ಹತ್ತಿರದ ಶಾಖೆಯಲ್ಲಿ ವೈಯಕ್ತಿಕವಾಗಿ, ಅಂಚೆ ಮೂಲಕ ಅಥವಾ ನೋಂದಾಯಿತ ಇಮೇಲ್ ಐಡಿ ಮೂಲಕ ಸಲ್ಲಿಸಬಹುದು.












Click it and Unblock the Notifications