ಬೆಂಗಳೂರು, ನ. 19: 'ಬೆಂಗಳೂರು ಟೆಕ್ ಶೃಂಗಸಭೆ - 2020'ಕ್ಕೆ ಗುರುವಾರದಂದು ಬೆಳಗ್ಗೆ ಚಾಲನೆ ಸಿಕ್ಕಿದೆ. ಮಧ್ಯಾಹ್ನ 12 ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಉಪಸ್ಥಿತಿ ಮೂಲಕ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ನಂತರ ಜಗತ್ತಿನ ಪ್ರಮುಖ ಸವಾಲುಗಳ ಕುರಿತು ಶೃಂಗಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಮೂರು ದಿನಗಳ ಕಾಲ ಈ ಶೃಂಗಸಭೆ ನಡೆಯಲಿದೆ ಎಂದು ಐಟಿ-ಬಿಟಿ ಸಚಿವ ಡಾ. ಸಿ.ಎನ್ ಅಶ್ವಥ ನಾರಾಯಣ ತಿಳಿಸಿದರು.
ಬೆಂಗಳೂರು ಟೆಕ್ ಶೃಂಗಸಭೆಗೆ ಗುರುವಾರ ಮೋದಿ ಚಾಲನೆ
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಶಾಂಗ್ರಿಲಾ ಹೋಟೆಲ್ ನಲ್ಲಿ ಉದ್ಘಾಟನೆ ಸಮಾರಂಭ ನಡೆಸಲಾಗಿದ್ದು, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್,ಐಟಿ ವಿಷನ್ ಗ್ರೂಪ್ ಚೇರ್ಮನ್ ಕ್ರಿಸ್ ಗೋಪಾಲಕೃಷ್ಣನ್, ಬಯೋಟೆಕ್ನಾಲಜಿ ವಿಷನ್ ಗ್ರೂಪ್ ಚೇರ್ಮನ್ ಕಿರಣ್ ಮಜುಂದಾರ್, ನವೋದ್ಯಮಗಳ ವಿಷನ್ ಗ್ರೂಪ್ ಚೇರ್ಮನ್ ಪ್ರಶಾಂತ್ ಪ್ರಕಾಶ್, ಐಟಿ ಬಿಟಿ ಕಾರ್ಯದರ್ಶಿ ಇ ವಿ ರಮಣರೆಡ್ಡಿ, ಎಸ್ಟಿಪಿಐ ಪ್ರಧಾನ ಕಾರ್ಯದರ್ಶಿ ಓಂಕಾರ್ ರೈ, ಕೆಐಟಿಎಸ್ ನಿರ್ದೇಶಕಿ ಮೀನಾ ನಾಗರಾಜ್, ಎಸ್ಟಿಪಿಐ ನಿರ್ದೇಶಕ ಶೈಲೇಂದ್ರ ಕುಮಾರ್ ತ್ಯಾಗಿ ಮುಂತಾದವರು ಉಪಸ್ಥಿತರಿದ್ದರು.
'ಬೆಂಗಳೂರು ಟೆಕ್ ಶೃಂಗಸಭೆ 2020' ನವೆಂಬರ್ 19 ರಿಂದ 21 ರವರೆಗೆ ನಡೆಯಲಿದೆ. ಇದು 23ನೇ ವರ್ಷದ ತಂತ್ರಜ್ಞಾನ ಶೃಂಗಸಭೆಯಾಗಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್), ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮದ ವಿಷನ್ ಗ್ರೂಪ್, ಭಾರತ ಸಾಫ್ಟ್ವೇರ್ ತಂತ್ರಜ್ಞಾನ ಪಾರ್ಕ್ (ಎಸ್ಟಿಪಿಐ) ಮತ್ತು ಎಂಎಂ ಆಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಶೃಂಗಸಭೆ ಆಯೋಜಿಸಿದೆ.
ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಸ್ವಿಸ್ ಒಕ್ಕೂಟದ ಉಪಾಧ್ಯಕ್ಷ ಗೈ ಪಾರ್ಮೆಲಿನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಗಣ್ಯರು ಭಾಗವಹಿಸಲಿದ್ದಾರೆ. ಉದ್ಯಮದ ನಾಯಕರು, ತಂತ್ರಜ್ಞರು, ಸಂಶೋಧಕರು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಭಾರತ ಮತ್ತು ಜಗತ್ತಿನ ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಈ ವರ್ಷದ ಶೃಂಗಸಭೆ ವಿಷಯ 'Next is Now'. 'ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್' ಹಾಗೂ 'ಜೈವಿಕ ತಂತ್ರಜ್ಞಾನ' ಕ್ಷೇತ್ರಗಳಲ್ಲಿ ಪ್ರಮುಖ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳ ಪರಿಣಾಮ ಕುರಿತು ಶೃಂಗಸಭೆಯು ಚರ್ಚೆ ನಡೆಸಲಿದೆ. Next is Now ಅಡಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ಆಯ್ದ ಸ್ಟಾರ್ ಅಪ್ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಅಶ್ವಥ ನಾರಾಯಣ ಹೇಳಿದರು.
RECOMMENDED STORIES