ಆಯುರ್ವೇದ ಔಷಧದ ಮೇಲಿನ ಜಿಎಸ್ ಟಿ ಕೈಬಿಡಲು 'ಪತಂಜಲಿ' ಮನವಿ
ಎಲ್ಲ ವಿಧದ ಆಯುರ್ವೇದ ಔಷಧಗಳನ್ನು ಜಿಎಸ್ ಟಿಯ ಶೂನ್ಯ ಸ್ಲ್ಯಾಬ್ ಗೆ ತರಬೇಕು ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಸಂಸ್ಥೆಯು ಕೇಂದ್ರ ಸರಕಾರವನ್ನು ಕೇಳಿಕೊಂಡಿದೆ. ಸದ್ಯಕ್ಕೆ ಬ್ರ್ಯಾಂಡ್ ರಹಿತವಾದ ಆಯುರ್ವೇದ ಉತ್ಪನ್ನಗಳಿಗೆ ಶೇ 5 ಹಾಗೂ ಬ್ರ್ಯಾಂಡೆಡ್ ಆಯುರ್ವೇದ ವಸ್ತುಗಳಿಗೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಕಳೆದ ಅಕ್ಟೋಬರ್ ನಲ್ಲಿ ಬ್ರ್ಯಾಂಡ್ ರಹಿತವಾದ ಆಯುರ್ವೇದ ವಸ್ತುಗಳ ಮೇಲಿನ ತೆರಿಗೆಯನ್ನು ಸರಕಾರವು ಶೇ 12ರಿಂದ ಶೇ 5ಕ್ಕೆ ಇಳಿಸಿತ್ತು. ಅಂದರೆ ತೆರಿಗೆ ಇಳಿಕೆಯ ಲಾಭ ದೊರೆಯುವುದು ತಯಾರಿಸಿದ ಸಂಸ್ಥೆಯ ಹೆಸರು, ಲೋಗೋ, ಬಣ್ಣ ಯಾವುದನ್ನೂ ಹಾಕದಿದ್ದಾಗ ಮಾತ್ರ.

ಆದರೆ, ಈ ಯಾವ ವಿವರವೂ ಇಲ್ಲದೆ ಮಾರುಕಟ್ಟೆಗೆ ಔಷಧಿಯನ್ನು ಬಿಡುಗಡೆಯೇ ಮಾಡುವಂತಿಲ್ಲ. ಹಾಗೆ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇಂಥ ಔಷಧ ತಯಾರಿಕರಿಗೆ ಭಾರೀ ದಂಡ ವಿಧಿಸಬಹುದು. ಇದರರ್ಥ ಏನೆಂದರೆ, ಆಯುರ್ವೇದಿಕ್ ಔಷಧಿಯನ್ನು ಸಂಘಟಿತ ಜಾಲದ ಮೂಲಕವೇ ಮಾರಾಟ ಮಾಡಬೇಕು ಮತ್ತು ಅದಕ್ಕಾಗಿ ಜಿಎಸ್ ಟಿ ಶೇ 12ರಷ್ಟು ಪಾವತಿಸಬೇಕು.
"ಬ್ರ್ಯಾಂಡ್ ರಹಿತ ಆಯುರ್ವೇದ ಔಷಧ ಎಂದರೇನು? ಜನರ ಆರೋಗ್ಯದ ಬಗ್ಗೆ ನಿಗಾ ಹಾಗೂ ಕಾಯಿಲೆಗೆ ಪರಿಹಾರ ನೀಡುವುದೇ ಆಯುರ್ವೇದ. ಬ್ರ್ಯಾಂಡ್ ರಹಿತ ಅಂದರೆ ಏನು ಬೇಕಾದರೂ ಹಾಕಬಹುದು ಮತ್ತು ಮಾರಬಹುದು ಅಂತಲೇ? ಉತ್ತರದಾಯಿತ್ವ ಬೇಡವಾ? ಆದರೆ ನಾವು ಉತ್ತರದಾಯಿತ್ವ ತೆಗೆದುಕೊಳ್ತೀವಿ ಅಂದರೆ ಜಿಎಸ್ ಟಿ ಶೇ 12ರಷ್ಟು ಪಾವತಿಸಬೇಕು" ಎಂದು ಪತಂಜಲಿ ಸಂಸ್ಥೆ ವಕ್ತಾರ ಎಸ್.ಕೆ.ತಿಜುರ್ ವಾಲಾ ಹೇಳಿದ್ದಾರೆ.
ಆಯುರ್ವೇದಕ್ಕೆ ಹಾಕಿದ ತೆರಿಗೆಯನ್ನು ಇಳಿಸಿದರೆ ಇದು ದೇಶದ ಮನೆಮನೆಗೂ ತಲುಪುತ್ತದೆ. ಮತ್ತು ಇದು ಔಷಧವಾದ್ದರಿಂದ ಜಿಎಸ್ ಟಿಯಲ್ಲಿ ಇದಕ್ಕೆ ತೆರಿಗೆ ಹಾಕುವುದನ್ನು ಕೈ ಬಿಡಬೇಕು ಎಂದು ಅವರು ಹೇಳಿದ್ದಾರೆ.












Click it and Unblock the Notifications