3,500 ಕೋಟಿ ಕಪ್ಪು ಹಣ ದೇಶಕ್ಕೆ ವಾಪಸ್ ಬಂದಿದೆ!
ನವದೆಹಲಿ, ಫೆ. 13: ಲೋಕಸಭೆ ಚುನಾವಣೆಗೆ ಮೊದಲು ನರೇಂದ್ರ ಮೋದಿ ಅವರು ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವುದಾಗಿ ತಿಳಿಸಿದ್ದರು. ಸರ್ಕಾರ ಬಂದ ಮೇಲೆ ಈ ಕುರಿತು ಯೋಚಿಸುತ್ತಲೇ ಇಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.
ಆದರೆ, ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ದಳ ಈಗಾಗಲೇ 3,500 ಕೋಟಿ ರು. ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತಂದಿದೆ. ಅಲ್ಲದೆ, ಸ್ವಿಸ್ ಬ್ಯಾಂಕ್ನಲ್ಲಿ 300 ಭಾರತೀಯರು ಹೊಂದಿರುವ 10,000 ಕೋಟಿ ರು.ಗಳನ್ನು ವಾಪಸ್ ಪಡೆಯುವಂತೆ ವಿಶೇಷ ತನಿಖಾ ದಳವು ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ. [500 ಬಿಲಿಯನ್ ಡಾಲರ್ ವಾಪಸ್ ತರೋದು ಹೇಗೆ?]
ಈ ಕುರಿತು ಸಿಟ್ ಉಪಾಧ್ಯಕ್ಷರಾದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮಾಹಿತಿ ನೀಡಿದ್ದಾರೆ. "ಹೌದು, ವಿಶೇಷ ತನಿಖಾ ದಳದ ನೇತೃತ್ವದಲ್ಲಿ ಆದಾಯ ತೆರಿಗೆ ಇಲಾಖೆಯು ಈಗಾಗಲೇ 3,500 ಕೋಟಿ ರು.ಗಳನ್ನು ಖಾತೆದಾರರಿಂದ ವಾಪಸ್ ಪಡೆದಿದೆ. ಇವೆಲ್ಲ ಹಳೆ ಖಾತೆಯದ್ದು. ಮಾರ್ಚ್ 31ರೊಳಗೆ ಈ ಪ್ರಕ್ರಿಯೆ ಮುಗಿಯುವ ನಿರೀಕ್ಷೆಯಿದೆ. ಇನ್ನೂ 6,500 ಕೋಟಿ ರು. ವಾಪಸ್ ತರುವ ನಂಬಿಕೆ ಇದೆ" ಎಂದು ತಿಳಿಸಿದ್ದಾರೆ. [ಸ್ವಿಸ್ ಲೀಕ್ ಪಟ್ಟಿಯಲ್ಲಿ 100 ವಂಚಕರು]
"ಕಪ್ಪು ಹಣದಲ್ಲಿ 10 ಸಾವಿರ ಕೋಟಿ ರು. ಅತ್ಯಂತ ಕಡಿಮೆ ಮೊತ್ತ ಎಂಬುದು ನಿಜ. ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಕಪ್ಪು ಹಣದ ಕುರಿತು ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ. ಸ್ವಿಸ್ ಬ್ಯಾಂಕ್ನಲ್ಲಿ 628 ಭಾರತೀಯರು ಹೊಂದಿರುವ ಖಾತೆಗಳು ಅಧಿಕೃತವಾಗಿರುವ ಕಾರಣ ಈ ಹಣ ವಾಪಸ್ ತರಲು ಸಾಧ್ಯವಾಗುತ್ತಿಲ್ಲ. ಇನ್ನುಳಿದ ಮೊತ್ತ ವಾಪಸ್ ತರಲು ಇನ್ನಷ್ಟು ಸಮಯ ಹಿಡಿಯುತ್ತದೆ" ಎಂದು ಹೇಳಿದ್ದಾರೆ. [ಕಾಳ ಧನಿಕರ ವಿರುದ್ಧ ಕ್ರಮ ಅಸಾಧ್ಯ?]
ತಪ್ಪು ಇನ್ವೈಸ್ ಮಾಡುವ ಮೂಲಕ ತೆರಿಗೆ ವಂಚಿಸಿ ಒಯ್ದ 15,000 ಕೋಟಿ ರು.ಗಳನ್ನು ಗುರುತಿಸಲಾಗಿದೆ. ಸಿಟ್ ಮೇಲ್ವಿಚಾರಣೆಯಡಿ ಸೀಮಾಸುಂಕ ಹಾಗೂ ಅಬಕಾರಿ ಇಲಾಖೆಯ ವಾಪಸ್ ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿದೇಶದಲ್ಲಿರುವ ಆಮದು ಹಾಗೂ ರಫ್ತು ದಾಖಲೆಗಳನ್ನು ಭಾರತದಲ್ಲಿಯೂ ಪರಿಶೀಲನೆಗೆ ಒಳಪಡಿಸಬೇಕೆಂದು ಸಲಹೆ ನೀಡಲಾಗಿದೆ ಎಂದು ತಿಳಿಸಿದರು. [ಕಪ್ಪು ಹಣ ಹೊರಹೋಗೋದು ನಿಲ್ಲಿಸಿ]
ಜೊತೆಗೆ ಪಶ್ಚಿಮ ಬಂಗಾಳ, ಓಡಿಶಾ ಹಾಗೂ ಆಂಧ್ರ ಪ್ರದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಚಿಟ್ ಫಂಡ್ ಹಾಗೂ ಇತರ ಅಪರಾಧಗಳಿಗೆ ಸಂಬಂಧಿಸಿದಂತೆ 4,000 ಕೋಟಿ ರು. ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿದೆ.