ಏನಿದು ತುಮಕೂರಿನ ಮೆಗಾ ಫುಡ್ಪಾರ್ಕ್?
ಬೆಂಗಳೂರು, ಸೆ. 23 : ತುಮಕೂರು ನಗರದ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಫುಡ್ ಪಾರ್ಕ್ಅನ್ನು ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸುಮಾರು 110 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಪಾರ್ಕ್ ಅನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿದ್ದು, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ ವಿವಿಧ ಹಂತಗಳಲ್ಲಿ ಸಹಾಯಧನವನ್ನು ನೀಡಿದೆ.
11ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಯುಪಿಎ ಸರ್ಕಾರ ದೇಶದಲ್ಲಿ 30 ಫುಡ್ ಪಾರ್ಕ್ಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿತ್ತು. ಮೊದಲ ಹಂತದಲ್ಲಿ ದೇಶದ ವಿವಿಧ ಭಾಗಗಳಲ್ಲಿ 10 ಪಾರ್ಕ್ಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಲ್ಲಿ ತುಮಕೂರಿನ ಇಂಡಿಯಾ ಫುಡ್ ಪಾರ್ಕ್ ಕಾರ್ಯಾರಂಭ ಮಾಡುತ್ತಿದ್ದು, ಉಳಿದ 9 ಪಾರ್ಕ್ಗಳ ಕಾಮಗಾರಿ ಇನ್ನೂ ನಡೆಯುತ್ತಿದೆ.
ಕೇಂದ್ರ ಸರ್ಕಾರ ಆಹಾರ ಸಂಸ್ಕರಣಾ ಯೋಜನೆಯಡಿ ಈ ಫುಡ್ ಪಾರ್ಕ್ಗೆ ಸಹಾಯಧನ ನೀಡುತ್ತದೆ. ಆರಂಭಿಕವಾಗಿ ಸುಮಾರು 250 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ವಿವಿಧ ಹಂತಗಳಲ್ಲಿ ಸಹಾಯಧನಗಳನ್ನು ಪಾರ್ಕ್ಗೆ ನೀಡಲಿದೆ. ಮುಂದಿನ ದಿನಗಳಲ್ಲಿ 1 ಸಾವಿರ ಕೋಟಿ ಹೂಡಿಕೆ ಮಾಡುವ ನಿರೀಕ್ಷೆ ಇದ್ದು, ಇದರಿಂದ ನೇರವಾಗಿ, ಪರೋಕ್ಷವಾಗಿ 10 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. [ಮೋದಿ ಕರ್ನಾಟಕ ಭೇಟಿ ವೇಳಾಪಟ್ಟಿ]
ತುಮಕೂರಿನಲ್ಲಿ ನಿರ್ಮಾಣವಾಗಿರುವ ಈ ಪಾರ್ಕ್ ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ 12 ಜಿಲ್ಲೆಗಳಿಗೆ ಇದು ಸಹಾಯಕವಾಗಲಿದೆ. ಬಹುಬೇಗ ಹಾಳಾಗುವ ಹಣ್ಣು, ತರಕಾರಿಗಳನ್ನು ಸಂಸ್ಕರಣೆ ಮಾಡುವುದು ಮತ್ತು ಅವುಗಳಿಂದ ಉಪ ಉತ್ಪನ್ನಗಳನ್ನು ತಯಾರಿಸುವುದು ಪಾರ್ಕ್ ನಿರ್ಮಾಣದ ಪ್ರಮುಖ ಉದ್ದೇಶವಾಗಿದೆ. ರೈತರಿಗೆ ಅಗತ್ಯ ತಾಂತ್ರಿಕ ತರಬೇತಿ ನೀಡುವುದು, ಕೃಷಿ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ಪಾರ್ಕ್ ಮಾಡಲಿದೆ.
ರೈತರಿಂದ ಹಣ್ಣು, ತರಕಾರಿ ಖರೀದಿ : ಈ ಫುಡ್ಪಾರ್ಕ್ಗಾಗಿ ರಾಜ್ಯದ 12 ಜಿಲ್ಲೆಗಳ ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಪ್ರಾಥಮಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಅಲ್ಲಿ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಜಿಲ್ಲೆಗಳಿಂದ ಈ ಘಟಕಕ್ಕೆ ಹಣ್ಣು ಮತ್ತು ತರಕಾರಿಗಳು ಐದು ಗಂಟೆಯ ಅವಧಿಯೊಳಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಪ್ಯೂಚರ್ ಗ್ರೂಪ್ ಎಸ್ಪಿವಿ : ದೇಶದ ಖ್ಯಾತ ಉದ್ಯಮವಾದ ಪ್ಯೂಚರ್ ಗ್ರೂಪ್ನ ಘಟಕವಿದಾಗಿದ್ದು, ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ದೇಶಾದ್ಯಂತವಿರುವ ಬಿಗ್ ಬಜಾರ್, ಫುಡ್ ಬಜಾರ್ ಮುಂತಾದವುಗಳಿಗೆ ಸರಬರಾಜು ಮಾಡಲಾಗುತ್ತದೆ. ಈ ಫುಡ್ ಪಾರ್ಕ್ಗೆ ಕೋಲಾರದಿಂದ ಪ್ರತಿದಿನ 6 ಮೆಗಾವ್ಯಾಟ್ ವಿದ್ಯುತ್ ತಡೆ ರಹಿತವಾಗಿ ಪೂರೈಕೆಯಾಗುತ್ತದೆ.
ಯಾವ ಜಿಲ್ಲೆಗಳಿಂದ ಸಂಗ್ರಹ : ಈ ಫುಡ್ಪಾರ್ಕ್ಗಾಗಿ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿ ಮಾಡಲಾಗುತ್ತದೆ. ಹಣ್ಣು ಮತ್ತು ತಕರಾರಿಗಳನ್ನು ಸಂರಕ್ಷಿಸಿ ಇಡಬಹುದಾದ ಬೃಹತ್ ಫ್ರೀಜರ್ ಈ ಘಟಕದಲ್ಲಿದ್ದು ಸುಮಾರು 250 ಟನ್ ಗಳಷ್ಟು ಹಣ್ಣು ಮತ್ತು ತರಕಾರಿ ಸಂರಕ್ಷಿಸಬಹುದು.
ರೆಡಿ ಟು ಈಟ್ ಫುಡ್ ತಯಾರಿ : ವಸಂತನರಸಾಪುರದ ಈ ಘಟಕದಲ್ಲಿ ರೆಡಿ ಟು ಈಟ್ ಆಹಾರಗಳನ್ನು ತಯಾರಿಸಲಾಗುತ್ತದೆ. ಪ್ರತಿದಿನ 6-7ಟನ್ ಸಮೋಸ, ಚಪಾತಿ, ಗಿಣ್ಣು ಇಲ್ಲಿ ತಯಾರಾಗಲಿದೆ. ದಿನದ 24 ಗಂಟೆಯೂ ಈ ಘಟಕ ಕಾರ್ಯನಿರ್ವಹಿಸಲಿದೆ. ಹಣ್ಣು ಮತ್ತು ತರಕಾರಿಯನ್ನು ಫ್ಯಾಕ್ಟರಿಯ ಹೊರಭಾಗದಲ್ಲಿ ತುಂಬಿದರೆ ಸಾಕು, ಅದು ತೊಳೆದು ಉತ್ತಮ ಹಣ್ಣು ಬೇರ್ಪಟ್ಟು ಒಂದು ಕಡೆ ಸಂಗ್ರಹವಾಗುತ್ತದೆ. ತರಕಾರಿಗಳನ್ನು ಕತ್ತರಿಸಲು ಸಹ ಅತ್ಯಾಧುನಿಕ ಉಪಕರಣಗಳನ್ನು ಇಲ್ಲಿ ಬಳಸಲಾಗುತ್ತದೆ.
ಪಲ್ಪಿಂಗ್ ಘಟಕ : ಮಾವು, ಬಾಳೆ, ಟೊಮೆಟೋ, ತೊಂಡೆಕಾಯಿಯಿಂದ ಪಲ್ಪ್ ತಿರುಳು ತೆಗೆಯುವುದು ಈ ಫುಡ್ಪಾರ್ಕ್ ಪ್ರಮುಖ ಆಕರ್ಷಣೆಯಾಗಿದೆ. ಒಂದು ಗಂಟೆಗೆ 10 ಟನ್ ಮಾವಿನ ಹಣ್ಣು, 6 ಟನ್ ಪಪ್ಪಾಯಿ, 6 ಟನ್ ಟೊಮೆಟೋ, 6 ಟನ್ ಬಾಳೆಹಣ್ಣಿನ ರಸ ತೆಗೆಯಬಹುದಾದ ವ್ಯವಸ್ಥೆ ಇಲ್ಲಿದೆ. ಮಾವಿನ ಕಾಯಿಯನ್ನು ಹಣ್ಣು ಮಾಡುವ ಘಟಕಗಳು ಇಲ್ಲಿದ್ದು, ಒಂದೊಂದು ಛೇಂಬರ್ನಲ್ಲಿ 50 ಟನ್ ಸಂಗ್ರಹ ಮಾಡಬಹುದಾಗಿದೆ. ಒಟ್ಟು 300 ಟನ್ ಸಂಗ್ರಹಣೆ ಮಾಡಬಹುದಾಗಿದೆ.