ಆರ್ಥಿಕ ಸ್ಥಿತಿ ನಿಧಾನವಾಗಲಿದೆ : ಅರವಿಂದ್ ಸುಬ್ರಮಣಿಯನ್ ಎಚ್ಚರಿಕೆ
ನವದೆಹಲಿ, ಡಿಸೆಂಬರ್ 10 : ಭಾರತದ ಕೃಷಿ ಮತ್ತು ಹಣಕಾಸು ಕ್ಷೇತ್ರ ತೀವ್ರ ಒತ್ತಡದಲ್ಲಿರುವುದರಿಂದ ಭಾರತದ ಆರ್ಥಿಕತೆ ನಿಧಾನವಾಗಲಿದೆ ಎಂದು ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಎಚ್ಚರಿಸಿದ್ದಾರೆ.
'ಆಫ್ ಕೌನ್ಸೆಲ್ : ದಿ ಚಾಲೆಂಜಸ್ ಆಫ್ ಮೋದಿ-ಜೇಟ್ಲಿ ಎಕಾನಮಿ' ಎಂಬ ತಮ್ಮ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಅಪನಗದೀಕರಣ ಮತ್ತು ಸರಕು ಮತ್ತು ಸೇವೆ ತೆರಿಗೆ ಹೇರಿಕೆಯಿಂದಾಗಿ ಆರ್ಥಿಕತೆಗೆ ಹೊಡೆತ ಬಿದ್ದಿದೆ ಮತ್ತು ಜಿಎಸ್ಟಿಯಿಂದ ತೆರಿಗೆ ಸಂಗ್ರಹ ಅಂದುಕೊಂಡಷ್ಟು ಆಗಿಲ್ಲ ಎಂದು ವ್ಯಾಖ್ಯಾನಿಸಿದರು.
ಜಿಎಸ್ಟಿ ಬಗ್ಗೆ ಬಜೆಟ್ ನಲ್ಲಿ ಇದ್ದ ಆಗ್ರಹಗಳು ಖಂಡಿತ ಸಮರ್ಥನೀಯವಾಗಿರಲಿಲ್ಲ. ಆ ಡಿಮ್ಯಾಂಡ್ ಆಧಾರದ ಮೇಲೆ ಜಿಎಸ್ಟಿಯನ್ನು ಅಳೆಯುವುದು ಕೂಡ ಅಷ್ಟ ಸಮಂಜಸವಲ್ಲ. ಬಜೆಟ್ಟಿನಲ್ಲಿ ಜಿಎಸ್ಟಿಯಿಂದ ಶೇ.16-17ರಷ್ಟು ತೆರಿಗೆ ಏರಿಕೆಯಾಗಬೇಕು ಎಂಬುದು ವಿವೇಕದ ನಡೆಯಾಗಿರಲಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಜಿಎಸ್ಟಿ ಡಿಸೈನ್ ಇನ್ನೂ ಚೆನ್ನಾಗಿರಬೇಕಿತ್ತು. ಇನ್ನು ಮುಂದಾದರೂ ಮೂರು ಸ್ಲಾಬ್ ಗಳಿಗಿಂತ ಹೆಚ್ಚಿನ ಸ್ಲಾಬ್ ನಲ್ಲಿ ತೆರಿಗೆ ಸಂಗ್ರಹ ಆಗಬಾರದು. ಈಗಿನ ಶೇ.5, ಶೇ.12, ಶೇ.18 ಮತ್ತು ಶೇ.28ರ ಸ್ಲಾಬ್ ಸರಿಯಾಗಿಲ್ಲ ಎಂದು ಅರವಿಂದ್ ಸುಬ್ರಮಣಿಯನ್ ಅವರು ಅಭಿಪ್ರಾಯ ಮಂಡಿಸಿದ್ದಾರೆ.
ನಾನು ಭಾರತದ ಆರ್ಥಿಕತೆ ನಿಧಾನವಾಗುತ್ತದೆ ಎಂದು ಹೇಳಿರುವುದಕ್ಕೆ ಕೂಡ ಹಲವಾರು ಕಾರಣಗಳಿವೆ. ಮೊದಲನೆಯದಾಗಿ, ಭಾರತದ ಹಣಕಾಸು ವ್ಯವಸ್ಥೆಯೇ ತೀವ್ರ ಒತ್ತಡಲ್ಲಿದೆ, ಭಾರತದ ಹಣಕಾಸಿನ ಸ್ಥಿತಿ ಬಿಗಿಯಾಗಿದೆ. ಇದು ತ್ವರಿತಗತಿಯ ಬೆಳವಣಿಗೆಗೆ ಪೂರಕವಾಗಿಲ್ಲ ಎಂದು ಮಾಜಿ ಆರ್ಥಿಕ ಸಲಹೆಗಾರ ವಿವರಿಸಿದರು.
ಯುರೋಪ್ ಆರ್ಥಿಕತೆ ನಿಧಾನವಾಗುತ್ತಿದೆ, ಜಪಾನ್ ನ ಆರ್ಥಿಕ ಸ್ಥಿತಿ ಕೂಡ ನಿಧಾನವಾಗಿ ಸಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಭಾರೀ ಪ್ರಮಾಣದಲ್ಲಿ ಆರ್ಥಿಕ ಅಭಿವೃದ್ಧಿಯಾಗಲೆಂದು ಸುಧಾರಣೆಯನ್ನು ಹೇರಲು ಯತ್ನಿಸುವುದು ಮಹತ್ವಾಕಾಂಕ್ಷೆಯ ನಡೆಯಾಗಲಿದೆ. ಈ ಎಲ್ಲ ಕಾರಣಗಳಿಂದಾಗಿ ಆರ್ಥಿಕತೆ ನಿಧಾನವಾಗಲಿದೆ ಎಂದು ಹೇಳಿದ್ದು. ಜಾಗತಿಕ ಮಾರುಕಟ್ಟೆ ಯಾವ ರೀತಿ ಸ್ಪಂದಿಸುತ್ತಿದೆ ಎಂಬುದನ್ನು ನೋಡಿಕೊಂಡು ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ರಿಸರ್ವ್ ಬ್ಯಾಂಕ್ ಬಳಿಯಿರುವ ಹೆಚ್ಚುವರಿ ಬಂಡವಾಳವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಪುನರುಜ್ಜೀವನಗೊಳಿಸಲು ಬಳಸಬೇಕೇ ಹೊರತು, ಕೇಂದ್ರ ಸರಕಾರದ ಆರ್ಥಿಕ ಕೊರತೆಯನ್ನು ನೀಗಿಸಲು ಅಲ್ಲ ಎಂದು ಖಚಿತವಾಗಿ ನುಡಿದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ತಂದಾಗ ಮಾತ್ರ ಪುನರುಜ್ಜೀವನ ಸಾಧ್ಯ. ಇದರ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದರು.












Click it and Unblock the Notifications