ಖರಗ್ಪುರ ಐಐಟಿಯಲ್ಲಿ ಗೂಗಲ್ ಮುಖ್ಯಸ್ಥರ 'ಸುಂದರ' ಫ್ಲಾಷ್ ಬ್ಯಾಕ್
ಜಗತ್ತಿನ ದೈತ್ಯ ಕಂಪನಿಯಾದ ಗೂಗಲ್ ಅಂತರ್ಜಾಲ ಸೇವಾ ಸಂಸ್ಥೆಯ ಮುಖ್ಯಸ್ಥ, ಭಾರತೀಯ ಮೂಲದ ಸುಂದರ್ ಪಿಚಯ್ ಸದ್ಯಕ್ಕೆ ಭಾರತ ಪ್ರವಾಸದಲ್ಲಿದ್ದಾರೆ. ಮಧ್ಯಮ, ಸಣ್ಣ ಕಂಪನಿಗಳ ಬೆಳವಣಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಅವರು, ಭಾರತ ಸರ್ಕಾರದೊಂದಿಗೆ ಆ ಬಗ್ಗೆ ಮಾತುಕತೆಯಲ್ಲಿ ನಡೆಸುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೇ ಅವರು ಜ. 5ರಂದು ತಾವು ಇಂಜಿನಿಯರಿಂಗ್ ಪದವಿ ಮುಗಿಸಿದ ಪ್ರತಿಷ್ಠಿತ ಖರಗ್ಪುರ ಐಐಟಿ ಕಾಲೇಜು ಕ್ಯಾಂಪಸ್ ಗೆ ಭೇಟಿ ನೀಡಿದ್ದರು. ಅಲ್ಲಿನ ವಿದ್ಯಾರ್ಥಿಗಳ ಜತೆ ತಾವು ವರ್ಷಗಳ ಹಿಂದೆ ಅದೇ ಕ್ಯಾಂಪಸ್ಸಿನಲ್ಲಿ ಕಳೆದ ಮಧುರ ನೆನಪುಗಳನ್ನು ಹಂಚಿಕೊಂಡ ಅವರು, ತಮ್ಮ ಕೆಲವಾರು ಸ್ವಾರಸ್ಯಕರ ನೆನಪುಗಳನ್ನು ಹಂಚಿಕೊಂಡರು.
ಮೂಲತಃ ತಮಿಳುನಾಡಿನ ಮಧುರೈನವರಾದ ಪಿಚಯ್, ಇದೇ ಐಐಟಿಯಲ್ಲಿ ಇಂಜಿನಿಯರಿಂಗ ಪದವಿ ಮುಗಿಸಿ 2004ರಲ್ಲಿ ಗೂಗಲ್ ಸೇರಿಕೊಂಡಿದ್ದರು. ತಮ್ಮ ಪ್ರತಿಭೆ, ತಾಳ್ಮೆ, ಪರಿಶ್ರಮಗಳಿಂದ ಹಂತ ಹಂತವಾಗಿ ಮೇಲೇರಿದ ಅವರು 2015ರ ಅಕ್ಟೋಬರ್ 24ರಂದು ಗೂಗಲ್ ಕಂಪನಿಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಪತ್ನಿ ಅಂಜಲಿ ಮೀಟ್ ಮಾಡಿದ್ದು ಇಲ್ಲೇ
ತಮ್ಮ ಪತ್ನಿ ಅಂಜಲಿ ಅವರನ್ನು ಇದೇ ಕ್ಯಾಂಪಸ್ಸಿನಲ್ಲಿ ಭೇಟಿ ಮಾಡಿದ್ದನ್ನು ಸ್ಮರಿಸಿಕೊಂಡ ಪಿಚಯ್, ಅವರು ತಮ್ಮ ಕ್ಲಾಸ್ ಮೇಟ್ ಆಗಿದ್ದರೆಂದು ಹೇಳಿದರು. ಪ್ರೇಮಾಂಕರ ಆದ ನಂತರ, ಅವರನ್ನು ಮೀಟ್ ಮಾಡಲು ಪಡುತ್ತಿದ್ದ ಕಷ್ಟ ನೆನಪಿಸಿಕೊಂಡರು.

ಲೇಡೀಸ್ ಹಾಸ್ಟೆಲ್ ಕಥೆ
ಅಂಜಲಿಯವರನ್ನು ಕಾಣಬೇಕೆಂದಾದರೆ ಅವರು ಇದ್ದ ಲೇಡೀಸ್ ಹಾಸ್ಟೆಲ್ ಬಳಿಯೇ ಹೋಗಬೇಕಿತ್ತಂತೆ ಪಿಚಾಯ್. ಅವರ ಗೆಳತಿಯರಲ್ಲಿ ಯಾರನ್ನಾದರೂ ಕರೆದು ಅಂಜಲಿಯನ್ನು ಕಾಣಬೇಕೆಂದು ಕೋರುತ್ತಿದ್ದಾಗ ಇವರಿಗೆ ಮುಜುಗರವಾಗುತ್ತಿತ್ತಂತೆ.

ಮುಜುಗರದ ಪ್ರಸಂಗಗಳು
ಲೇಡೀಸ್ ಹಾಸ್ಟೆಲ್ ಬಳಿ ನಿಂತು ಆಕೆಯ ಗೆಳತಿಯರಿಗೆ ಅಂಜಲಿಯನ್ನು ಕರೆಯಿರಿ ಎಂದರೆ ಕೆಲವರಂತೂ ಜೋರಾಗಿ ಕೂಡಿ "ಅಂಜಲಿ, ಸುಂದರ್ ಬಂದಿದ್ದಾರೆ ನೋಡು'' ಎನ್ನುತ್ತಿದ್ದರಂತೆ. ಆಗಂತೂ ಸುಂದರ್ ಗೆ ಸಿಕ್ಕಾಪಟ್ಟೆ ಮುಜುಗರವಾಗುತ್ತಿತ್ತಂತೆ.

'ಅಬೇ ಸಾಲೆ' ಅನ್ನೋದು ವೆಲ್ ಕಂ ನೋಟ್!
ಚೆನ್ನೈನಿಂದ ಬಂದ ಸುಂದರ್ ಗೆ ಹಿಂದಿ ಅಷ್ಟಾಗಿ ಬರುತ್ತಿರಲಿಲ್ಲವಂತೆ. ಅವರು ಐಐಟಿಗೆ ಸೇರಿದಾಗ ಅಲ್ಲಿನ ಸೀನಿಯರ್ಸ್ ಅವರನ್ನು 'ಅಬೇ ಸಾಲೇ' ಎಂದೇ ಕರೆಯುತ್ತಿದ್ದರಂತೆ. ಹೆಸರು ಗೊತ್ತಿಲ್ಲದಿದ್ದರೆ ಹೀಗೆ ಕರೀಬೇಕು ಅಂದ್ಕೊಂಡಿದ್ರಂತೆ ಸುಂದರ್.

ಅಬೇ ಸಾಲೇ ಅಂದ್ರೆ ಸುಮ್ಮೇ ಇರ್ತಾರಾ
ಹೆಸರು ತಿಳಿಯದವರನ್ನು 'ಅಬೇ ಸಾಲೇ' ಅಂತಲೇ ಕರೀಬೇಕು ಅಂದುಕೊಂಡಿದ್ದ ಸುಂದರ್, ಅದೊಂದು ದಿನ ಊಟದ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಹಿರಿಯರಿಗೆ 'ಅಬೇ ಸಾಲೇ' ಅಂತ ಅಂದುಬಿಟ್ಟರಂತೆ. ಅಷ್ಟೇ. ಅದು ಮುನಿಸಿಗೆ ಕಾರಣವಾಗಿ ಮೆಸ್ ಒಂದು ವಾರ ಕ್ಲೋಸ್ ಆಗಿತ್ತಂತೆ!

ಮೊದಲ ಮೂರೂ ಸಂದರ್ಶನ ಕಳಪೆ!
2004ರಲ್ಲಿ ಗೂಗಲ್ ನಲ್ಲಿ ಕೆಲಸಕ್ಕಾಗಿ ನಡೆದ ಸುಂದರ್ ಅವರ ಮೊದಲ ಮೂರು ಇಂಟರ್ ವ್ಯೂಗಳೂ ಸರಿಯಾಗಿ ಆಗಿರಲಿಲ್ಲವಂತೆ. ಆಗಷ್ಟೇ ಗೂಗಲ್ ನ ಜಿ- ಮೇಲ್ ಪರಿಚಯವಾಗಿದ್ದರಿಂದ ಸಂದರ್ಶನಕಾರರು ಅದರ ಬಗ್ಗೆಯೇ ಪ್ರಶ್ನೆ ಕೇಳಿದ್ದರಂತೆ. ಹಾಗಾಗಿ, ಸುಂದರ್ ತಡಬಡಾಯಿಸಿದ್ದರಂತೆ.

ನಾಲ್ಕು, ಐದನೇ ಸಂದರ್ಶನದಲ್ಲಿ ಗೆಲವು
ಗೂಗಲ್ ಸಂದರ್ಶದ 4ನೇ ಸುತ್ತಿನಲ್ಲಿ ಗೂಗಲ್ ಅಧಿಕಾರಿಯೊಬ್ಬರು ನೀವು ಜಿ ಮೇಲ್ ಉಪಯೋಗಿಸಿಲ್ಲವೇ ಎಂದಾಗ ಸುಂದರ್ ಇಲ್ಲ ಎಂದಿದ್ದರು. ಆಗ, ಆ ಅಧಿಕಾರಿ ಜಿ- ಮೇಲ್ ತೋರಿಸಿದರಂತೆ. ಆಗ ಆ ಬಗ್ಗೆ ತಿಳಿದ ಸುಂದರ್ ಐದನೇ ಸುತ್ತಿನ ಸಂದರ್ಶನ ಸರಾಗವಾಗಿ ಮಾಡಿದರಂತೆ.

ಇನ್ಫಿ ಮೂರ್ತಿಯೇ ಪ್ರೇರಣೆ
ಅಂದಹಾಗೆ, ಪಿಚಾಯ್ ಅವರಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರೇ ಪ್ರೇರಣೆಯಂತೆ. ಅವರ ಜೀವನದಿಂದ ತಾವು ಬಹುಮಟ್ಟಿಗೆ ಸ್ಫೂರ್ತಿಗೊಂಡಿದ್ದಾಗಿ ಅವರು ಸಂವಾದದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ತೆಂಡೂಲ್ಕರ್, ದೀಪಿಕಾ ಅಂದ್ರೆ ಇಷ್ಟ
ಸುಂದರ್ ಪಿಚಾಯ್ ಅವರಿಗೆ ಮಕ್ಕಳೊಂದಿಗೆ ಆಡೋದಂದ್ರೆ ತುಂಬಾನೇ ಇಷ್ಟವಂತೆ. ಅವರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಂದ್ರೆ ತುಂಬಾನೆ ಇಷ್ಟವಂತೆ. ಅವರ ಬ್ಯಾಟಿಂಗ್ ನೋಡೋದೇ ಖುಷಿ ಅಂತಾರೆ ಅವರು. ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಇಷ್ಟವಂತೆ.

ಎಚ್ಚರದಿಂದ ಹೆಜ್ಜೆಯಿಡಬೇಕು
ಹೀಗೇ ಸಾಗಿದ ಐಐಟಿಯ ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ಗೂಗಲ್ ನಲ್ಲಿ ನಿಮ್ಮ (ಸುಂದರ್) ಆಕ್ರಮಿಸಲು ಏನು ಮಾಡಬೇಕು ಎಂದು ಕೇಳಿದಳು. ಅದಕ್ಕೆ ಅರ್ಥಗರ್ಭಿತವಾಗಿ ಉತ್ತರಿಸಿದ್ದಾರೆ ಪಿಚಯ್. "ಏನಾಗಬೇಕು ಎಂದುಕೊಳ್ಳುತ್ತೀರೋ ಆ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು'' ಎಂಬ ಕಿವಿಮಾತು ಹೇಳಿದರು.












Click it and Unblock the Notifications