ಆದಾಯ ತೆರಿಗೆ ವಿನಾಯಿತಿ ಖಚಿತ: ಬಜೆಟ್ ಪೂರ್ವ ಸಮೀಕ್ಷೆ
ನವದೆಹಲಿ, ಜನವರಿ 22: ಉದ್ಯೋಗಿಗಳಿಗೆ ಈ ಬಾರಿಗೆ ಕೇಂದ್ರ ಬಜೆಟ್ ನಲ್ಲಿ ಶುಭ ಸುದ್ದಿ ಸಿಗುವುದೇ? ಎಂಬ ಪ್ರಶ್ನೆಗೆ ಹೌದು ಎಂದು ಉತ್ತರ ಸಿಕ್ಕಿದೆ. ತೆರಿಗೆ ಸಲಹಾ ಸಂಸ್ಥೆ ಇ.ವೈ.(ಅರ್ನ್ಸ್ಟ್ ಅಂಡ್ ಯಂಗ್) ನಡೆಸಿದ ಬಜೆಟ್ ಪೂರ್ವ ಸಮೀಕ್ಷೆಯಲ್ಲಿ ಬಹುತೇಕ ಮಂದಿ ತೆರಿಗೆ ವಿನಾಯಿತಿ ಪರ ಮತ ಹಾಕಿದ್ದಾರೆ.
ಈ ಬಾರಿ ಆದಾಯ ತೆರಿಗೆ ದರ ಮತ್ತು ಹಂತಗಳನ್ನು ತಗ್ಗಿಸುವ ಸಾಧ್ಯತೆ ಇದೆ. ಬಜೆಟ್ ನಲ್ಲಿ ಆದಾಯ ತೆರಿಗೆಗೆ ವಿನಾಯಿತಿ ಸಿಗಬಹುದು ಎಂದು ಶೇ 69ಕ್ಕೂ ಅಧಿಕ ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಇವರೇ ಕೇಂದ್ರ ಬಜೆಟ್ ತಯಾರಿಸಿದ ಅಧಿಕಾರಿಗಳು
ಸಂಸ್ಥೆಯಿಂದ ನಡೆಸಲಾದ ಸಮೀಕ್ಷೆಯಲ್ಲಿ ಹಲವಾರು ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಖರ್ಚು ಮಾಡಲು ಜನರ ಬಳಿ ಹೆಚ್ಚು ಹಣ ಇರಬೇಕೆಂಬ ಕಾರಣದಿಂದ ಆದಾಯ ತೆರಿಗೆಯ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗೆಂದು ಶೇ. 69 ರಷ್ಟು ಮಂದಿ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.
ತೆರಿಗೆಯಲ್ಲಿ ಬಹು ವಿಧದ ಕಡಿತಗಳನ್ನು ಬದಲಿಸಿ, ಉದ್ಯೋಗಿಗಳ ಮೇಲಿನ ತೆರಿಗೆಯ ಹೊರೆಯನ್ನು ತಗ್ಗಿಸಲು ಸರ್ಕಾರ ಮುಂದಾಗಲಿದೆ. ಇದಕ್ಕಾಗಿ ನಿರ್ದಿಷ್ಟ ಕಡಿತ ಜಾರಿಗೆ ತರಬಹುದಾಗಿದೆ ಎಂದು ಶೇ. 59 ರಷ್ಟು ಮಂದಿ ಹೇಳಿದ್ದಾರೆ.
ಈಗಾಗಲೇ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಯಾಗಿದ್ದು, ನೇರ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
ಸುಮಾರು 150ಕ್ಕೂ ಅಧಿಕ ಸಂಸ್ಥೆಗಳ ಮುಖ್ಯ ಹಣಕಾಸು ಅಧಿಕಾರಿಗಳು, ತೆರಿಗೆ ತಜ್ಞರು, ಹಿರಿಯ ಆರ್ಥಿಕ ಕ್ಷೇತ್ರದ ವೃತ್ತಿಪರರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶೇ 48ರಷ್ಟು ಮಂದಿ ಕಾರ್ಪೊರೇಟ್ ತೆರಿಗೆ ತಗ್ಗಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಶೇ25ರಷ್ಟು ಮಂದಿ ಸರ್ ಛಾರ್ಜ್ ಹಾಗೆ ಮುಂದುವರೆಯಲಿದೆ ಎಂದಿದ್ದಾರೆ.
ಶೇ 65ಕ್ಕೂ ಅಧಿಕ ಮಂದಿ ತೆರಿಗೆ ಡಿವಿಡೆಂಡ್ ಗಳಲ್ಲಿ ಭಾರಿ ಬದಲಾವಣೆ ಇಲ್ಲ ಎಂದಿದ್ದರೆ, ಶೇ 24ರಷ್ಟು ಮಂದಿ ಕಾರ್ಪೊರೇಟ್ ಸೆಕ್ಟರ್ ಮೇಲಿನ ಹೊರೆ ತಗ್ಗಬಹುದು ಎಂದಿದ್ದಾರೆ. ಶೇ10ರಷ್ಟು ಮಂದಿ ಕಾರ್ಪೊರೇಟ್ ತೆರಿಗೆ ಸೇರಿದಂತೆ ಭಾರಿ ಬದಲಾವಣೆ ನಿರೀಕ್ಷೆ ಹೊಂದಿದ್ದಾರೆ ಎಂದು ಇ.ವೈ ಸಂಸ್ಥೆ ಇಂಡಿಯಾದ ಮುಖ್ಯಸ್ಥ ಸುಧೀರ್ ಕಪಾಡಿಯಾ ಹೇಳಿದ್ದಾರೆ.