ಬಾಷ್ ನಿಂದ ವಲಸೆ ಕಾಮಿರ್ಕರಿಗೆ ದಿನಸಿ ಪ್ಯಾಕೇಟ್, 50 ಕೋಟಿ ದೇಣಿಗೆ
ಬೆಂಗಳೂರು, ಏಪ್ರಿಲ್ 15: ದೇಶದಲ್ಲಿ ಕೊವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದರ ವಿರುದ್ಧ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಾಷ್ ಇಂಡಿಯಾ ಸರ್ಕಾರ ಮತ್ತು ಸಾರ್ವಜನಿಕರಿಗೆ ನೆರವಾಗುವತ್ತ ಗಮನ ಹರಿಸಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮದಡಿ ಬಾಷ್ ಗ್ರೂಪ್ ಭಾರತದಲ್ಲಿ ಪಿಎಂ ಕೇರ್ಸ್ ಫಂಡ್ ಗೆ 5 ಕೋಟಿ ರೂಪಾಯಿ ಮತ್ತು ವಿವಿಧ ಸಮುದಾಯ ಕಲ್ಯಾಣ ಉಪಕ್ರಮಗಳಿಗೆ 45 ಕೋಟಿ ರೂಪಾಯಿಗಳ ನೆರವು ನೀಡಿದೆ.
ಸಮಾಜಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬಾಷ್ ತನ್ನ ಬದ್ಧತೆಯನ್ನು ಮುಂದುವರಿಸಿದ್ದು, ಸೌಲಭ್ಯ ವಂಚಿತರಿಗೆ ಸೌಲಭ್ಯಗಳನ್ನು ಕಲ್ಪಿಸುವ ಹಲವಾರು ಉಪಕ್ರಮಗಳನ್ನು ಆರಂಭಿಸಿದೆ. ತನ್ನ ಬಿಡದಿಯಲ್ಲಿನ ಘಟಕದಿಂದ ಅಡುಗೆ ತಯಾರಿಸಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಮೂಲಕ 4000 ಕ್ಕೂ ಅಧಿಕ ವಲಸೆ ಕಾರ್ಮಿಕರು ಮತ್ತು ಅಗತ್ಯವಿರುವ ಕುಟುಂಬಗಳಿಗೆ ಪ್ರತಿದಿನ ಊಟವನ್ನು ನೀಡುತ್ತಿದೆ. ದೇಶಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಇದುವರೆಗೆ, ಬಾಷ್ ಈಗಾಗಲೇ 1500 ಕುಟುಂಬಗಳಿಗೆ ನೆರವಾಗಿದೆ.

ಈ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು, ''ಬಾಷ್ ಯಾವಾಗಲೂ ಸಾಮಾಜಿಕ ಹೊಣೆಗಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಬಂದಿದೆ ಮತ್ತು ಸಮುದಾಯಗಳು ಮತ್ತು ನೆರೆಹೊರೆಯವರಲ್ಲಿ ಅಗತ್ಯವಿದ್ದವರಿಗೆ ನೆರವಾಗುವುದಕ್ಕೆ ಆದ್ಯತೆ ನೀಡುತ್ತಿದೆ. ಪ್ರಸ್ತುತ ದೇಶದಲ್ಲಿ ಉದ್ಭವಿಸಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯವಿರುವ ಸಮುದಾಯಗಳಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ನೆರವನ್ನು ನೀಡುತ್ತಿದ್ದೇವೆ. ಜಾಗತಿಕ ಬಿಕ್ಕಟ್ಟನ್ನು ಸೃಷ್ಟಿಸಿರುವ ಕೊವಿಡ್-19 ರ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ನೆರವಾಗಲೆಂದು ನಾವು ಈ ದೇಣಿಗೆಯನ್ನು ನೀಡುತ್ತಿದ್ದೇವೆ'' ಎಂದು ತಿಳಿಸಿದರು.












Click it and Unblock the Notifications