ಗೋಧಿ, ತೊಗರಿ ಬೇಳೆ ಮೇಲೆ ಶೇಕಡಾ 10ರಷ್ಟು ಆಮದು ಸುಂಕ
ಈ ಮೊದಲೂ ಗೋಧಿ, ತೊಗರಿ ಬೇಳೆಗೆ ಶೇ. 10ರಷ್ಟು ಆಮದು ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ಕಳೆದ ಡಿಸೆಂಬರ್ ನಲ್ಲಿ ದೇಶದಲ್ಲಿ ಗೋಧಿ ಹಾಗೂ ಬೇಳೆಯ ಬೆಲೆ ಹೆಚ್ಚಾಗಿದ್ದರಿಂದ ಆಮದು ಸುಂಕವನ್ನು ತೆಗೆದು ಹಾಕಿತ್ತು.
ನವದೆಹಲಿ, ಮಾರ್ಚ್ 28: ದಿನನಿತ್ಯದ ದಿನಸಿ ಸಾಮಾನುಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದರಿಂದ ಕಂಗಾಲಾಗಿರುವ ಜನರಿಗೆ ಈಗ ಯುಗಾದಿ ಮುನ್ನಾ ದಿನ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಇದರಿಂದಾಗಿ, ಗೋಧಿ ಹಾಗೂ ತೊಗರಿ ಬೇಳೆಯ ದರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ವಿದೇಶಗಳಿಂದ ಆಮದಾಗುವ ಗೋಧಿ ಹಾಗೂ ತೊಗರಿ ಬೇಳೆಗೆ ಶೇ. 10ರಷ್ಟು ಆಮದು ಸುಂಕವನ್ನು ವಿಧಿಸಲು ಕೇಂದ್ರ ಸರ್ಕಾರ ಆದೇಶಿಸಿದ್ದು, ಮಾರ್ಚ್ 28ರಂದೇ ಈ ಆದೇಶ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಗೆ ಮಂಗಳವಾರ ತಿಳಿಸಿದ್ದಾರೆ.

ಈ ಮೊದಲೂ ಗೋಧಿ, ತೊಗರಿ ಬೇಳೆಗೆ ಶೇ. 10ರಷ್ಟು ಆಮದು ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ಕಳೆದ ಡಿಸೆಂಬರ್ ನಲ್ಲಿ ದೇಶದಲ್ಲಿ ಗೋಧಿ ಹಾಗೂ ಬೇಳೆಯ ಸಂಗ್ರಹ ಇಳಿಮುಖವಾಗಿ, ಬೆಲೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಆಮದು ಸುಂಕವನ್ನು ತೆಗೆದು ಹಾಕಿತ್ತು.
ಇದೀಗ, ದೇಶದಲ್ಲಿನ ಗೋದಾಮುಗಳಲ್ಲಿ ಗೋಧಿ ಹಾಗೂ ತೊಗರಿ ಬೇಳೆಯ ದಾಸ್ತಾನು ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಪುನಃ ಸುಂಕ ವಿಧಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಸರ್ಕಾರದ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ.
ಜನರಿಗೆ ಹೊರೆ
ಸರ್ಕಾರದ ಈ ನಿರ್ಧಾರ ಜನರ ಮೇಲೆ ಹೊರೆಯಾಗಲಿರುವುದಂತೂ ಖಾತ್ರಿ ಎನ್ನಲಾಗಿದೆ. ಸದ್ಯಕ್ಕೀಗ, ಗೋಧಿ ಪ್ರತಿ ಕೆ.ಜಿ.ಗೆ 30ರಿಂದ 32 ರು. ಇದೆ. ತೊಗರಿ ಬೇಳೆ ಬೆಲೆ 85ರಿಂದ 93 ರು.ವರೆಗೆ ಇದೆ. ಇದೀಗ, ಆಮದು ಸುಂಕ ಹೆಚ್ಚಿಸಿದರೆ ಗ್ರಾಹಕರಿಗೆ ಬಿಸಿ ಬೀಳುವುದಂತೂ ಗ್ಯಾರಂಟಿ ಎನ್ನಲಾಗಿದೆ. ದಾಸ್ತಾನುದಾರರು ದೇಶೀಯವಾಗಲೀ, ವಿದೇಶೀಯಾಗಲೀ ತಮ್ಮಲ್ಲಿರುವ ಎಲ್ಲಾ ದಾಸ್ತಾನಿನ ಬೆಲೆಯನ್ನು ಹೆಚ್ಚಿಸುತ್ತಾರೆ. ಹಾಗಾದಲ್ಲಿ, ಅದು ದಾಸ್ತಾನುದಾರರನ್ನು ದಾಟಿ ವರ್ತಕರ ಮೂಲಕ ಸಾಗಿ ಗ್ರಾಹಕರ ಕೈ ಸೇರುವಷ್ಟರಲ್ಲಿ ಗೋಧಿ ಹಾಗೂ ತೊಗರಿ ಬೇಳೆಯ ಮೌಲ್ಯ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.












Click it and Unblock the Notifications