ಬೀದರ್ ಶಾಲೆಯಲ್ಲಿ ಮೋದಿಗೆ ಅವಮಾನ; ಶಾಲೆ ನೆರವಿಗೆ ನಿಂತ ಓವೈಸಿ
ಬೀದರ್, ಫೆಬ್ರವರಿ 02 : ಪ್ರಧಾನಿ ನರೇಂದ್ರ ಮೋದಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ಬೀದರ್ನ ಶಿಕ್ಷಣ ಸಂಸ್ಥೆ ಮೇಲೆ ಪ್ರಕರಣ ದಾಖಲಾಗಿದೆ. ಅಸಾದುದ್ದೀನ್ ಓವೈಸಿ ಶಿಕ್ಷಣ ಸಂಸ್ಥೆಯ ನೆರವಿಗೆ ಧಾವಿಸಿದ್ದಾರೆ.
ಅಸಾದುದ್ದೀನ್ ಓವೈಸಿ ಶಾಹೀನ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಮತ್ತು ಶಾಲೆಯ ವಿದ್ಯಾರ್ಥಿನಿ ತಾಯಿ ಭೇಟಿ ಮಾಡಿದರು. ಶಾಲೆಯಲ್ಲಿ ಮಾಡಿಸಿದ ನಾಟಕದಲ್ಲಿ ಮೋದಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಬೀದರ್ನ ಜೈಲಿನಲ್ಲಿದ್ದು, ಅಲ್ಲಿಯೇ ಭೇಟಿಯಾಗಿ ಅಗತ್ಯ ಕಾನೂನು ನೆರವನ್ನು ನೀಡುವ ಭವರಸೆ ನೀಡಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದಾಖಲಿಸಿರುವ ರಾಜದ್ರೋಹದ ಪ್ರಕರಣವನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದರು.

ಸಂಸದ ಅಸಾದುದ್ದೀನ್ ಓವೈಸಿ ಬೀದರ್ ಭೇಟಿ ಗೌಪ್ಯವಾಗಿತ್ತು. ಭೇಟಿ ಬಗ್ಗೆ ತಿಳಿದಿದ್ದರೆ ಬೀದರ್ ಪ್ರವೇಶಿಸದಂತೆ ತಡೆ ಹಾಕುವ ಸಾಧ್ಯತೆ ಇತ್ತು. ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖಾದರ್ ಮತ್ತು ಇತರ ನಾಲ್ವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಶನಿವಾರ ನಡೆಯಲಿಲ್ಲ.
ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಜನವರಿ 25ರಂದು ಸಿಎಎ ಮತ್ತು ಎನ್ಆರ್ಸಿ ಜಾರಿಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಾಟಕ ನಡೆದಿತ್ತು. ನಾಟಕದಲ್ಲಿ "ಚಹಾ ಮಾರುತ್ತಿದ್ದ ವ್ಯಕ್ತಿ ಈಗ ನಮ್ಮ ಬಳಿ ದಾಖಲೆ ಕೇಳುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಲಾಗಿತ್ತು.
ಈ ನಾಟಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಕಾರ್ಯಕರ್ತ ನೀಲೇಶ್ ಎಂಬುವವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖಾದರ್ ಸೇರಿದಂತೆ ಹಲವರ ಇರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.












Click it and Unblock the Notifications