ಬೀದರ್; ಔರಾದ್ ಮಿನಿ ವಿಧಾನಸೌಧ ಅವ್ಯವಸ್ಥೆ ಆಗರ!
ಬೀದರ್, ಮೇ 26; ನಡೆ-ನುಡಿ ಒಂದಾಗಿರದಿದ್ದರೆ ಏನಾಗುತ್ತದೆ? ಎಂದು ನೋಡಬೇಕಿದ್ದರೆ ಒಮ್ಮೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಸ್ವಕ್ಷೇತ್ರ ಔರಾದ್ ಪಟ್ಟಣದ ಸ್ಥಿತಿ ನೋಡಿದರೆ ಸಾಕು, ಎಲ್ಲವೂ ಅರ್ಥವಾಗುತ್ತದೆ.
ಇಡೀ ತಾಲೂಕಿಗೆ ಇರುವ ಏಕೈಕ ದೊಡ್ಡ ಕಟ್ಟಡ ಮಿನಿ ವಿಧಾನಸೌಧ. ಇದರೊಳಗೆ ಒಮ್ಮೆ ಹೊಕ್ಕು ನೋಡಿದರೆ ಕಣ್ಣಿಗೆ ರಾಚುವುದು ಗಬ್ಬೆದ್ದು ನಾರುವ ಶೌಚಾಲಯ, ಧೂಳು ಕೂತಿರುವ ಕೋಣೆಗಳ ದಿವ್ಯ ದರ್ಶನ.
ಕೇಂದ್ರ ಸರ್ಕಾರ ಹಲವು ವರ್ಷಗಳಿಂದ ನಡೆಸುತ್ತಿರುವ ಸ್ವಚ್ಛತಾ ಅಭಿಯಾನದ ಯೋಜನೆಗೆ ಔರಾದ್ ಮಿನಿವಿಧಾನ ಸೌಧದ ಕಚೇರಿಯ ದುಸ್ಥಿತಿ ಅಣಕಿಸುವಂತಿದೆ. ಖುದ್ದು ಸಚಿವ ಪ್ರಭು ಚವ್ಹಾಣ್ ಎಲ್ಲಿಗೇ ಹೋಗಲಿ ಸ್ವಚ್ಛತೆ ಬಗ್ಗೆ ಒಂದು ಭಾಷಣ ಮಾಡುವುದು ವಾಡಿಕೆ.

ಆದರೆ, ಪಟ್ಟಣದ ಪ್ರಮುಖ ಸರ್ಕಾರಿ ಕಚೇರಿಯಲ್ಲೇ ಈ ಮಟ್ಟಿಗಿನ ಅಸ್ವಚ್ಛತೆ ತಾಂಡವವಾಡುತ್ತಿದೆ. ಇದು ಸಚಿವರ ಕಣ್ಣಿಗೆ ಕಾಣುತ್ತಿಲ್ಲವೇ?, ಇದು ಅಧಿಕಾರಿಗಳ ಆಡಳಿತಕ್ಕೆ ಹಿಡಿದ ಕೈಗನ್ನಡಿಯೇ?.
ಔರಾದ ಪಟ್ಟಣದ ನಿವಾಸಿಯಾಗಿರುವ ಸಾಮಾಜಿಕ ಕಾರ್ಯಕರ್ತ ಗೋಪಾಲ್ ಸಿಂಗ್ ಠಾಕೂರ್ ಮಿನಿ ವಿಧಾನಸೌಧದ ಚಿತ್ರೀಕರಣ ಮಾಡಿದ್ದಾರೆ. ಕಚೇರಿಯಲ್ಲಿ ಸ್ವಚ್ಛತೆ ಇಲ್ಲ, ಇಲ್ಲಿ ಸಾರ್ವಜನಿಕರಿಗೆ ಕುಡಿಯುವುದಕ್ಕೆ ನೀರಿನ ಸೌಲಭ್ಯವಿಲ್ಲ, ಹೆಣ್ಣು ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯೂ ಇಲ್ಲ.
ಜನರಿಗೆ ಸ್ವಚ್ಛತೆ ಬಗ್ಗೆ ಪಾಠ ಮಾಡಬೇಕಾದ ಸರ್ಕಾರ ಈ ರೀತಿ ತನ್ನ ಕಚೇರಿಯನ್ನು ಅವ್ಯವಸ್ಥೆಯ ಆಗರವಾಗಿ ಇಟ್ಟುಕೊಂಡಿದೆ. ಜನರು ಅಧಿಕಾರಿಗಳ ವರ್ತನೆ, ಕಟ್ಟಡದ ದುಸ್ಥಿತಿ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪುಟ ದರ್ಜೆ ಸಚಿವರಾದ ಪ್ರಭು ಚೌವ್ಹಾಣ್ ಹಿಂದುಳಿದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದು ಬರೀ ಭರವಸೆಯಾಗಿಯೇ ಉಳಿದಿದೆ. ಚೌವ್ಹಾಣ್ ಇದೇ ಕ್ಷೇತ್ರದಿಂದ ಮೂರು ಸಲ ಗೆದ್ದು ಬಂದಿದ್ದಾರೆ.












Click it and Unblock the Notifications