ಕ್ವಾರಂಟೈನ್ ಕೇಂದ್ರಕ್ಕೆ ನುಗ್ಗಿದ ಅತಿಥಿಗೆ ಕೋವಿಡ್ - 19 ಪರೀಕ್ಷೆ!
ಭುವನೇಶ್ವರ, ಮೇ 26 : ಅದು ಕೊರೊನಾ ವೈರಸ್ ಸೋಂಕಿತರನ್ನು ಕ್ವಾರಂಟೈನ್ ಮಾಡಿದ್ದ ಜಾಗ. ಕಾಡಿನಿಂದ ಆಹಾರ ಆರಸಿಕೊಂಡು ಬಂದ ಆತ ಕ್ವಾರಂಟೈನ್ ಕೇಂದ್ರಕ್ಕೆ ನುಗ್ಗಿದ್ದ. ಈಗ ಅರಣ್ಯ ಇಲಾಖೆ ಅಧಿಕಾರಿಗಳು ಆತನಿಗೆ ಕೋವಿಡ್ - 19 ಪರೀಕ್ಷೆ ಮಾಡಲು ಮುಂದಾಗಿದ್ದಾರೆ.
Recommended Video
ಪ್ರಾಣಿಗಳಿಂದ ಕೋವಿಡ್ - 19 ಹರಡಲಿದೆಯೇ? ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲಿಯೇ ಚಿಪ್ಪುಹಂದಿಗೆ ಕೊರೊನಾ ವೈರಸ್ ಸೋಂಕು ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಒಡಿಶಾದ ಕಾಡಿನಂಚಿನಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಚಿಪ್ಪು ಹಂದಿಯೊಂದು ನುಗ್ಗಿತ್ತು. ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕೊರೊನಾ ಬಗ್ಗೆ ತಿಳಿಯದೇ ಕ್ವಾರಂಟೈನ್ ಕೇಂದ್ರಕ್ಕೆ ಬಂದ ಚಿಪ್ಪು ಹಂದಿ ಈಗ ಕೋವಿಡ್ - 19 ಪರೀಕ್ಷೆಗೆ ಒಳಪಡಬೇಕಿದೆ.

ವಿಶ್ವದಲ್ಲಿ ಅಳಿವಿನ ಅಂಚಿನಲ್ಲಿರುವ ಸಸ್ತನಿಗಳಲ್ಲಿ ಚಿಪ್ಪುಹಂದಿ ಸಹ ಒಂದು. ಇದನ್ನು ಪೆಂಗೋಲಿನ್ ಎಂದು ಕರೆಯಲಾಗುತ್ತದೆ. ಇದನ್ನು ರಕ್ಷಣೆ ಮಾಡಬೇಕು ಎಂದು ಪ್ರತಿ ವರ್ಷದ ಫೆಬ್ರವರಿ 3ನೇ ಶನಿವಾರವನ್ನು ವಿಶ್ವ ಚಿಪ್ಪು ಹಂದಿ ದಿನ ಎಂದು ಆಚರಣೆ ಮಾಡಲಾಗುತ್ತದೆ.
ಉದ್ದನೆಯ ಬಾಲ, ದಪ್ಪಕಾಲುಗಳನ್ನು ಹೊಂದಿರುವ ಇದರ ಮೈತುಂಬಾ ಚಿಪ್ಪುಗಳಿವೆ. ಒಂದು ವೇಳೆ ಅಪಾಯ ಎದುರಾದರೆ ತನ್ನನ್ನು ತಾನು ಚೆಂಡಿನಂತೆ ಸುತ್ತಿಕೊಂಡು ಅಪಾಯದಿಂದ ಪಾರಾಗುತ್ತದೆ. ತುಂಬಾ ನಾಚಿಕೆ ಸ್ವಭಾವದ ಸಸ್ತನಿ ಇದು.

ಚಿಪ್ಪು ಹಂದಿಯ ಚಿಪ್ಪುಗಳನ್ನು ಔಷಧಿ ತಯಾರಿಕೆ, ಅಲಂಕಾರಿಕ ವಸ್ತುಗಳನ್ನು ತಯಾರು ಮಾಡಲು ಬಳಸುತ್ತಾರೆ. ಜನರು ಇದನ್ನು ಬೇಟೆಯಾಡುತ್ತಾರೆ. ಚಿಪ್ಪು ಹಂದಿ ಬೇಟೆ, ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ.
ಇರುವೆ, ಗೆದ್ದಲು, ಜಿರಳೆ ಮುಂತಾದ ಕೀಟಗಳನ್ನು ತಿಂದು ಚಿಪ್ಪು ಹಂದಿ ಬದುಕುತ್ತದೆ. ದಕ್ಷಿಣ ಏಷ್ಯಾ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಮುಂತಾದ ಕಡೆ ಇವು ಹೆಚ್ಚಾಗಿ ಕಂಡು ಬರುತ್ತದೆ.
ಮಳೆ ಕಾಡು, ಕುರುಚಲು ಕಾಡು, ಹುಲ್ಲುಗಾವಲು ಪ್ರದೇಶದಲ್ಲಿ ಚಿಪ್ಪು ಹಂದಿಗಳು ವಾಸ ಮಾಡುತ್ತದೆ. ಅಳಿವಿನಂಚಿನಲ್ಲಿರುವ ಈ ಸಸ್ತನಿ ರಕ್ಷಣೆ ಮಾಡಲು ಸರ್ಕಾರ ಹಲವು ಕಾನೂನು ಜಾರಿಗೆ ತಂದಿದೆ.












Click it and Unblock the Notifications