ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ
ಭೋಪಾಲ್, ಮೇ 20: ಸಾರ್ವತ್ರಿಕ ಚುನಾವಣೆ ಫಲಿತಾಂಶ ಇನ್ನೆರಡು ದಿನ ಇರುವಂತೆಯೇ ಮಧ್ಯ ಪ್ರದೇಶದಲ್ಲಿ ರಾಜಕೀಯ ಘಟನೆಗಳು ಬಿರುಸು ಪಡೆದುಕೊಂಡಿವೆ.
ಮಧ್ಯ ಪ್ರದೇಶದಲ್ಲಿನ ಕಾಂಗ್ರೆಸ್ ಸರ್ಕಾರ ಕೂಡಲೆ ಅಧಿವೇಶನ ಕರೆದು ಬಹುಮತ ಸಾಬೀತು ಪಡಿಸಲಿ ಎಂದು ವಿರೋಧ ಪಕ್ಷ ಬಿಜೆಪಿ ಒತ್ತಾಯಿಸುತ್ತಿದ್ದು, ರಾಜ್ಯಪಾಲರಿಗೆ ಲಿಖಿತ ಮನವಿ ನೀಡಿದೆ.
ವಿಶೇಷ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ತಾಕೀತು ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದ್ದು, ಸಾಲಮನ್ನಾದ ವಿಷಯದ ಚರ್ಚೆ ಮಾಡುವ ಜೊತೆಗೆ ಸರ್ಕಾರದ ಬಹುಮತವನ್ನು ಪರೀಕ್ಷೆ ಮಾಡಬೇಕಿದೆ ಎಂದು ಬಿಜೆಪಿ ಹೇಳಿದೆ.

ಚುನಾವಣತ್ತೋರ ಸಮೀಕ್ಷೆಗಳ ವರದಿಯಂತೆ ಮಧ್ಯಪ್ರದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತಿದೆ, ಈ ವರದಿಗಳು ಹೊರಬೀಳುತ್ತಿದ್ದಂತೆ ಬಿಜೆಪಿ ವಿಶೇಷ ಅಧಿವೇಶನಕ್ಕೆ ಒತ್ತಾಯ ಮಾಡುತ್ತಿದೆ. ಫಲಿತಾಂಶದ ಬಳಿಕ ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವ ಸಾಧ್ಯತೆಯೂ ಇದೆ.
ಕಳೆದ ವರ್ಷಾಂತ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 230 ಸೀಟುಗಳಲ್ಲಿ 114 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಆದರೆ ಬಹುಮತಕ್ಕೆ 116 ಸೀಟುಗಳ ಅವಶ್ಯಕತೆ ಇತ್ತು, ಬಿಎಸ್ಪಿಯ ಇಬ್ಬರು ಮತ್ತು ಎಸ್ಪಿಯ ಒಬ್ಬ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ ಕಾರಣ ಕಾಂಗ್ರೆಸ್ ಸರ್ಕಾರ ರಚಿಸಿತು, ಬಿಜೆಪಿಯು 109 ಸೀಟುಗಳಲ್ಲಿ ಗೆಲುವು ಸಾಧಿಸಿದೆ.
ಬಿಎಸ್ಪಿಯ ಒಬ್ಬ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ನಾಲ್ಕು ಜನ ಪಕ್ಷೇತರರು ಬಿಜೆಪಿಯ ಹಿಡಿತದಲ್ಲಿ ಇದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಈಗ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಆತಂಕ ಎದುರಾಗಿದೆ.












Click it and Unblock the Notifications