ಕಲಾಕ್ಷೇತ್ರದಲ್ಲಿ ವಾಸುದೇವ ಮಯ್ಯರ ಪುಷ್ಪ ಸಿಂಧೂರಿ ಪ್ರಸಂಗ
ಬೆಂಗಳೂರು, ಅಕ್ಟೋಬರ್ 16: ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಮಣೂರು ವಾಸುದೇವ ಮಯ್ಯರ ರಚನೆಯ ಎರಡನೆಯ ಯಕ್ಷಗಾನ ಪ್ರಸಂಗ ಪುಷ್ಪ ಸಿಂಧೂರಿ ಅಕ್ಟೋಬರ್ 17ರ ಸೋಮವಾರ ರಾತ್ರಿ 10ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗಲಿದೆ.
ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಪರಿಷ್ಕೃತ ರೂಪದೊಂದಿಗೆ ರಂಗದಲ್ಲಿ ಮೂಡಿಬರಲಿದೆ. ಬಿಡುಗಡೆಗೂ ಮುನ್ನ ಮೇಳದ ಮುಂದಿನ ತಿರುಗಾಟಕ್ಕೆ ಆಯ್ಕೆಯಾದ ಈ ಪ್ರಸಂಗ, ನಿರೀಕ್ಷೆ ಹಾಗೂ ಅಭೂತಪೂರ್ವ ಪ್ರಚಾರ ಪಡೆದುಕೊಂಡಿದ್ದಲ್ಲದೇ, ತಿರುಗಾಟಕ್ಕಿಂತ ಮೊದಲೇ ಜನಾಪೇಕ್ಷೆಯ ಮೇರೆಗೆ ಅತ್ಯಲ್ಪ ಅವಧಿಯಲ್ಲಿ ಬೆಂಗಳೂರಿನಲ್ಲಿಯೇ ಮರು ಪ್ರದರ್ಶನ ಕಾಣುತ್ತಿದೆ. ಒಂದು ಪ್ರಸಂಗದ ಬಿಡುಗಡ ಹಾಗೂ ನಂತರದ ನಿರೀಕ್ಷೆ ಹಾಗೂ ಜನಪ್ರಿಯತೆ ಕಾಯ್ದುಕೊಂಡಿದ್ದು ಒಂದು ದಾಖಲೆಯೇ ಸರಿ.

ಈ ಪ್ರಸಂಗದಲ್ಲಿ ಮಣೂರು ವಾಸುದೇವ ಮಯ್ಯರು ಒಂದು ತಾತ್ವಿಕ ಸಂಘರ್ಷವನ್ನು ಹೇಳಿದ್ದಾರೆ. ಇಲ್ಲಿ ಹೆಣ್ಣಿನ ಎರಡು ಮುಖಗಳನ್ನು ತಿಳಿಸುವ ಯತ್ನದ ಜೊತೆಗೇ ಆಕೆಯ ಶ್ರೇಷ್ಠತೆಯನ್ನು ಎತ್ತಿಹಿಡಿವ ಕಥಾ ವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ. ನಳದಮಯಂತಿ ಮಾದರಿಯ ಬಾಹುಕನ ಪಾತ್ರವೊಂದನ್ನು ಮತ್ತೆ ಮಯ್ಯ ರಂಗದ ಮೇಲೆ ತರಲಿದ್ದಾರೆ.
ಯುವ ಜನತೆಗೆ ಆಕರ್ಷಣೀಯವಾಗುವ ಮತ್ತು ಕಲಾವಿದರ ನಾಟ್ಯಕ್ಕೆ ಅವಕಾಶವಾಗುವ ಶೃಂಗಾರರಸವು ಕಥಾ ಭಾಗದ ಸ್ಥಾಯಿಯಾಗಿ ಆವರಿಸಿಕೊಳ್ಳಲಿದೆ. ಸಾಮಾಜಿಕ ಪ್ರಸಂಗಗಳ ಮೂಲದ್ರವ್ಯವಾದ ಹಾಸ್ಯರಸವು ಕಥೆಗೆ ಪೂರಕವಾಗಿ ಪ್ರಸಂಗದುದ್ದಕ್ಕೂ ಪ್ರವಹಿಸಲಿದೆ.
ನಡುವೆ ಬ್ರಹ್ಮಕಪಾಲದ ಮಾದರಿಯಲ್ಲಿ ತಾತ್ವಿಕ ಜಿಜ್ಞಾಸೆಯ ಅನಾವರಣಗೊಳ್ಳಲಿದೆ. ಇಂಥ ಹದಭರಿತ ಕಥಾ ವಸ್ತುವಿಗೆ ತಕ್ಕ ಪದ್ಯಗಳನ್ನು ಯುವ ಕವಿ ಪ್ರಸಾದ ಮೊಗೆಬೆಟ್ಟು ಬರೆದಿದ್ದಾರೆ. ಅನುಭವಿರಂಗ ನಿರ್ದೇಶಕ ರಮೇಶ್ ಬೇಗಾರ್ ರಂಗರೂಪಾಂತರಗೈದಿದ್ದಾರೆ. ಹೆಸರಾಂತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರ ರಂಗ ನಿರ್ದೇಶನವನ್ನು ಪುಷ್ಪಸಿಂಧೂರಿ ಒಳಗೊಂಡಿದೆ.
ಹಿಮ್ಮೇಳದಲ್ಲಿ ಬ್ರಹ್ಮೂರು ಶಂಕರ ಭಟ್, ಶ್ರೀನಿವಾಸ ಪ್ರಭು, ಸುನಿಲ್ ಭಂಡಾರಿ ಜೊತೆಯಾಗಿದ್ದಾರೆ. ವಿಭಿನ್ನ ಶೈಲಿಯ ಪಾತ್ರವೊಂದರಲ್ಲಿ ಮೇಳದ ಮುಂಚೂಣಿ ಕಲಾವಿದ ಥಂಡಿಮನೆ ಶ್ರೀಪಾದಭಟ್ ಕಾಣಿಸಿಕೊಳ್ಳಲಿದ್ದಾರೆ.
ಮತ್ತೊರ್ವ ಪ್ರತಿಭಾವಂತ ಉದಯ ಕಡಬಾಳು ನೆಗೆಟೀವ್ ಶೇಡ್ನ ಪ್ರಮುಖ ಪಾತ್ರವೊಂದರಲ್ಲಿ ಮಿಂಚಲಿದ್ದಾರೆ. ಕಥಾನಾಯಕಿಯಾಗಿ ನೀಲ್ಕೋಡು ಶಂಕರ ಹೆಗ್ಡೆ, ಪೂರಕ ಹಾಸ್ಯ ಪಾತ್ರದಲ್ಲಿ ರವೀಂದ್ರ ದೇವಾಡಿಗ ಮತ್ತು ಸತೀಶ್ ಹಾಲಾಡಿ ಇದ್ದಾರೆ. ಉಳಿದಂತೆ ತೀರ್ಥಹಳ್ಳಿ ಗೋಪಾಲಾಚಾರ್, ಕಿರಾಡಿ ಪ್ರಕಾಶ್, ಕೆದಿಲ ಜಯರಾಂಭಟ್, ವಿಜಯ ಗಾಣಿಗ, ಉಪ್ಪುಂದ ನಾಗೇಂದ್ರ ರಾವ್, ಸಂಜೀವ ಗಾಣಿಗ ಮೊದಲಾದ ಪ್ರತಿಭಾವಂತರ ದಂಡೇ ತಾರಾಣದಲ್ಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ-98459 69666
(ಒನ್ಇಂಡಿಯಾ ಸುದ್ದಿ)












Click it and Unblock the Notifications