ಯಕ್ಷಗಾನ ಕರಾವಳಿ ಭಾಗದ ಕಣ್ಣಿದ್ದಂತೆ, ಇದನ್ನು ದೇಶದೆಲ್ಲೆಡೆ ಪಸರಿಸುತ್ತಿರುವುದು ಅಭಿಮಾನದ ಸಂಗತಿ: ಯು.ಟಿ.ಖಾದರ್
ಬೆಂಗಳೂರು, ಸೆಪ್ಟೆಂಬರ್, 12: ಯಕ್ಷಗಾನ ಕರಾವಳಿ ಭಾಗದ ಕಣ್ಣಿದ್ದಂತೆ. ಈ ಕಲೆಯಲ್ಲಿ ಮಹಿಳೆಯರು ತೊಡಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಬೆಂಗಳೂರಿನಲ್ಲಿ ಹೇಳಿದರು.
ಯಕ್ಷಗಾನ ಮಹಿಳಾ ತಂಡ 'ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು' ಈ ಸಂಸ್ಥೆಯ ಬೆಳ್ಳಿ ಮಹೋತ್ಸವವನ್ನು ಭಾನುವಾರ (ಸೆಪ್ಟೆಂಬರ್ 12) ರವೀಂದ್ರ ಕಲಾಕ್ಷೇತ್ರದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಯಕ್ಷಗಾನದಲ್ಲಿ ಈ ತಂಡ ತೊಡಗಿಸಿಕೊಂಡಿರುವುದೇ ಅಲ್ಲದೆ ಆ ಕಲೆಯನ್ನು ದೇಶದೆಲ್ಲೆಡೆ ಪಸರಿಸುತ್ತಿರುವುದು ಅಭಿಮಾನದ ಸಂಗತಿ. ಹೆಣ್ಣುಮಕ್ಕಳಿಗೆ ಯಕ್ಣಗಾನ ಕಲಿಸುತ್ತಾ 25 ವರ್ಷ ಸಾಗಿ ಬಂದಿರುವುದು ಸಂತಸವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಅವರ ವತಿಯಿಂದ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು. ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರು ನಿರ್ದೇಶಿಸಿದ ಯಕ್ಷಗಾನ ಬ್ಯಾಲೆ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿತು. ತಂಡದ ಗುರುಗಳಾದ ಶ್ರೀನಿವಾಸ ಸಾಸ್ತಾನ ಅವರಿಗೆ ಮಹಿಳಾ ತಂಡದಿಂದ ಗುರುವಂದನೆ ಆಕರ್ಷಕವಾಗಿ ಮೂಡಿಬಂತು.
ಕನ್ನಡ ಭಾಷೆಯಲ್ಲೇ ನಡೆಯುವ ಯಕ್ಷಗಾನವನ್ನು ವಿಶೇಷವಾಗಿ ಸಂಸ್ಥೆಯ ಮಕ್ಕಳಿಂದ ಆಂಗ್ಲಭಾಷೆಯಲ್ಲಿ ಕಂಸವಧೆ ಎನ್ನುವ ಯಕ್ಷಗಾನ, ತೆಂಕುತಿಟ್ಟಿನಲ್ಲಿ ಖ್ಯಾತ ಮಹಿಳಾ ಭಾಗವತರಾದ ಅಮೃತಾ ಅಡಿಗ ಇವರ ಸಿರಿಕಂಠದಲ್ಲಿ 'ಸುದರ್ಶನ ವಿಜಯ' ಪ್ರಸಂಗ, ಬಡಗುತಿಟ್ಟಿನ ಖ್ಯಾತ ಮಹಿಳಾ ಭಾಗವತರಾದ ಚಿಂತನಾ ಹೆಗಡೆ ಇವರ ಸಿರಿಕಂಠದಲ್ಲಿ 'ವೀರ ಅಭಿಮನ್ಯು' ಯಕ್ಷಗಾನ ಯಕ್ಷ ಪ್ರೇಮಿಗಳನ್ನು ರಂಜಿಸಿತು.

ಎಲ್ಲಾ ಕಾರ್ಯಕ್ರಮ ಮಹಿಳೆಯರಿಂದ ನಡೆದಿದ್ದು ವಿಶೇಷ ಆಕರ್ಷಣೆಯಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ದೂರದರ್ಶನ, ಆಕಾಶವಾಣಿಯ ನಿರ್ದೇಶಕರಾದ ನಿರ್ಮಲ ಎಲಿಗಾರ್, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಡಾ.ತೇಜಸ್ವಿನಿ ಅನಂತ್ ಕುಮಾರ್, ಹಿರಿಯ ಪತ್ರಕರ್ತ ಡಾ.ಈಶ್ವರ್ ದೈತೋಟ, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ರಾಮಚಂದ್ರ ಉಪಾಧ್ಯ, ವಿಕಾಸ್ ಗ್ಲೋಬಲ್ ಸೋಲ್ಯುಷನ್ಸ್ನ ಅಧ್ಯಕ್ಷರಾದ ಡಿ.ವಿ ವೆಂಕಟಾಚಲಪತಿ, ಜಿ. ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 14 ಯಕ್ಷಗಾನ ಗುರುಗಳಿಗೆ 'ಕರ್ನಾಟಕ ಯಕ್ಷ ಗುರು ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಸಂಸ್ಥೆಯ ಸ್ಥಾಪಕರಾದ ಗೌರಿ ಕೆ ಸ್ವಾಗತ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸುಪ್ರೀತಾ ಗೌತಮ್ & ಚೈತ್ರ ಕೋಟ ಕಾರ್ಯಕ್ರಮದ ನಿರೂಪಣೆ ಮಾಡಿದಡು.












Click it and Unblock the Notifications