ಆತ್ಮಹತ್ಯೆ ದಾರಿಗಳ ಬಗ್ಗೆ ಆನ್ ಲೈನ್ ಹುಡುಕಾಡಿದ್ದ ಟೆಕ್ಕಿ ಗೀತಾಂಜಲಿ
ಬೆಂಗಳೂರು, ನವೆಂಬರ್ 24: ಈಚೆಗೆ ಕಾಡುಬೀಸನಹಳ್ಳಿಯ ಸೆಸ್ನಾ ಬಿಜಿನೆಸ್ ಪಾರ್ಕ್ ನಲ್ಲಿ ಹತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಗೀತಾಂಜಲಿ, ಅದಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಆನ್ ಲೈನ್ ನಲ್ಲಿ ಹುಡುಕಾಟ ನಡೆಸಿದ್ದರು ಎಂಬ ಮಾಹಿತಿಯನ್ನು ಮಾರತ್ ಹಳ್ಳಿ ಪೊಲೀಸರು ನೀಡಿದ್ದಾರೆ.
ಕಳೆದ ಮಂಗಳವಾರವಷ್ಟೇ ಗೋವಾದ ಮನೆಯಲ್ಲಿ ಗೀತಾಂಜಲಿ ನಿಶ್ಚಿತಾರ್ಥವಾಗಿತ್ತು. ಅಂದು ಆಕೆಯ ಜನ್ಮದಿನವೂ ಆಗಿತ್ತು. ಆದರೆ ಗೀತಾಂಜಲಿ ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಸಂಗತಿ ಭೇದಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಅವರು ಶಂಕಿಸುತ್ತಿರುವ ಪ್ರಕಾರ, ಇಷ್ಟವಿಲ್ಲದ ವ್ಯಕ್ತಿ ಜತೆಗೆ ನಿಶ್ಚಿತಾರ್ಥ ಆಗಿದ್ದರಿಂದ ಗೀತಾಂಜಲಿ ಸಾಯುವ ನಿರ್ಧಾರ ಮಾಡಿರಬಹುದು.

ಪೊಲೀಸರ ಪ್ರಕಾರ, ಗೀತಾಂಜಲಿ ಮಂಗಳವಾರ ಜನ್ಮದಿನ ಆಚರಿಸಿಕೊಂಡಿದ್ದರು. ಎರಡು ದಿನ ರಜಾ ಪಡೆದು, ಬುಧವಾರ ಬೆಂಗಳೂರಿಗೆ ಹಿಂತಿರುಗಿದವರು ಮನೆಯ ಬದಲು ಕಚೇರಿಗೆ ತೆರಳಿದ್ದರು. ತಾನು ಕಚೇರಿಗೆ ಬಂದಿರುವುದಾಗಿ ತನ್ನ ಸಂಬಂಧಿಗೆ ಫೋನ್ ಮಾಡಿ ಕೂಡ ತಿಳಿಸಿದ್ದರು. ಆದರೆ ಅವರಿಗೂ ಆಕೆಯ ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ.
"ಆತ್ಮಹತ್ಯೆ ಮಾಡಿಕೊಳ್ಳುವ ಪರಿಣಾಮಕಾರಿ ದಾರಿಗಳು ಹಾಗೂ ಮಾತ್ರೆಗಳಿಗಾಗಿ ಹುಡುಕಾಟ ನಡೆಸಿದ್ದರು. ಯಾವ ಮಾತ್ರೆ ಹಾಗೂ ಯಾವ ಪ್ರಮಾಣದಲ್ಲಿ ಸೇವಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬುದನ್ನು ಕೂಡ ಇಂಟರ್ ನೆಟ್ ನಲ್ಲಿ ಹುಡುಕಾಡಿರುವುದು ಗೀತಾಂಜಲಿ ಮೊಬೈಲ್ ಫೋನ್ ನಿಂದ ಗೊತ್ತಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications