Bengaluru: ಬೆಂಗಳೂರಿನಲ್ಲಿ ನೀರಿಗಾಗಿ ಪ್ರಾಣ ಬಿಟ್ಟ ಮಹಿಳೆ- ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ, ಪ್ರತಿಭಟನೆ
ಬೆಂಗಳೂರು ಮಾರ್ಚ್ 13: ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ವಿದ್ಯುತ್ ತಗುಲಿ ಪ್ರಾಣ ಬಿಟ್ಟಿದ್ದಾರೆ. ಇದರಿಂದ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಗರದ ಚಾಮರಾಜಪೇಟೆ ಆನಂದಪುರದಲ್ಲಿ ವಿಪರೀತ ನೀರಿನ ಸಮಸ್ಯೆ ಇದೆ. ಆನಂದಪುರಕ್ಕೆ ನೀರು ಸಂಪರ್ಕ ಇಲ್ಲ. ಪೈಪ್ ಲೈನ್ಗೆ ಮೋಟರ್ ಪಂಪ್ ಅಳವಡಿಸಬೇಕು. ಮೋಟರ್ ಅಳವಡಿಸಲು ಇಲ್ಲಿನ ಜನ ಹಲವಾರು ವರ್ಷಗಳಿಂದ ವಿದ್ಯುತ್ ಕಂಬದಿಂದ ನೇರವಾಗಿ ಸಂಪರ್ಕ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಾರೆ.

ಹೀಗೆ ಸೆಲ್ವಿ ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ನೀರಿಗಾಗಿ ಪೈಪ್ಲೈನ್ಗೆ ಮೋಟರ್ ಪಂಪ್ ಅಳವಡಿಸಿದ್ದಾರೆ. ಆಗ ವಿದ್ಯುತ್ ತಗುಲಿ ಅವರು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಖಂಡಿಸಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಇದರಿಂದಾಗಿ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಸೆಲ್ವಿ ಅವರಿಗೆ ಪತಿ ಇಲ್ಲ. ಅವರು ಸಾವನ್ನಪ್ಪಿ ಸುಮಾರು ವರ್ಷಗಳು ಕಳೆದಿವೆ. ಚಾಮರಾಜಪೇಟೆ ಆನಂದಪುರದಲ್ಲಿ ಜೀವನ ಕಟ್ಟಿಕೊಂಡಿದ್ದ ಸೆಲ್ವಿ ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಇದ್ದಾರೆ. ಒಬ್ಬ ಮಗಳಿಗೆ ಮಾತ್ರ ಮದುವೆ ಮಾಡಿದ್ದಾರೆ. ಇನ್ನೂ ಮೂರು ಮಕ್ಕಳನ್ನು ನೋಡಿಕೊಳ್ಳಲು ಸೆಲ್ವಿ ಮನೆ ಕೆಲಸ ಮಾಡುತ್ತಿದ್ದರು. ನೀರು ಹಿಡಿದು ದಿನಾ ಮನೆ ಕೆಲಸಕ್ಕೆ ಹೋಗಿ ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದ ಸೆಲ್ವಿ ಈಗ ಶವವಾಗಿ ಹೋಗಿದ್ದಾರೆ.
ತಾಯಿಯನ್ನು ಕಳೆದುಕೊಂಡ ಮೂರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಸೆಲ್ವಿ ಅವರ ಸಾವಿಗೆ ಬಿಬಿಎಂಪಿ ಅಧಿಕಾರಿಗಳೇ ಕಾರಣ ಎಂದು ಸ್ಥಳೀಯರ ಜನರು ಆಕ್ರೋಶ ಹೊರ ಹಾಕಿದ್ದಾರೆ. ಆನಂದಪುರದಲ್ಲಿ ನೀರಿನ ಸಮಸ್ಯೆ ವರ್ಷಗಳಿಂದಲೂ ಇದೆ. ಪ್ರತೀ ಬಾರಿ ಚುನಾವಣೆ ಬಂದಾಗ ಜನನಾಯಕರು ಇಲ್ಲಿನ ಜನರಿಂದ ಮತ ಪಡೆದು ನೀರಿನ ಸಮಸ್ಯೆಗೆ ಈವರೆಗೂ ಪರಿಹಾರ ನೀಡಿಲ್ಲ.
ಅಲ್ಲದೆ ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಎಷ್ಟೋ ಬಾರಿ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗಿಲ್ಲ. ಜನ ನೀರಿಗಾಗಿ ಪ್ರಾಣವನ್ನೂ ಲೆಕ್ಕಿಸದೆ ನೀರವಾಗಿ ಕಂಬದಿಂದ ಪೈಪ್ ಲೈನ್ಗೆ ಮೋಟರ್ ಪಂಪ್ ಅಳವಡಿಸುತ್ತಾರೆ. ಇದಿನ್ನೂ ಬೇಸಿಗೆ ಆರಂಭವಷ್ಟೆ. ಬೇಸಿಗೆ ಇನ್ನೂ ಎರಡು ತಿಂಗಳು ಇದೆ. ಆಗ ಇನ್ನೆಷ್ಟು ಸಮಸ್ಯೆ ಆಗುತ್ತದೋ ಗೊತ್ತಿಲ್ಲ.
ಈ ಬಗ್ಗೆ ಮಾತನಾಡಿದ ಸೆಲ್ವಿ ಸಂಬಂಧಿಕರೊಬ್ಬರು, 'ಇಪ್ಪತ್ತು ವರ್ಷದಲ್ಲಿ ನಾಲ್ಕು ಸಾವು ಆಗಿದೆ. ನೀರಿಗಾಗಿ ಈ ಸಾವುಗಳು ಸಂಭವಿಸಿವೆ. ಆದರೂ ಕೂಡ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನೆಷ್ಟು ಸಾವಾಗುವುದನ್ನು ಬಿಬಿಎಂಪಿ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ' ಎಂದು ಪ್ರಶ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ಸ್ಥಳೀಯರು ಸೆಲ್ವಿ ಸಾವಿಗೆ ಪರಿಹಾರ ನೀಡಬೇಕು. ಇಲ್ಲಿನ ಜನರಿಗೆ ಶಾಶ್ವತವಾಗಿ ನೀರಿನ ಸಮಸ್ಯೆಗೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪರಿಹಾರ ನೀಡದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications