Breaking: ಬೆಂಗಳೂರಲ್ಲಿ ಶುಕ್ರವಾರ ಧಾರಾಕಾರ ಮಳೆ: ಮಳೆಹಾನಿ, ಅಧಿಕ ಮಳೆ ದಾಖಲಾತಿ ಬಗ್ಗೆ ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 14: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಶುಕ್ರವಾರ ಮಳೆ ಅಬ್ಬರ ಜೋರಾಗಿದ್ದು, ಸಂಜೆ ನಂತರ ಒಂದೇ ಸಮನೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ನಗರದ ರಸ್ತೆ ಸಂಚಾರ, ಜನಜೀವನ ಅಸ್ತವ್ಯಸ್ಥವಾಯಿತು. ಒಂದು ಮರ ಧರೆಗುರುಳಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ರಾತ್ರಿ 8ಗಂಟೆ ಹೊತ್ತಿಗೆ ನಂದಿನಿ ಬಡಾವಣೆಯಲ್ಲಿ 42ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿದೆ.
ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಎಂದಿನಂತೆಯೇ ನಗರದಲ್ಲಿ ಸಾಮಾನ್ಯ ವಾತಾವರಣ ಕಂಡು ಬಂತು. ಮಧ್ಯಾಹ್ನದ ನಂತರ ಮಬ್ಬು ವಾತಾವರಣ ಕವಿದು ಜಿಟಿ ಜಿಟಿ ಮಳೆ ಆರಂಭವಾಯಿತು. ಕೆಲ ಕಾಲ ಮಳೆ ವಿರಾಮ ಪಡೆಯಿತಾದರೂ ರಾತ್ರಿ 7ಗಂಟೆ ನಂತರ ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ಸಮನೆ ಬೆಂಗಳೂರು ನಗರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯತೊಡಗಿದೆ. ಈ ಮಳೆ ತಡರಾತ್ರಿವರೆಗೂ ಮುಂದುವರಿಯುವ ಲಕ್ಷಣಗಳು ಇವೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಗೇರಿ, ಆರ್ಆರ್ನಗರ, ರಾಜಾಜಿನಗರ, ಹಂಪನಿಗರ, ಚಾಮರಾಜಪೇಡೆ, ಸಿಟಿ ಮಾರುಕಟ್ಟೆ, ಜಯನಗರ, ಹೆಬ್ಬಾಳ, ಯಲಹಂಕ, ಹಗದೂರು, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಸಂಜಯನಗರ, ಚೊಕ್ಕಸಂದ್ರ, ಮಹದೇವಪುರ, ಬೊಮ್ಮನಹಳ್ಳಿ, ಹೆರೋಹಳ್ಳಿ, ಎಚ್.ಗೊಲ್ಲಹಳ್ಳಿ, ಯಶವಂತಪುರ ಸೇರಿದಂತೆ ಬಹುತೇಕ ಬೆಂಗಳೂರಿನಾದ್ಯಂತ ಗುಡುಗು ಮಿಂಚು ಸಹಿತ ಜೋರು ಮಳೆ ಬಿಳುತ್ತಿದೆ.

ಇದರಿಂದಾಗಿ ಹೆಬ್ಬಾಳ ಎನ್ಟಿಎ ಬಸ್ ನಿಲ್ದಾಣ ಸಂಜಯನಗರ ಸಮೀಪದಲ್ಲಿ ಒಂದು ಮರ ಧರೆಗುರುಳಿದೆ. ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜೋರು ಮಳೆಯಿಂದಾಗಿ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು. ಕಳೆದ ತಿಂಗಳ ಪ್ರವಾಹದಿಂದ ಚೇತರಿಸಿಕೊಂಡಿದ್ದ ಮಹಾದೇವಪುರ, ಬೊಮ್ಮನಹಳ್ಳಿ ವಲಯದ ತಗ್ಗು ಪ್ರದೇಶ ನಿವಾಸಿಗಳಲ್ಲಿ ಈ ಮಳೆ ಮತ್ತೆ ಆತಂಕ ಮೂಡಿಸಿದೆ.
ವಾಹನ ಸಂಚಾರಕ್ಕೆ ತೊಂದರೆ
ಓಕಳಿಪುರಂ ರಸ್ತೆ ಅಂಡರ್ಪಾಸ್, ಶಿವಾನಂದ್ ವೃತ್ತ ಸೇರಿದಂತೆ ನಗರದ ವಿವಿಧ ರಸ್ತೆ ಅಂಡರ್ ಪಾಸ್ಗಳ್ಲಲಿ ಮಳೆಗೆ ಒಳಚರಂಡಿ ನೀರು ಉಕ್ಕಿ ಹರಿಯಿತು. ಇದರಿಂದ ವಾಹನ ಸಂಚಾರ ಅಸ್ತವೆಸ್ತವಾಯಿತು. ಬೈಕ್ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ರಸ್ತೆ ಬದಿ ಅಂಗಡಿ ಮುಂಗಟ್ಟು, ಮೆಟ್ರೋ ಫ್ಲೈಓವರ್ ಕೆಳಗೆ ಗಂಟೆ ಗಟ್ಟಲೆ ನಿಂತು ಸುಸ್ತಾದರು.

ಶುಕ್ರವಾರ ಬೆಂಗಳೂರಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 'ಯೆಲ್ಲೋ ಅಲರ್ಟ್' ನೀಡಿತ್ತು. ಅದರಂತೆ ಇದೀಗ ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಶನಿವಾರ ಮಳೆ ತುಸು ಕಡಿಮೆಯಾಗಲಿದ್ದು, ಚಳಿಯ ವಾತಾವರಣವೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಪಶ್ಚಿಮ ವಲಯದಲ್ಲಿ ಅಧಿಕ ಮಳೆ ಆಗಿದೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ಪ್ರಕಾರ ರಾತ್ರಿ 8 ಗಂಟೆ ಹೊತ್ತಿಗೆ ಬೆಂಗಳೂರು ನಂದಿನಿ ಬಡಾವಣೆಯಲ್ಲಿ 42ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಕೊಟ್ಟಿಗೆಪಾಳ್ಯದಲ್ಲಿ 41.5ಮಿ.ಮೀ., ಪೀಣ್ಯ ಕೈಗಾರಿಕಾ ಪ್ರದೇಶ 39ಮಿ.ಮೀ., ಚೊಕ್ಕಸಂದ್ರ 38ಮಿ.ಮೀ., ನಾಗಪುರ 35ಮಿ.ಮೀ., ಅಗ್ರಹಾರ ದಾಸರಹಳ್ಳಿ 32ಮಿ.ಮೀ., ದೊಡ್ಡನಾಕ್ಕುಂದಿ 30ಮಿ.ಮೀ., ವಿದ್ಯಾಪೀಠ 27.5 ಮಿ.ಮೀ., ಕೇಂಗೇರಿ 26.5ಮಿ.ಮೀ., ಹಂಪಿನಗರ 25ಮಿ.ಮೀ., ಮಾರುತಿ ಮಂದಿರ ವಾರ್ಡ್ ಮತ್ತು ನಾಯಂಡಹಳ್ಳಿಯಲ್ಲಿ ತಲಾ 23ಮಿ.ಮೀ.ಮಳೆ ದಾಖಲಾಗಿದೆ. ಇನ್ನೂ ಹಲವು ಬಡಾವಣೆಗಳಲ್ಲಿ ಜಿಟಿ ಜಿಟಿ ರೂಪದಲ್ಲಿ ಮಳೆ ಮುಂದುವರಿದಿದೆ. ಇದರ ನಗರವಾಸಿಗಳು ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications