Bengaluru 2nd Airport: ಈ ಕಾರಣಕ್ಕಾಗಿ ಡಾಬಸ್ಪೇಟೆ ಬಳಿ ಬೆಂಗಳೂರು 2ನೇ ವಿಮಾನ ನಿಲ್ದಾಣ ನಿರ್ಮಾಣ?
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಬಗ್ಗೆ ಕುತೂಹಲ ಮುಂದುವರೆದಿದೆ. ಯಾವ ಸ್ಥಳದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೆ ಹೆಚ್ಚಿನ ಅನುಕೂಲವಿದೆ ಎಂದು ಅಳೆದು ತೂಗಿ ಸ್ಥಳ ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ನೆಲಮಂಗಲ, ತುಮಕೂರು ಜಿಲ್ಲೆಯಲ್ಲಿ ಗುರುತಿಸಿರುವ ಸ್ಥಳ ಮುಂಚೂಣಿಯಲ್ಲಿದೆ. ಹೊಸೂರು ಬಳಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಮುಂದಾಗಿರುವ ಕಾರಣ ಬಿಡದಿ, ಕನಕಪುರ ಬಳಿ ಗುರುತಿಸಿದ್ದ ಸ್ಥಳಗಳನ್ನು ಸರ್ಕಾರ ಕೈಬಿಡುವ ಸಾಧ್ಯತೆ ಇದೆ.
ನೆಲಮಂಗಲ ಬಳಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಗುರುತಿಸಿರುವ ಜಾಗ ಎಲ್ಲದಕ್ಕೂ ಪ್ರಶಸ್ತವಾಗಿದೆ ಎಂದು ಹೇಳಲಾಗಿದೆ. ಆದರೆ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಲ್ಲೇ ಯೋಜನೆಗೆ ಇದು ಹಿನ್ನಡೆಯಾಗಿದೆ.

ನೆಲಮಂಗಲ ಜೊತೆ ತುಮಕೂರು ಜಿಲ್ಲೆಯಲ್ಲಿ ಕೂಡ ಸ್ಥಳ ಗುರುತಿಸಲಾಗಿದೆ. ಡಾಬಸ್ಪೇಟೆ ಸಮೀಪ ಸ್ಥಳ ಗುರುತಿಸಲಾಗಿದ್ದು ಎರಡನೇ ವಿಮಾನ ನಿಲ್ದಾಣಕ್ಕೆ ಇದು ಕೂಡ ಉತ್ತಮ ಸ್ಥಳ ಎನ್ನಲಾಗುತ್ತಿದೆ. ಇಲ್ಲಿ ವಿಮಾನ ನಿಲ್ದಾಣದವಾದರೆ ಅಭಿವೃದ್ಧಿಗೂ ವೇಗ ಸಿಗಲಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಡಾಬಸ್ಪೇಟೆ ಉತ್ತಮ ಆಯ್ಕೆ ಯಾಕೆ?
ರಾಜ್ಯ ಸರ್ಕಾರ ಡಾಬಸ್ಪೇಟೆ-ದೊಡ್ಡಬಳ್ಳಾಪುರ ನಡುವೆ ಕ್ವಿನ್ (KWIN) ಸಿಟಿ ನಿರ್ಮಾಣಕ್ಕೆ ಮುಂದಾಗಿದೆ. 5800 ಎಕರೆ ಪ್ರದೇಶದಲ್ಲಿ ಈ ಸಿಟಿ ನಿರ್ಮಾಣಕ್ಕೆ ಸರ್ಕಾರ ಯೋಜಿಸಲಾಗಿದ್ದು ಸುಮಾರು 40,000 ಕೋಟಿ ರೂಪಾಯಿ ಯೋಜನೆ ಇದಾಗಿದೆ.
ಎಐ ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಲವು ಸಂಶೋಧನೆ, ಆವಿಷ್ಕಾರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇದು ಬೆಂಗಳೂರು ಬೆಳವಣಿಗೆಗೆ ದೊಡ್ಡ ಸಹಾಯ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ಡಾಬಸ್ಪೇಟೆ ಬಳಿ ಈಗ ಗುರುತಿಸಿರುವ ಸ್ಥಳ ಕೂಡ ಕ್ವಿನ್ ಸಿಟಿ ಸಮೀಪವೇ ಇದ್ದು, ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಕ್ವಿನ್ ಸಿಟಿ ಬೆಳವಣಿಗೆಗೆ ಅನುಕೂಲವಾಗಲಿದೆ.
ತುಮಕೂರು-ಬೆಂಗಳೂರು ಎಕ್ಸ್ಪ್ರೆಸ್ವೇ ಕೂಡ ನಿರ್ಮಾಣವಾಗುತ್ತಿದ್ದು, ನೈಸ್ ರಸ್ತೆ, ಸ್ಯಾಟಲೈಟ್ ರಿಂಗ್ ರಸ್ತೆ ಮತ್ತು ಫೆರಿಫೆರಲ್ ರಿಂಗ್ ರಸ್ತೆ ಕೂಡ ನಿರ್ಮಾಣವಾಗುತ್ತಿದ್ದು ಬೆಂಗಳೂರು ನಗರಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆ ಇರುವುದರಿಂದ ಇದೇ ಸ್ಥಳವನ್ನು ಆಯ್ಕೆ ಮಾಡಲು ಸರ್ಕಾರ ಪರಿಗಣಿಸುವ ಸಾಧ್ಯತೆ ಕೂಡ ಇದೆ.
ಬೆಂಗಳೂರು 2ನೇ ವಿಮಾನ ನಿಲ್ದಾಣದ ಸ್ಥಳ ಆಯ್ಕೆ ಮಾಡಲು ಸರ್ಕಾರ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಸ್ಥಳವನ್ನು ಆಯ್ಕೆ ಮಾಡಿ ಘೋಷಣೆ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಈಗಾಗಲೇ ಭರವಸೆ ನೀಡಿದ್ದಾರೆ.












Click it and Unblock the Notifications