ಬರಗೂರು ರಾಮಚಂದ್ರಪ್ಪ ಪತ್ನಿ ರಾಜಲಕ್ಷ್ಮಿ ನಿಧನ
ಬೆಂಗಳೂರು, ಏಪ್ರಿಲ್ 08: ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಪತ್ನಿ ಎಸ್. ರಾಜಲಕ್ಷ್ಮಿ ಅವರು ( 66) ಭಾನುವಾರ ನಿಧನರಾದರು.
ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದ ರಾಜಲಕ್ಷ್ಮಿ ಅವರು ಸುಮಾರು 50 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಕಣ್ಣುಗಳನ್ನು ದಾನ ಮಾಡಿದ ರಾಜಲಕ್ಷ್ಮಿ
ಸಾವಿನ ಸಂದರ್ಭದಲ್ಲಿ ಮಾನವೀಯತೆ ಮೆರೆದ ರಾಜಲಕ್ಷ್ಮಿ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ನಟ ಡಾ. ರಾಜಕುಮಾರ್ ಅವರಿಂದ ಸ್ಫೂರ್ತಿ ಪಡೆದಿದ್ದ ರಾಜಲಕ್ಷ್ಮಿ ಅವರು ನೇತ್ರದಾನ ಮಾಡಲು ನಿರ್ಧರಿಸಿದ್ದರು. ಮೂತ್ರಪಿಂಡ ವೈಫಲ್ಯದ ಚಿಕಿತ್ಸೆ ಪಡೆಯುತ್ತಿದ್ದ ಅವರು ನಾಲ್ಕು ಬಾರಿ ಹೃದಯ ಸ್ತಂಭನಕ್ಕೆ ಒಳಗಿದ್ದರು.

ಅಂತರ್ ಜಾತಿ ವಿವಾಹ
ರಾಜಲಕ್ಷ್ಮಿ ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದಲ್ಲಿ ಜನಿಸಿದ್ದರು, ಬಿ.ಎ. ಪದವಿ ಮತ್ತು ಹಿಂದಿ ವಿದ್ವಾನ್ ಪದವೀಧರರಾಗಿದ್ದರು. ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಅವರದು ನಾಲ್ಕು ದಶಕಗಳ ದಾಂಪತ್ಯ. ಆಗಿನ ಕಾಲದಲ್ಲಿಯೇ ಅಂತರ್ಜಾತಿ ವಿವಾಹವಾಗಿ ದಿಟ್ಟತನ ಮೆರೆದಿದ್ದರು.
ಕನ್ನಡ ಸಾಹಿತ್ಯ ಪ್ರೇಮಿಯಾಗಿದ್ದ ರಾಜಲಕ್ಷ್ಮಿ, ಜೀವನದುದ್ದಕ್ಕೂ ಬರಗೂರು ರಾಮಚಂದ್ರಪ್ಪ ಅವರ ಸಾಹಿತ್ಯ ಚಟುಚಟಿಕೆಗಳು, ಸಿನಿಮಾ ಮತ್ತು ಸಾಮಾಜಿಕ ಚಳವಳಿಗಳಿಗೆ ಬೆಂಬಲವಾಗಿದ್ದರು.
ಅವರು ಬರಗೂರು ರಾಮಚಂದ್ರಪ್ಪ, ಮಕ್ಕಳಾದ ಮೈತ್ರಿ ಬರಗೂರು, ಸ್ಫೂರ್ತಿ ಬರಗೂರು, ಸೊಸೆ ಪದ್ಮಶ್ರೀ ಮತ್ತು ಮೊಮ್ಮಗ ಆಕಾಂಕ್ಷ್ ಅವರನ್ನು ಅಗಲಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದ 2ನೇ ಹಂತದ 11 ಬಿ ಅಡ್ಡರಸ್ತೆಯಲ್ಲಿರುವ ಮನೆ ಸಂಖ್ಯೆ 27ರಲ್ಲಿ ಮೃತದೇಹವನ್ನು ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನ 1ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಅಂತ್ಯಕ್ರಿಯೆ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಮಾಹಿತಿಗೆ 9964640890, 9448454872 ಸಂಪರ್ಕಿಸಬಹುದು.












Click it and Unblock the Notifications