Bengaluru 2nd Airport: ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಯಾಕೆ ಬೇಕು? ತಮಿಳುನಾಡು ಜೊತೆಗೆ ಏನಿದು ಸ್ಪರ್ಧೆ?
ಬೆಂಗಳೂರು, ಫೆಬ್ರವರಿ 11: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದು, ಈಗಾಗಲೇ ಮೂರು ಕಡೆ ಜಾಗ ಗುರುತಿಸಿದೆ. ಇಂಥದ್ದೆ ಜಾಗದಲ್ಲೇ ನಿರ್ಮಿಸಬೇಕೆಂಬ ಬೇಡಿಕೆಗಳು ಹೆಚ್ಚಾಗಿವೆ. ಈ ಮಧ್ಯೆ ಕರ್ನಾಟಕ ಸರ್ಕಾರ ತಮಿಳುನಾಡು ಜೊತೆಗೆ ಪರೋಕ್ಷವಾಗಿ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಇದರಲ್ಲಿ ಸರ್ಕಾರದ ಜನಪರ ಕಾಳಜಿಯೂ ಇದೆ. ಇದಕ್ಕೂ ಮೊದಲು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಯಾಕೆ ಬೇಕು? ಅಗತ್ಯತೆ ಏನು? ಅಂಕಿ ಅಂಶ ಇಲ್ಲಿದೆ.
ಮೂಲತಹಃ ಬೆಂಗಳೂರು ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳ ಮಾತ್ರವಲ್ಲದೇ ಭೌಗೋಳಿಕವಾಗಿಯೂ ವಿಸ್ತರಣೆಗೊಳ್ಳುತ್ತಿವೆ. ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಿರುವ ವಿದೇಶಿ ಕಂಪನಿಗಳು ಬೆಂಗಳೂರಿನ ಭಾಗದಲ್ಲಿ ಘಟಕ, ಕೇಂದ್ರ ಸ್ಥಾಪಿಸಲು ಹೆಚ್ಚು ಒಳಲು ತೋರುತ್ತಿವೆ.

ಬೆಂಗಳೂರಿಗೆ ವಲಸೆ ಬರುವವರ ಪ್ರಮಾಣವೇನು ಕಡಿಮೆ ಇಲ್ಲ. ಇಂದಿನ ದಿನಮಾನಗಳಲ್ಲಿ ಮಧ್ಯಮ ವರ್ಗದ ಜನತೆಯಿಂದ ಹಿಡಿದು ಎಲ್ಲ ವರ್ಗದ ಜನರ ವಿಮಾನಯಾನ ಅವಲಂಬನೆ ಏರಿಕೆ ಆಗುತ್ತಿದೆ. ಪರಿಣಾಮ ಹಾಲಿ ಬೆಂಗಳೂರು ಕೆಂಪೇಗೌಡ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ (KIA) ಪ್ರಯಾಣಿಕರ ಒತ್ತಡ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ವಿಮಾನಗಳ ಸಂಖ್ಯೆಯಲ್ಲೂ ಏರಿಕೆ ಆಗಿದೆ. ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯ ವಿಮಾನಗಳು ಇಲ್ಲಿ ಬರುತ್ತಿವೆ.
ನಿತ್ಯ 1.26 ಲಕ್ಷ ಪ್ರಯಾಣಿಕರು, 723 ವಿಮಾನ ಸಂಚಾರ
ಬೆಂಗಳೂರು ಏರ್ಪೋರ್ಟ್ ಕಳೆದ ವರ್ಷ 2024 ರಲ್ಲಿ ಒಟ್ಟು 40.73 ದಶಲಕ್ಷ ಪ್ರಯಾಣಿಕರನ್ನು ದಾಖಲಿಸಿದೆ. ಆ ವರ್ಷದ ಅಕ್ಟೋಬರ್ 20ರಂದು ಒಂದೇ ದಿನದಲ್ಲೇ 1,26,532 ಜನರು ಕೆಐಎ ಮೂಲಕ ಓಡಾಡಿದ್ದಾರೆ. ಬೆಂಗಳೂರು ಏರ್ಪೋರ್ಟ್ ನಿತ್ಯ ಸರಾಸರಿ 723 ವಿಮಾನಗಳ ಸಂಚಾರಕ್ಕೆ ಸಾಕ್ಷಿಯಾಗಿದೆ. ಕೆಐಎ 2023ರಲ್ಲಿ ಒಟ್ಟು 37.2 ದಶಲಕ್ಷ ಪ್ರಯಾಣಿಕರನ್ನು ದಾಖಲಿಸಿತ್ತು. 2025ರಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಯಾಣದಲ್ಲಿ ಹೆಚ್ಚಾಗುವ ನಿರೀಕ್ಷೆಗಳು ಇವೆ.

ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 21.1% ಏರಿಕೆ
ಬೆಂಗಳೂರಿನ ಏರ್ಪೋರ್ಟ್ನಿಂದ ವಿದೇಶಗಳಿಗೆ ತೆರಳುವ, ಅಲ್ಲಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ವಾರ್ಷಿಕವಾಗಿ ಶೇ. 21.1 ರಷ್ಟು ಹೆಚ್ಚಾಗಿದೆ. 11 ಹೊಸ ದೇಶೀಯ ಸ್ಥಳಗಳು ಮತ್ತು 4 ಅಂತಾರಾಷ್ಟ್ರೀಯ ಸ್ಥಳಗಳಿಗೆ ಬೆಂಗಳೂರಿನಿಂದ ವಿಮಾನಗಳು ಓಡಾಡುತ್ತವೆ. ಇನ್ನೂ ಅಂತಾರಾಷ್ಟ್ರೀಯ ವಿಮಾನಗಳ ಆವರ್ತನ ಶೇಕಡಾ 21ರಷ್ಟು ಹೆಚ್ಚಾಗಿದೆ.
ಭವಿಷ್ಯದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಜನದಟ್ಟಣೆ ಹೊರೆ ತಗ್ಗಿಸುವ ದೂರದೃಷ್ಠಿ ಕಾರಣದಿಂದ 2ನೇ ಏರ್ಪೋರ್ಟ್ ಸ್ಥಾಪನೆಗೆ ಮುಂದಾಗಿದೆ. ಇದು ಸ್ಥಾಪನೆ ಆಗುವ ಹೊತ್ತಿಗೆ ಹಾಲಿ ಏರ್ಪೋರ್ಟ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಬಹುದು ಅಂತಲೂ ಅಂದಾಜಿಸಲಾಗಿದೆ. ಇದೆಲ್ಲ ಕಾರಣಗಳಿಂದ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಅತ್ಯವಶ್ಯಕವಾಗಿದೆ.
ತಮಿಳುನಾಡು ಸಹ ಹೊಸ ಏರ್ಪೋರ್ಟ್ ಘೋಷಣೆ
ಮೊದಲಿಗೆ ಕರ್ನಾಟಕ ಸರ್ಕಾರ ಜನಪರ ಕಾಳಜಿ ಮೆರೆದಿತ್ತು. ಹಾಲಿ ಏರ್ಪೋರ್ಟ್ ಹೊರೆ ತಗ್ಗಿಸಲು ಪ್ಲಾನ್ ಮಾಡಿಕೊಂಡು ಬೆಂಗಳೂರಿಗೆ ಎರಡನೇ ಅಂತಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯ ಇದೆ. ಹೊಸ ಏರ್ಪೋರ್ಟ್ ನಿರ್ಮಿಸುವ ಬಗ್ಗೆ ಘೋಷಣೆ ಮಾಡಿತ್ತು. ಇದು ಕರ್ನಾಟಕ ಸರ್ಕಾರ ಹಾಗೂ ಸಚಿವ ಎಂಬಿ ಪಾಟೀಲ್ ದೂರದೃಷ್ಠಿಗೆ ಹಿಡಿದ ಕನ್ನಡಿಯಾಗಿದೆ.
ಕರ್ನಾಟಕ ನಿರ್ಧಾರ ಪ್ರಕಟಿಸಿ ಬೆನ್ನಲ್ಲೆ ಹೊಸೂರಿನಲ್ಲಿ ತಾವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಆ ಸರ್ಕಾರ ಘೋಷಿಸಿತು. ಅದಕ್ಕೂ ಮೊದಲೇ ನಮ್ಮ ಮೆಟ್ರೋ ಅನ್ನು ಹೊಸೂರಿಗೆ ಕನೆಕ್ಟ್ ಮಾಡುವ ಕಾರ್ಯಸಾಧ್ಯತಾ ಪ್ರಸ್ತಾವನೆಯನ್ನೂ ಅಲ್ಲಿನ ಮೆಟ್ರೋ ನಿಗಮ (CMRL) BMRCLಗೆ ತಿಳಿಸಿತ್ತು. ಸಾಕಷ್ಟು ವಿರೋಧ ಕೇಳಿ ಬಂದ ಬಳಿಕ ನಮ್ಮ ಮೆಟ್ರೋ ಪ್ರಸ್ತಾವನೆಯನ್ನು ಸದ್ಯ ಕೈಬಿಟ್ಟಿದೆ. ಇದರ ನಂತರ ತಮಿಳುನಾಡು ಸರ್ಕಾರದ ಹೊಸ ಏರ್ಪೋರ್ಟ್ ನಿರ್ಮಾಣಕ್ಕೂ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ನೆರೆ ರಾಜ್ಯಕ್ಕೆ ಕರ್ನಾಟಕ ಪೈಪೋಟಿ
ಕೇಂದ್ರಕ್ಕೆ ಎರಡು ರಾಜ್ಯ ಸರ್ಕಾರಗಳು ಹೊಸ ಏರ್ಪೋರ್ಟ್ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿವೆ. ಒಂದು ಏರ್ಪೋರ್ಟ್ ನಿರ್ಮಾಣವಾದರೆ 150 ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಏರ್ಪೋರ್ಟ್ಗೆ ಅವಕಾಶ ಇಲ್ಲ. ಹೀಗಾಗಿ ಬೆಂಗಳೂರು ಏರ್ಪೋರ್ಟ್ ನಿರ್ಮಿಸಲು ಜಾಗ ಅಂತಿಮಗೊಳಿಸುವುದು, DPR ತಯಾರಿಕೆ ಸೇರಿದಂತೆ ಯೋಜನೆಗೆ ಕರ್ನಾಟಕ ವೇಗ ನೀಡಿದೆ. ಕೇಂದ್ರ ವರಿಷ್ಠರಿಗೆ ಬೆಂಗಳೂನ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡುತ್ತಿದೆ. ಸದ್ಯ ಎಲ್ಲರ ಚಿತ್ತ ಕೇಂದ್ರ ನೀಡುವ ಅನುಮೋದನೆಯತ್ತೆ ನೆಟ್ಟಿದೆ. ಹೀಗಾಗಿಯೇ ಎರಡನೇ ಏರ್ಪೋರ್ಟ್ ನಿರ್ಮಾಣಕ್ಕಾಗಿ ಎರಡು ರಾಜ್ಯಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ ಎಂದನಿಸುತ್ತಿದೆ.












Click it and Unblock the Notifications