ಬೆಂಗಳೂರು; ಗಿರಿಧಾಮ ಲೇಔಟ್ ಆಸ್ತಿ ವಿವಾದ ಏನು?
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಗಿರಿಧಾಮ ಲೇಟೌನಲ್ಲಿ ಆಸ್ತಿ ವಿವಾದ ಗೊಂದಲ ಉಂಟು ಮಾಡಿದೆ. ಲೇಔಟ್ನ ನಿವಾಸಿಗಳಿಗೆ ಪುಡಿ ರೌಡಿಗಳ ಕಾಟವೂ ಎದುರಾಗಿದೆ.
ಭಾನುವಾರ ನಿವಾಸಿಗಳ ಜೊತೆ ಪೊಲೀಸರು ಮತುಕತೆ ನಡೆಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರತಿಭಟನೆ ಮಾಡದಂತೆ ತಡೆದರು. ಸ್ಥಳಕ್ಕೆ ಆಗಮಿಸಿ ನಿವಾಸಿಗಳ ಸಂಕಷ್ಟ ಕೇಳಿದರು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರು.
ಸುಮಾರು 47 ಮನೆಗಳಿರುವ ಗಿರಿಧಾಮ ಲೇಔಟ್ ಇನ್ನು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಇಲ್ಲಿ ಹಲವಾರು ಖಾಲಿ ನಿವೇಶನಗಳು ಸಹ ಇದ್ದು, ಮನೆಗಳನ್ನು ಕಟ್ಟಲು ಜನರು ಸುಮಾರು 30 ಸೈಟ್ಗಳಲ್ಲಿ ಶೆಡ್ ಹಾಕಿದ್ದಾರೆ.

ಆದರೆ, ಲೇಔಟ್ನ ಆಸ್ತಿ ವಿವಾದ ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಕಳೆದ ವಾರ ಪುಡಿ ರೌಡಿಗಳ ನಡುವಿನ ಗ್ಯಾಂಗ್ ವಾರ್, ಜೆಸಿಬಿ ತಂದು ಸೈಟ್ ಕಾಪೌಂಡ್ ಒಡೆಯುವ ಪ್ರಯತ್ನ ನಡೆದ ಬಳಿಕ ನಿವಾಸಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಗಿರಿಧಾಮ ಲೇಔಟ್ನಲ್ಲಿನ ಆಸ್ತಿ ವಿವಾದದ ಗೊಂದಲದ ಬಗ್ಗೆ ನಿವಾಸಿ ಸಚ್ಚಿದಾನಂದ್ ಒನ್ ಇಂಡಿಯಾಕ್ಕೆ ವಿವರಣೆ ನೀಡಿದ್ದಾರೆ. 71ನೇ ಸರ್ವೇ ನಂಬರ್ನಲ್ಲಿ ಅತ್ತೆ ನಾಗರತ್ನಮ್ಮ (83) ಹೆಸರಿನಲ್ಲಿ ಸೈಟ್ ಅನ್ನು ಅವರು ಹೊಂದಿದ್ದಾರೆ. ಆದರೆ, ಗೋಪಾಲ್ ಎನ್ನುವವರು ಸೈಟ್ ನಮ್ಮದು ಎಂದು ಹೇಳುತ್ತಿದ್ದಾರೆ.
"ರಾಮಕೃಷ್ಣಯ್ಯ ಎಂಬುವವರಿಂದ ನಾವು ಸೈಟ್ ಖರೀದಿ ಮಾಡಿ, ಖಾತೆ ಮಾಡಿಸಿಕೊಂಡಿದ್ದೇವೆ. ಇದುವರೆಗೂ ಎಲ್ಲಾ ತೆರಿಗೆ ಕಟ್ಟಿದ್ದೇವೆ. ಆದರೆ, ರಾಮಕೃಷ್ಣಯ್ಯ ಅವರಿಗೆ ಜಿಪಿಎ ನೀಡಿದ ದಾಮ್ ಜೀ ಪಟೇಲ್ ಇನ್ನೊಬ್ಬರಿಗೆ ಸಹ ಜಿಪಿಎ ನೀಡಿದ್ದಾರೆ ಇದು ಕಾನೂನು ಪ್ರಕಾರ ಅಕ್ರಮ" ಎಂದು ಸಚ್ಚಿದಾನಂದ್ ಹೇಳಿದರು.
"ನಮ್ಮ ಬಳಿ ಜಿಪಿಎ ಇದೆ, ವಿವಾದದ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಮಧ್ಯಂತರ ಆದೇಶವಿದೆ. ಆದರೆ, ಗೋಪಾಲ್ ಎಂಬುವವರು ಸೈಟ್ನ ಕಾಂಪೌಂಡ್ ಕೆಡವಲು ಹೊರಟಿದ್ದಾರೆ. ಇವರಿಗೆ ಪೊಲೀಸರ ರಕ್ಷಣೆ ಸಹ ಇದೆ" ಎಂದು ಸಚ್ಚಿದಾನಂದ್ ಆರೋಪಿಸಿದರು.
"ಲಕ್ಷ ಗಟ್ಟಲೇ ಹೂಡಿಕೆ ಮಾಡಿದ್ದೇವೆ. ಇಂದು ಪ್ರತಿಭಟನೆ ತಡೆಯಲು 144 ಸೆಕ್ಷನ್ ನೆಪ ಹೇಳಿಕೊಂಡು ಬಂದ ಪೊಲೀಸರು, ಮೊನ್ನೆ150 ಜನರು ಬಂದು ಗಲಾಟೆ ಮಾಡುವಾಗ ಅವರಿಗೆ ರಕ್ಷಣೆ ಕೊಟ್ಟಿದ್ದಾರೆ" ಎಂದು ಸಚ್ಚಿದಾನಂದ್ ದೂರಿದರು.
ಇದೇ ರೀತಿ ವಯೋವೃದ್ಧರು ಮಾಲೀಕರಾಗಿರುವ ಸೈಟ್ ನಮ್ಮದು ಎಂದು ಕೆಲವರು ತರಕಾರು ತೆಗೆಯುತ್ತಿದ್ದಾರೆ. ಇಂತಹವರಿಗೆ ಪುಡಿ ರೌಡಿಗಳ ಬೆಂಬಲವೂ ಇದ್ದು, ಸೈಟ್ ಬಿಟ್ಟುಕೊಡಿ ಎಂದು ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂಬ ಆರೋಪವೂ ಇದೆ.
ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಸೈಟ್ ತೆಗೆದುಕೊಂಡವರು, ಮನೆ ಕಟ್ಟಿಕೊಂಡವರು ಈಗ ಆಸ್ತಿವಿವಾದದ ಗೊಂದಲಕ್ಕೆ ಸಿಲುಕಿದ್ದಾರೆ. ಗಿರಿಧಾಮ ನಿವಾಸಿಗಳ ಸಂಘ ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದೆ.
ನಿವಾಸಿಗಳ ಸಂಘದ ಅಧ್ಯಕ್ಷ ಜೋಸೆಫ್ ಹೂವರ್ ನಿವಾಸದಲ್ಲಿ ಪೊಲೀಸರು, ಲೇಔಟ್ ನಿವಾಸಿಗಳು ಭಾನುವಾರ ಸಭೆ ನಡೆಸಿದರು. ಪೊಲೀಸರು ಮತ್ತೊಮ್ಮೆ ಇಲ್ಲಿ ಗಲಭೆ ನಡೆಯದಂತೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.
ನಿವಾಸಿಗಳ ದೂರುಗಳನ್ನು ವಿವರವಾಗಿ ಆಲಿಸಿರುವ ಪೊಲೀಸರು ಸೂಕ್ತ ರಕ್ಷಣೆ ಕೊಡುವ ಭರವಸೆ ಕೊಟ್ಟಿದ್ದಾರೆ. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications