ಬಿಜೆಪಿಯಲ್ಲಿ ಒಳಜಗಳ ಎಲ್ಲಿದೆ, ಬಿಎಸ್ ವೈ ಮುಖ್ಯಮಂತ್ರಿ ಕ್ಯಾಂಡಿಡೇಟು: ಈಶ್ವರಪ್ಪ
ಯಡಿಯೂರಪ್ಪನವರ ಬಗ್ಗೆ ವೇದಿಕೆಗಳ ಮೇಲೆ ಬಾಯಿಗೆ ಬಂದಂತೆ ಬಯ್ಯುವ ಈಶ್ವರಪ್ಪನವರು ಮಾಧ್ಯಮದವರ ಮುಂದೆ ಮಾತನಾಡುವ ವೇಳೆಗಾಗಲೇ ಬಿಎಸ್ ವೈ ನಮ್ಮ ಪಕ್ಷದ ಮುಖ್ಯಮಂತ್ರಿ ಕ್ಯಾಂಡಿಡೇಟು ಅಂತಾರೆ
ಬೆಂಗಳೂರು, ಏಪ್ರಿಲ್ 27: ಬಿಜೆಪಿ ಮುಖಂಡ-ವಿಧಾನಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಒಂದು ಸಲ ಯಡಿಯೂರಪ್ಪ ನವರಿಗೆ ಹುಷಾರ್ ಅಂತಾರೆ. ಬಾಯಿಗೆ ಸಿಕ್ಕ ಹಾಗೆ ಬೈತಾರೆ. ಅತೃಪ್ತರದೊಂದ ಸಭೆ ನಡೆಸಿ, ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ನಾವೆಲ್ಲ ಮುಖಂಡರು ಒಂದು ಕಡೆ ಸೇರಿದ್ದೀವಿ ಅಷ್ಟೇ ಅಂತಾರೆ.
ಪಕ್ಷದ ವರಿಷ್ಠರು ಸಭೆಯಲ್ಲಿ ಭಾಗವಹಿಸಬೇಡಿ ಎಂದು ನೀಡಿದ್ದ ಸೂಚನೆಯನ್ನು ಧಿಕ್ಕರಿಸುತ್ತಾರೆ. ಮತ್ತೆ ಸಭೆ ಕರೆದಿದ್ದನ್ನು ಸಮರ್ಥಿಸಿಕೊಂಡು, ಇದು ಪಕ್ಷದ ಬಲವರ್ಧನೆಗಾಗಿ ಕರೆದಿರುವ ಸಭೆ ಎನ್ನುತ್ತಾರೆ. ಮೈಕ್ ಮುಂದೆ ನಿಂತು ಯಡಿಯೂರಪ್ಪನವರ ವಿರುದ್ಧ ಗುಡುಗಿ, ಕೆಳಗೆ ಇಳಿದಾಕ್ಷಣ 2018ರ ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೆಗಲ ಮೇಲೆ ಕೂರಿಸಿಕೊಳ್ತಾರೆ.[ಈಶ್ವರಪ್ಪ ಆ್ಯಂಡ್ ಟೀಮ್ ಉಚ್ಛಾಟಿಸಿ- ಗುಡುಗಿದ ಬಿಜೆಪಿ ನಾಯಕರು]

"ನಮ್ಮ ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲ. ನಾವೆಲ್ಲ ಸಂಘಟನೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಾ ಇದ್ದೀವಿ. ನಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ" ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿದ್ದಾರೆ.

ಈ ಹೇಳಿಕೆಗೆ ಪೂರ್ತಿ ತದ್ವಿರುದ್ಧವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅತೃಪ್ತರ ಸಭೆಯಲ್ಲಿ ಬಿಎಸ್ ವೈನ ಎಗಾದಿಗಾ ಝಾಡಿಸಿದ್ದಾರೆ ಈಶ್ವರಪ್ಪ. ಈ ಸಭೆಯಲ್ಲಿ ಭಾನುಪ್ರಕಾಶ್ ಅಂಥ ಮುಖಂಡರು ಯಡಿಯೂರಪ್ಪನವರು 'ಅನರ್ಹರು' ಎಂದು ಕರೆದಿದ್ದರೆ, ಈಶ್ವರಪ್ಪನವರಂತೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಾರ್ನಿಂಗ್ ಕೊಟ್ಟಿದ್ದಾರೆ.[ಅತೃಪ್ತರ ಸಮಾವೇಶದಲ್ಲಿ ಈಶ್ವರಪ್ಪ-ಬಿಎಸ್ವೈ ಬೆಂಬಲಿಗರ ಮಾರಾಮಾರಿ]

ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ಅಮಾನತು ಮಾಡ್ತೀರಾ? ನಮ್ಮ ಜತೆ ಹುಷಾರಾಗಿರಿ. ಈ ಸಭೆ ನಡೆಸಬಾರದು ಅಂತ ನಮಗೆ ಎಚ್ಚರಿಕೆ ಕೊಡ್ತೀರಾ? ನಾವೀಗ ಈ ಸಭೆಯಿಂದ ನಿಮಗೆ ಎಚ್ಚರಿಕೆ ಕೊಡ್ತೀವಿ. ಪಕ್ಷವನ್ನು ಬಿಟ್ಟು ಹೋದವರಿಗೆ ನಮಗೆ ಬುದ್ಧಿ ಹೇಳುವ ಹಕ್ಕಿಲ್ಲ" ಎಂದು ಈಶ್ವರಪ್ಪ ಹೇಳಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಕಟ್ಟಿದಿರಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಕಾರಣ ಆದಿರಿ ಎಂದು ಯಡಿಯೂರಪ್ಪನವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಈಶ್ವರಪ್ಪ, ಯಾವ ಮಾತು ಆಡಿದರೆ ಸಿಟ್ಟು ಬರುತ್ತದೆ ಎಂದು ಗೊತ್ತಿದ್ದು, ಅಂಥದೇ ಮಾತು-ವಿಚಾರ ಎಳೆದು ತಂದು ಪದೇಪದೇ ಚುಚ್ಚಿದರು.[ಹೈಕಮಾಂಡ್ ಮತ್ತು ಜನತೆ ಎಲ್ಲವನ್ನೂ ನೋಡುತ್ತಿದೆ: ಬಿ ಎಸ್ ವೈ]

ಆದರೆ, ಯಾವಾಗ ಯಡಿಯೂರಪ್ಪನವರು ಅತೃಪ್ತರ ಸಭೆ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿದರೋ ಈಶ್ವರಪ್ಪ ವರಸೆಯನ್ನೇ ಬದಲಿಸಿಬಿಟ್ಟರು. ಅಷ್ಟಕ್ಕೂ ಬಿಎಸ್ ವೈ ಹೇಳಿದ್ದೇನು ಅಂತೀರಾ? ಹೈ ಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂದರು ನೋಡಿ. ಆ ನಂತರ ಈಶ್ವರಪ್ಪನವರು ಯೂ ಟರ್ನ್ ತಗೊಂಡು, ಉಲ್ಟಾ ಹೊಡೆದೇಬಿಟ್ಟರು.












Click it and Unblock the Notifications