ನೈಸ್ ರಸ್ತೆ ದರೋಡೆ ಬಗ್ಗೆ ಕೇಳಿದ್ರೆ ಅಶೋಕ್ ಖೇಣಿ ಬಾಯಲ್ಲಿ ಬಂದ ಮಾತುಗಳು ಕೇಳಿ!
ಬೆಂಗಳೂರು, ಅ. 09: ನೈಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಮೊಬೈಲ್ ದೋಚಿದ್ದಾರೆ. ನೈಸ್ ರಸ್ತೆಯಲ್ಲಿ ಪದೇ ಪದೇ ದರೋಡೆ ಆಗುತ್ತಿರುವ ಬಗ್ಗೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿಯವರನ್ನು ಕೇಳಿದ್ರೆ, ನೈಸ್ ರೋಡಲ್ಲಿ ಆಗಿರೋದಕ್ಕೆ ಪ್ರೂಪ್ ಇದೆಯಾ ? ನೀವು ಹಾಕಿರುವ ಕನ್ನಡ ನನಗೆ ಓದೋಕೆ ಬರಲ್ಲ. ನನಗೆ ಏನೂ ಗೊತ್ತಿಲ್ಲ ಅಂತ ಹಾರಿಕೆ ಉತ್ತರ ನೀಡಿ ಕೈ ತೊಳೆದುಕೊಂಡಿದ್ದಾರೆ.
ಒಂದು ಕಿ.ಮೀ. ಪ್ರಯಾಣಕ್ಕೆ ಐದು ರೂಪಾಯಿ ವಸೂಲಿ ಮಾಡುವ ನೈಸ್ ರಸ್ತೆ ಸಂಪರ್ಣ ಖಾಸಗಿ ರಸ್ತೆ. ಪ್ರತಿ ಏಳು ಕಿ.ಮೀ. ಗೆ ಒಂದು ಟೋಲ್ ಬೂತ್ ಹಾಕಿಕೊಂಡು ಹಣ ವಸೂಲಿಗೆ ನಿಂತಿರುವ ನೈಸ್ ಸಂಸ್ಥೆ, ತನ್ನ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರ ರಕ್ಷಣೆ ಕೂಡ ಅದರದ್ದೇ ಆಗಿರಬೇಕು ಅಲ್ಲವೇ ? ಪದೇ ಪದೇ ನೈಸ್ ರಸ್ತೆಯಲ್ಲಿ ದರೋಡೆ, ಸುಲಿಗೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಒಂದು ವಾಹನ ಕೂಡ ಟೋಲ್ ಶುಲ್ಕ ಕಟ್ಟದೇ ತಪ್ಪಿಸಿಕೊಳ್ಳಬಾರದೆಂದು ಬಾರ್ ಕೋಡ್ ಪರಿಚಯಿಸಿರುವ ನೈಸ್ ಸಂಸ್ಥೆ ಪ್ರಯಾಣಿಕರ ಸುರಕ್ಷತೆಗೂ ಅಷ್ಟೇ ಮಹತ್ವ ಕೊಡಬೇಕಲ್ಲವೇ ? ಕಳೆದ ರಾತ್ರಿ ನೈಸ್ ರಸ್ತೆಯಲ್ಲಿ ವರದಿಯಾಗಿರುವ ದರೋಡೆ ಬಗ್ಗೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರ ಅಭಿಪ್ರಾಯ ಕೇಳಿದಾಗ ಹಾರಿಕೆ ಉತ್ತರ ನೀಡಿದ್ದಾರೆ.
ಬನ್ನೇರುಘಟ್ಟ ಸಮೀಪ ನೈಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಶಿವಕುಮಾರ್ ಎಂಬಾತನನ್ನು ಅಡ್ಡ ಗಟ್ಟಿರುವ ದರೋಡೆಕೋರರು ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೂವರು ದುಷ್ಕರ್ಮಿಗಳಿಂದ ಚಾಕು ಇರಿತಕ್ಕೆ ಒಳಗಾಗಿ ಒದ್ದಾಡುತ್ತಿದ್ದ ಶಿವಕುಮಾರ್ ನನ್ನು ನೋಡಿ ಸಾರ್ವಜನಿಕರೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರು ದುಷ್ಕರ್ಮಿಗಳು ಹಣ ಮತ್ತು ಮೊಬೈಲ್ ಕಸಿದ ವೇಳೆ ಸಿಮ್ ಕೊಡುವಂತೆ ಶಿವಕುಮಾರ್ ಕೇಳಿದ್ದಾರೆ. ನೀನು ಸಿಮ್ ವಾಪಸು ಕೇಳ್ತೀಯಾ ಎಂದು ಹೆದರಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ವಿಜಯಶ್ರೀ ಆಸ್ಪತ್ರೆಯಲ್ಲಿ ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳೀಯ ಪೊಲೀಸರು ಶಿವಕುಮಾರ್ ನ ಹೇಳಿಕೆ ಪಡೆದಿದ್ದಾರೆ.

ಪೊಲೀಸರ ನಿರ್ಲಕ್ಷ್ಯ:
ಘಟನೆ ಬಗ್ಗೆ ಹುಳಿಮಾವು ಪೊಲೀಸರಿಗೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಬಂದು ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ಇದೆಲ್ಲಾ ಸಣ್ಣ ಪ್ರಕರಣ ಬಿಟ್ಟು ಬಿಡಿ. ವರದಿ ಮಾಡಬೇಡಿ. ಚಾಕುವಿನಿಂದ ಇರಿಯೋದು, ಮೊಬೈಲ್ ಕದಿಯುವುದು ಸಾಮಾನ್ಯ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಶಿವಕುಮಾರ್ ಕುಟುಂಬಸ್ಥರು ಕಿಡಿ ಕಾರಿದ್ದಾರೆ.

ಅಶೋಕ್ ಖೇಣಿಯ ಕನ್ನಡ ಪ್ರೇಮ ಅನಾವರಣ:
ನೈಸ್ ರಸ್ತೆಯಲ್ಲಿ ಪದೇ ಪದೇ ಅಪರಾಧ ಕೃತ್ಯಗಳು ನಡೆಯುತ್ತಿರುವ ಬಗ್ಗೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರನ್ನು ಕೇಳಿದರೆ, ನೈಸ್ ರೋಡ್ ಅಲ್ಲಿ ಆಗಿರೋದಕ್ಕೆ ಪ್ರೂಫ್ ಇದೆಯಾ ? ಇನ್ವೆಸ್ಟಿಗೇಷನ್ ಆಗಿದೆಯಾ ? ಪೊಲೀಸರು ಬಿ ಫಾರ್ಮ್ , ಬಿ ರಿಪೋರ್ಟ್ ಹಾಕಿದ್ದಾರಾ? ಇನ್ವೆಸ್ಟಿಗೇಷನ್ ಆಗಲಿ, ರಿಪೋರ್ಟ್ ಬರಲಿ. ಹೊರಗೆ ಹೊಡೆದು ತಂದು ಇಲ್ಲಿ ಬಂದು ನಮ್ಮ ರಸ್ತೆಯಲ್ಲಿ ಹಾಕ್ತಾರೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಅಲ್ಲಾ ಸ್ವಾಮಿ, ನಿಮ್ಮ ರಸ್ತೆಯಲ್ಲಿ ಬಾಡಿ ತಂದು ಹಾಕಿರುವ ಬಗ್ಗೆ ನಾನು ಕೇಳ್ತಿಲ್ಲ. ನಾನು ಕೇಳ್ತಿರೋದು ನಿನ್ನೆ ರಾತ್ರಿ ಆಗಿರುವ ದರೋಡೆ ಬಗ್ಗೆ ಅಂತ ಕೇಳಿದ್ರೆ ನೀವು ನೀಡಿದ್ರಾ ? ಪೊಲೀಸರ ವರದಿ ಬರಲಿ, ಅಮೇಲೆ ಹೇಳ್ತೇನೆ ಅಂತ ಹಾರಿಕೆ ಉತ್ತರ ಕೊಟ್ಟು ಪೋನ್ ಕಡಿತಗೊಳಿಸಿದರು. ನೈಸ್ ರಸ್ತೆಯಲ್ಲಿ ಕಳೆದ ರಾತ್ರಿ ಸಂಭವಿಸಿದ್ದ ದರೋಡೆ ಪ್ರಕರಣ ಸಂಬಂಧ ಕನ್ನಡದದಲ್ಲಿ ವಿವರಗಳನ್ನು ಅಶೋಕ್ ಖೇಣಿ ಅವರ ಮೊಬೈಲ್ ಗೆ 'ಒನ್ ಇಂಡಿಯಾ ಕನ್ನಡ' ಕಳುಹಿಸಿ ಪ್ರತಿಕ್ರಿಯೆ ಕೇಳಿದಾಗ, ಆವರು ತೋರಿದ ಕನ್ನಡ ಪ್ರೇಮ ಅಚ್ಚರಿ ಹುಟ್ಟಿಸುವಂತಿದೆ. "ನನಗೆ ಕನ್ನಡ ಮೆಸೇಜ್ ಓದುವುದು ಬರಲ್ಲ'' ಎಂದು ಹೇಳಿದ್ದಾರೆ. ದೇಶದಲ್ಲಿ ಎಲ್ಲೂ ಇಲ್ಲದಷ್ಟು ಶುಲ್ಕ ವಸೂಲಿ ಮಾಡುವ ನೈಸ್ ರಸ್ತೆಯಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಅಶೋಕ್ ಖೇಣಿ ಹಾರಿಕೆ ಉತ್ತರ ನೀಡಿ ಕೈ ತೊಳೆದುಕೊಂಡಿದ್ದಾರೆ.












Click it and Unblock the Notifications