ಕಾದ ರಸ್ತೆ ಮೇಲೆ ಉರುಳು ಸೇವೆ ಮಾಡಿ ವಾಟಾಳ್ ಮತ ಯಾಚನೆ
ಬೆಂಗಳೂರು, ಏಪ್ರಿಲ್ 11 : ಬೆಂಗಳೂರಿನ 34 ಡಿಗ್ರಿಯ ಸುಡುವ ಬಿಸಿಲು, ದೋಸೆ ಕಾವಲಿಯಂತೆ ಕಾದ ಡಾಂಬಾರು ರಸ್ತೆ. ಕೆ.ಆರ್.ಮಾರ್ಕೆಟ್ ಬಳಿ ಬಿಳಿ ಬಣ್ಣದ ಬಟ್ಟೆ ತೊಟ್ಟ ವ್ಯಕ್ತಿ ಒಂದು ಕೈಯಲ್ಲಿ ಚಪ್ಪಲಿ ಹಿಡಿದು ರಸ್ತೆ ಮೇಲೆ ಉರುಳು ಸೇವೆ ಮಾಡುತ್ತಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುಡವ ಬಿಸಿಲಿನಲ್ಲಿಯೂ ಉರುಳು ಸೇವೆ ಮಾಡುತ್ತಿರುವುದು ಯಾರು? ಎಂದು ನೋಡಲು ಹೋದರೆ ಅಲ್ಲಿ ಕಂಡಿದ್ದು ವಾಟಾಳ್ ನಾಗರಾಜ್. ವಿಭಿನ್ನವಾಗಿ ಪ್ರತಿಭಟನೆ ಮಾಡುವ ವಾಟಾಳ್ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕಿಳಿದಿದ್ದಾರೆ.
ಬೆಂಗಳೂರು ದಕ್ಷಿಣದಿಂದ ಚುನಾವಣಾ ಕಣಕ್ಕಿಳಿದ ವಾಟಾಳ್ ನಾಗರಾಜ್
ಕುದುರೆಗಾಡಿಯಲ್ಲಿ ಬಂದು ನಾಮಪತ್ರವನ್ನು ಸಲ್ಲಿಸಿದ್ದ ವಾಟಾಳ್ ನಾಗರಾಜ್ ಅವರು ವಿಭಿನ್ನವಾಗಿಯೇ ಪ್ರಚಾರದಲ್ಲಿ ತೊಡಗಿದ್ದಾರೆ. ಏಪ್ರಿಲ್ 18ರಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಚುನಾವಣೆ ನಡೆಯಲಿದ್ದು, ವಾಟಾಳ್ ಉರುಳು ಸೇವೆ ಮೂಲಕ ಗುರುವಾರ ಪ್ರಚಾರ ಮಾಡಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರು ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ನಿಂದ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ. ಚಪ್ಪಲಿ ಹಿಡಿದು ಉರುಳು ಸೇವೆ ಮಾಡಿದ ವಾಟಾಳ್ ನಾಗರಾಜ್ ಈ ಬಾರಿ ಗೆಲುವು ನನ್ನದೇ ಎನ್ನುವುದನ್ನು ಹೇಳಲು ಮರೆಯಲಿಲ್ಲ....
ಚಪ್ಪಲಿ ಎಷ್ಟು ಮುಖ್ಯ
ವಾಟಾಳ್ ನಾಗರಾಜ್ ಅವರ ಚುನಾವಣಾ ಚಿನ್ನೆ ಚಪ್ಪಲಿ. 'ಚಪ್ಪಲಿ ಅನ್ನೋದು ಮನುಷ್ಯನಿಗೆ ಎಷ್ಟು ಮುಖ್ಯವೋ ಹಾಗೆ ನಾನೂ ಕೂಡಾ ನಮ್ಮ ಕರ್ನಾಟಕದ ಜನತೆಗೆ ಮುಖ್ಯ. ಚಪ್ಪಲಿ ಹಿಡಿದು ನಾನು ಚುನಾವಣೆ ಗೆಲ್ಲುತ್ತೇನೆ' ಎಂದು ವಾಟಾಳ್ ನಾಗರಾಜ್ ಹೇಳಿದರು.
ಘರ್ಜಿಸುವ ಧೈರ್ಯವಿದೆ
'ಕರ್ನಾಟಕದ ಜನರ ಪರ, ಸಂಸತ್ನಲ್ಲಿ ಘರ್ಜಿಸುವ ಧೈರ್ಯ ನನ್ನೊಬ್ಬನಿಗೆ ಮಾತ್ರ ಇದೆ. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ಈ ಸಲದ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವೆ' ಎಂದು ವಾಟಾಳ್ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಮೂರು ಕ್ಷೇತ್ರಗಳಲ್ಲಿ ಪ್ರಚಾರ
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಗುರುವಾರ ಕೆ.ಆರ್.ಮಾರ್ಕೆಟ್ ಸಮೀಪ ಉರುಳು ಸೇವೆ ಮಾಡುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದರು. ಚಿಕ್ಕಪೇಟೆ, ಜಯನಗರ, ಬಸವನಗುಡಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅವರು ಇಂದು ಪ್ರಚಾರವನ್ನು ನಡೆಸುತ್ತಿದ್ದಾರೆ.
ಏಪ್ರಿಲ್ 2ರಿಂದ ಪ್ರಚಾರ
ಏಪ್ರಿಲ್ 2ರಂದು ವಾಟಾಳ್ ನಾಗರಾಜ್ ಅವರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ವಿಜಯನಗರ, ಆರ್ಪಿಸಿ ಲೇಔಟ್ನಲ್ಲಿ ಒಂದು ಸುತ್ತಿನ ಪ್ರಚಾರವನ್ನು ಈಗಾಗಲೇ ಅವರು ಮುಗಿಸಿದ್ದಾರೆ.