ಪ್ರೇಮಿಗಳ ದಿನದಂದು ರಜೆ ಘೋಷಿಸಿ: ವಾಟಾಳ್ ನಾಗರಾಜ್
ಬೆಂಗಳೂರು, ಫೇಬ್ರವರಿ 14: ಪ್ರೇಮಿಗಳೇ ಭಯ ಬಿಡಿ ನಿಮ್ಮ ಬೆಂಬಲಕ್ಕೆ ವಾಟಾಳ್ ನಾಗರಾಜ್ ಇದ್ದಾರೆ. ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಪ್ರೇಮಿಗಳ ದಿನಕ್ಕೆ ಬೆಂಬಲ ಘೋಷಿಸಿ ಪ್ರೇಮಿಗಳಿಗೆ ವಿಶೇಷ ಯೋಜನೆಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.
ತಮ್ಮ ಚಿತ್ರ ವಿಚಿತ್ರ ಪ್ರತಿಭಟನೆಗಳು ಆತುರದ ಹೇಳಿಕೆಗಳಿಂದ ಪ್ರಸಿದ್ಧವಾಗಿರುವ ವಾಟಾಳ್ ನಾಗರಾಜ್ ಅವರು ಪ್ರೇಮಿಗಳ ದಿನದಂದೂ ಸಹ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಆದರೆ ಅದು ಪ್ರೇಮಿಗಳ ಪರ ಪ್ರತಿಭಟನೆ.
ವಾಟಾಳ್ ನಾಗರಾಜ್ ಅವರು ಪ್ರೇಮಿಗಳ ದಿನದಂದು ರಜೆ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಬಲು ಒತ್ತಾಯಿಸಿದ್ದಾರೆ. ಎರಡು ಕುರಿಗಳಿಗೆ ಮದುವೆ ಮಾಡಿ ವಿನೂತನವಾಗಿ ಸರ್ಕಾರಕ್ಕೆ ತಮ್ಮ ಒತ್ತಾಯ ಹೇರಿದ್ದಾರೆ ವಾಟಾಳ್. ಪ್ರೇಮಿಗಳ ದಿನದಂದು ರಜೆ ನೀಡುವ ಜೊತೆಗೆ ಪ್ರೇಮ ವಿವಾಹವಾದವರಿಗೆ ಸರ್ಕಾರವೇ ರು.50000 ರಿಂದ 100000 ಪ್ರೋತ್ಸಾಹ ಧನ ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಕೇಸರಿ ಪಡೆಗಳ ಭಯದಿಂದ ಆಸೆ ಇದ್ದರೂ ನಲ್ಲ/ನಲ್ಲೆಯನ್ನು ಭೇಟಿ ಆಗದೆ ಒದ್ದಾಡುತ್ತಿದ್ದ ಪ್ರೇಮಿಗಳಿಗೆ ವಾಟಾಳ್ ನಾಗರಾಜ್ ಪ್ರೇಮಿಗಳ ದಿನಕ್ಕೆ ಬೆಂಬಲ ನೀಡಿರುವುದು ಅಲ್ಪ ಧೈರ್ಯ ತಂದಿರಲಿಕ್ಕೂ ಸಾಕು.
ಸದಾ ಪ್ರೇಮಿಗಳ ಬೆಂಬಲಕ್ಕೆ ನಿಲ್ಲುವ ವಾಟಾಳ್ ಕಳೆದ ವರ್ಷ ಪ್ರೇಮಿಗಳ ದಿನದಂದು ಪ್ರೇಮ ರಥ ಏರಿ ನಗರದೆಲ್ಲೆಡೆ ಗುಲಾಬಿ ಚೆಲ್ಲುತ್ತಾ ಸಂಚಿರಿಸಿ ಪ್ರೇಮಿಗಳಿಗೆ ಬೆಂಬಲ ಸೂಚಿಸಿದ್ದರು.












Click it and Unblock the Notifications