ಮಕ್ಕಳಲ್ಲಿ ಕೊರೆನಾ ಲಸಿಕೆ ಪ್ರಮಾಣ ಇಳಿಮುಖ, ಅಭಿಯಾನಕ್ಕೆ ಬಿಬಿಎಂಪಿ ಯೋಜನೆ
ಬೆಂಗಳೂರು ಮೇ 24: ಈಗಾಗಲೇ ರಾಜ್ಯದಲ್ಲಿ ಶಾಲೆ, ಕಾಲೇಜುಗಳು ಆರಂಭವಾಗಿದೆ. ಆದರೆ 12-14 ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ ಲಸಿಕೆ ಪಡೆದವರ ಸಂಖ್ಯೆ ಅತ್ಯಂತ ಕಡಿಮೆ ಇದ್ದು, ಚಿಂತೆಗೆ ಕಾರಣವಾಗಿದೆ.
15-17 ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ ಲಸಿಕೆ ಪಡೆದವರ ಸಂಖ್ಯೆ ತುಸು ಹೆಚ್ಚಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಶಾಲೆಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ಹಮ್ಮಿಕೊಳ್ಳುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸೂಚಿಸಿದೆ.
ಬಿಬಿಎಂಪಿ ವರದಿ ಪ್ರಕಾರ 12-14 ವರ್ಷದೊಳಗಿನ ಶೇ.16ರಷ್ಟು ಮಕ್ಕಳು ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. 15-17 ವರ್ಷದೊಳಗಿನ ಶೇ.68ರಷ್ಟು ಮಕ್ಕಳು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇದ್ದ ಕಾರಣ ಲಸಿಕೆ ಅಭಿಯಾನಕ್ಕೆ ಹಿನ್ನಡೆ ಉಂಟಾಗಿದೆ ಎಂದು ಬಿಬಿಎಂಪಿ ಅಧಿಕಾರಿ ಹೇಳುತ್ತಾರೆ.
ಕೊರೊನಾ ಲಸಿಕೆ ಕುರಿತು ಪೋಷಕರು ಮತ್ತು ಮಕ್ಕಳಲ್ಲಿ ಅರಿವಿನ ಕೊರತೆ ಕೊರೊನಾ ಲಸಿಕೆ ಅಭಿಯಾನ ಹಿನ್ನೆಡೆಗೆ ಕಾರಣವಾಗಿದೆ ಎಂದು ಶಾಲಾ ಸಿಬ್ಬಂದಿ ಹೇಳುತ್ತಾರೆ.
ಪೋಷಕರು ಮತ್ತು ಮಕ್ಕಳಲ್ಲಿ ಅರಿವಿನ ಕೊರತೆ
"ಕೊರೊನಾ ಲಸಿಕೆಯ ಉಪಯೋಗದ ಬಗ್ಗೆ ಪೋಷಕರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಹಲವು ಪೋಷಕರೊಂದಿಗೆ ಸಂವಾದದ ಸಮಯದಲ್ಲೇ ಅವರೇ ಕೊರೊನಾ ಲಸಿಕೆ ಪಡೆಯದಿರುವ ಬಗ್ಗೆ ಆಶ್ಚರ್ಯವಾಯಿತು. 4-5 ಮಂದಿ ಪೋಷಕರನ್ನು ಒಪ್ಪಿಸಿ ಕೊರೊನಾ ಲಸಿಕೆ ಪಡೆಯುವಂತೆ ಮಾಡಲಾಯಿತು. ಲಸಿಕೆ ಪಡೆಯುವಂತೆ ಮಕ್ಕಳಿಗೆ ಒಪ್ಪಿಸುವುದು ಎಂದರೆ ಪೋಷಕರನ್ನು ಒಪ್ಪಿಸುವುದು. ಕೊರೊನಾ ಲಸಿಕೆಯ ಉಪಯೋಗದ ಬಗ್ಗೆ ಮಕ್ಕಳೊಂದಿಗೆ ಪೋಷಕರಿಗೂ ಸಹ ಅರಿವು ಮೂಡಿಸುವ ಅಗತ್ಯವಿದೆ,'' ಎಂದು ಬೆಂಗಳೂರು ಉತ್ತರ ಜಿಲ್ಲೆಯ ಸರಕಾರಿ ಪ್ರೌಢ ಶಾಲೆಯ ಪ್ರಾಂಶುಪಾಲರು ಹೇಳಿದರು.
"ಕೊರೊನಾ ಲಸಿಕೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ, ಪ್ರಚಾರ ಮತ್ತು ಅಭಿಯಾನ ಅಗತ್ಯ. ಈ ಹಿಂದೆ ಡಿಎನ್ಟಿ, ರುಬೆಲ್ಲ ಮತ್ತು ಪೊಲಿಯೊ ಲಸಿಕೆಗೆ ಅಭಿಯಾನ ನಡೆಸಿದ ರೀತಿಯಲ್ಲೇ ಕೊರೊನಾ ಲಸಿಕೆ ಅಭಿಯಾನ ಹಮ್ಮಿಕೊಳ್ಳಬೇಕಿದೆ,'' ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆಡಳಿತ ಮಂಡಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಅಭಿಪ್ರಾಯಪಟ್ಟರು.
ಲಸಿಕೆ ಅಭಿಯಾನ ಚುರುಕುಗೊಳಿಸಿ
"ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 30-40 ಶಾಲೆಗಳು ಇವೆ. ದಾದಿಯರು, ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಕೊರೊನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕು. ಜೂನ್ 1 ರಿಂದ ಲಸಿಕೆ ಅಭಿಯಾನ ಆರಂಭಿಸಬೇಕೆಂದು ಶಿಕ್ಷಣ ಇಲಾಖೆ ಯೋಜಿಸಿದೆ. ಆದರೆ ಈ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ,'' ಎಂದು ಹೇಳಿದರು.
"ಶಾಲೆಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಶಾಲೆ ಆಡಳಿತ ಮಂಡಳಿಗಳ ಸಂಘದೊಂದಿಗೆ 3-4 ಸಭೆಗಳು ಜರುಗಿವೆ. 6-11 ವರ್ಷದೊಳಿಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರಕಾರದಿಂದ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ,'' ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ. ಕೆ.ವಿ.ತ್ರಿಲೋಕ್ ಚಂದ್ರ ತಿಳಿಸಿದರು.
ಶೀಘ್ರದಲ್ಲೇ ಲಸಿಕೆ ಅಭಿಯಾನ ಆರಂಭ
"ಬೇಸಿಗೆ ರಜೆ ಹಿನ್ನೆಲೆಯಲ್ಲಿ ಕೆಲವು ಶಾಲೆಗಳು ಇನ್ನೂ ತೆರಿದಿಲ್ಲ. ಕೆಲವು ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಶಾಲಾ, ಕಾಲೇಜುಗಳೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಲಸಿಕೆ ಅಭಿಯಾನವನ್ನು ಆರಂಭಿಸಲಿದ್ದೇವೆ,'' ಎಂದು ಡಾ. ಕೆ. ವಿ. ತ್ರಿಲೋಕ್ ಚಂದ್ರ ಹೇಳಿದರು.
"ಕಾಲೇಜುಗಳಲ್ಲಿ ಲಸಿಕೆ ಪ್ರಮಾಣ ಶೇ.100ರಷ್ಟು ಸಾಧಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ನಾಗರಿಕರಿಗೆ ಬೂಸ್ಟರ್ ಡೋಸ್ ನೀಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಬೂಸ್ಟರ್ ಡೋಸ್ ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ,'' ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಕೋವಿಡ್ 4ನೇ ಅಲೆಯ ಭೀತಿ
ಕೋವಿಡ್ ನಾಲ್ಕನೇ ಅಲೆಯ ಸಂಭವನೀಯ ಸಾಧ್ಯತೆ ಹಿನ್ನೆಲೆಯಲ್ಲಿ 6-11 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭಿಸುವ ಕುರಿತು ಏಪ್ರಿಲ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಆದರೆ ಒಂದು ತಿಂಗಳು ಕಳೆದರೂ ಕೇಂದ್ರ ಸರಕಾರದಿಂದ ಮಾರ್ಗಸೂಚಿಗಳ ಪ್ರಕಟಣೆಗೆ ಕಾಯಲಾಗುತ್ತಿದೆ.
"ಚಿಕ್ಕ ಮಕ್ಕಳು ಕೊರೊನಾ ಲಸಿಕೆ ಪಡೆಯದಿರುವುದು ಕೂಡ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣವಾಗಿದೆ,'' ಎಂದು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟರು.
"ನನ್ನ ಎಂಟು ವರ್ಷದ ಮಗ ಕೊರೊನಾ ಲಸಿಕೆ ಪಡೆಯುವುದನ್ನು ಎದುರು ನೋಡುತ್ತಿದ್ದೇವೆ. ಈಗ ಎಲ್ಲೆಡೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ನಮ್ಮ ಮಗ ಲಸಿಕೆ ಪಡೆಯುವವರೆಗೆ ನಮ್ಮ ಪ್ರವಾಸ ಯೋಜನೆಗಳನ್ನು ಮುಂದೂಡಿದ್ದೇವೆ,'' ಎಂದು ಪೋಷಕರೊಬ್ಬರು ಹೇಳಿದರು.
Recommended Video