ನಿವೇಶನ ಪಡೆದಿದ್ದು ಶಾಸಕನಾಗಿದ್ದರಿಂದ : ಸುದರ್ಶನ್
ಬೆಂಗಳೂರು, ಜ. 15: ನಾನು ಹಲವು ವರ್ಷಗಳ ಕಾಲ ಶಾಸಕನಾಗಿದ್ದೆ. ಇದರ ಆಧಾರದ ಮೇಲೆ ನಿವೇಶನ ಪಡೆದಿದ್ದೇನೆಯೇ ಹೊರತು ಭೂ ಒತ್ತುವರಿ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಆರ್.ವಿ. ಸುದರ್ಶನ್ ಹೇಳಿದ್ದಾರೆ.
ಬಿಜೆಪಿ ಮಾಡಿರುವ ಭೂ ಒತ್ತುವರಿ ಆರೋಪದ ಕುರಿತು ಸುದರ್ಶನ್ ಗುರುವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ.
ನನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದ್ದರಿಂದ ಕುಟುಂಬದವರು ಮುಜುಗುರಪಡುತ್ತಿದ್ದಾರೆ. ನಾನಾಗಲಿ, ನನ್ನ ಕುಟುಂಬದ ಸದಸ್ಯರಾಗಲಿ ಯಾವತ್ತೂ ಭ್ರಷ್ಟಾಚಾರದಿಂದ ಹಣ ಸಂಪಾದಿಸಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. [ವಿ.ಆರ್. ಸುದರ್ಶನ್ ವಿರುದ್ಧ ರಾಜ್ಯಪಾಲರಿಗೆ ದೂರು]

ನನ್ನ ವಿರುದ್ಧ ಕುತಂತ್ರ : ನಮಗೆ ಇದ್ದ ಆಸ್ತಿ ಮಾರಿ ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡಿದ್ದೇನೆ. ನನ್ನ ವಿರುದ್ಧ ಬಂದಿರುವ ಆರೋಪದ ಹಿಂದೆ ಕೆಲವು ಅಧಿಕಾರಿಗಳು ಹಾಗೂ ನಮ್ಮ ಸಮುದಾಯದ ಕೆಲವರ ಕುತಂತ್ರವಿದೆ ಎಂದು ಸುದರ್ಶನ್ ಆರೋಪಿಸಿದ್ದಾರೆ. ನನ್ನ ಮಗ ವಿದೇಶದಲ್ಲಿ ತಾನೇ ಸಂಪಾದಿಸಿಕೊಳ್ಳುತ್ತ ಓದುತ್ತಿದ್ದಾನೆ ಎಂದು ಹೇಳಿದ್ದಾರೆ. [ಸರ್ಕಾರ, ರಾಜಭವನದ ನಡುವೆ ಕೆಪಿಎಸ್ ಸಿ ಕಿತ್ತಾಟ]
ವಿ.ಆರ್. ಸುದರ್ಶನ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರಾಗಿ ನೇಮಿಸಿದ್ದನ್ನು ಬಿಜೆಪಿ ವಿರೋಧಿಸಿತ್ತು. ಸುದರ್ಶನ್ ಅವರು ಕೋಲಾರ ಜಿಲ್ಲೆಯ ವೇಮಗಲ್ನಲ್ಲಿ ಸರ್ಕಾರಿ ಭೂಮಿ ಕಬಳಿಸಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ. ಆದ್ದರಿಂದ ಅವರನ್ನು ಕೆಪಿಎಸ್ಸಿಗೆ ನೇಮಿಸಬಾರದು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಬುಧವಾರ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಕುರಿತು ವಿವರ ಕೇಳಿದರೆ ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದರು.












Click it and Unblock the Notifications