ಮೋದಿ ಅಭಿಮಾನಿಗಳಿಗೆ ಉಪ್ಪಿಟ್ಟು, ಮೈಸೂರ್ ಪಾಕ್!
ಬೆಂಗಳೂರು, ನ. 16 : ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಆಗಮಿಸುವ ಜನರಿಗೆ ಉಪ್ಪಿಟ್ಟು ಮೈಸೂರು ಪಾಕ್ ಸ್ವಾಗತ ದೊರೆಯಲಿದೆ. ಹೊರ ಜಿಲ್ಲೆಗಳಿಂದ ಆಗಮಿಸುವ ಕಾರ್ಯಕರ್ತರಿಗಾಗಿಯೇ ಬೆಳಗ್ಗೆ 6.30ಕ್ಕೆ ಉಪಹಾರ ವ್ಯವಸ್ಥೆ ಆರಂಭಿಸಲಾಗುತ್ತದೆ.
ಮೋದಿ ಸಮಾವೇಶದಲ್ಲಿ ಭಾಗವಹಿಸುವ ಜನರಿಗೆ ಊಟ, ತಿಂಡಿಗಾಗಿ ಬಿಜೆಪಿ ಸಕಲ ರೀತಿಯ ವ್ಯವಸ್ಥೆ ಕೈಗೊಂಡಿದೆ. ಅರಮನೆ ಮೈದಾನದಲ್ಲಿ 300 ಕೌಂಟರ್ ಗಳನ್ನು ತೆರಯಲಾಗಿದ್ದು, ಒಂದು ಕೌಂಟರ್ ನಲ್ಲಿ ಸುಮಾರು 50,000 ಜನರು ಊಟ ಮಾಡಬಹುದಾಗಿದೆ.

ಮೂರು ಲಕ್ಷಕ್ಕೂ ಅಧಿಕ ಜನರಿಗೆ ಊಟ ಮತ್ತು ತಿಂಡಿ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗ್ಗೆ 6.30ಕ್ಕೆ ಉಪಹಾರ ನೀಡಲು ಆರಂಭಿಸಲಾಗುತ್ತದೆ. ತುಮಕೂರು, ಬೆಂಗಳೂರಿನಿಂದ ಅಡುಗೆ ಮಾಡುವವರು ಆಗಮಿಸಿದ್ದಾರೆ. 1000ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಊಟ ಮತ್ತು ತಿಂಡಿ ನೀಡಲು ನಿಯೋಜಿಸಲಾಗಿದೆ.
12 ಲಕ್ಷ ನೀರಿನ ಪ್ಯಾಕೆಟ್ ಗಳನ್ನು ಅರಮನೆ ಆವರಣದಲ್ಲಿ ಸಿದ್ದಗೊಳಿಸಲಾಗಿದೆ. ಊಟ ಮತ್ತು ತಿಂಡಿಯನ್ನು ಪರಿಸರ ಸ್ನೇಹಿ ಅಡಕೆ ಹಾಳೆಯ ತಟ್ಟೆಗಳಲ್ಲಿ ನೀಡಲಾಗುತ್ತದೆ. ಸಮಾವೇಶ ಮುಗಿಸಿ ಹೊರ ದೂರದ ಜಿಲ್ಲೆಗಳಿಗೆ ತೆರಳುವ ಕಾರ್ಯಕರ್ತರಿಗಾಗಿ ಪಾರ್ಸೆಲ್ ಕಟ್ಟಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. (ನಮೋ ಸಮಾವೇಶಕ್ಕೆ ನಾವು ಸಿದ್ಧ, ನೀವು ಬನ್ನಿ)
ಊಟ ತಿಂಡಿ ಮೆನು : ಬೆಳಗ್ಗೆ 6.30ರಿಂದ ಜನರಿಗೆ ಉಪ್ಪಿಟ್ಟು ಲಭ್ಯವಾಗಲಿದೆ. 10.30ರ ನಂತರ ಪಲಾವ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಊಟಕ್ಕೆ ಟೊಮೆಟೋ ಬಾತ್ ಮತ್ತು ಮೈಸೂರು ಪಾಕ್ ನೀಡಲಾಗುತ್ತದೆ.











Click it and Unblock the Notifications