ಲೋಕಸಭಾ ಚುನಾವಣೆ: ಬಿಜೆಪಿ ಪರ ಯಡಿಯೂರಪ್ಪ ಪ್ರಚಾರ
ಬೆಂಗಳೂರು, ಸೆ 21: ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಕೂಡಲೇ ಕೆಜೆಪಿ, ಎನ್ ಡಿಎಗೆ ಬೆಂಬಲ ಸೂಚಿಸಿದೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸುತ್ತೇನೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಜೊತೆ ಸೀಟು ಹಂಚಿಕೆ ವಿಚಾರದಲ್ಲಿ ನಾವೇನೂ ಬೇಡಿಕೆ ಇಡುವುದಿಲ್ಲ. ಒಟ್ಟಿನಲ್ಲಿ ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿ ಆಗ ಬೇಕೆನ್ನುವುದು ನಮ್ಮ ಉದ್ದೇಶ.
ಕೆಜೆಪಿ ಪಕ್ಷ ಬಿಜೆಪಿ ಜೊತೆ ವಿಲೀನ ಆಗುವುದು ದೂರದ ಮಾತು. ಮೋದಿ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷರು ಆಹ್ವಾನಿಸಿದರೂ ವಿಲೀನ ಸಾಧ್ಯತೆ ದೂರದ ಮಾತು. ಈ ವಿಚಾರ ನಮ್ಮ ಮುಂದೆ ಇಲ್ಲ. ಮಾಧ್ಯಮದವರು ಪದೇ ಪದೇ ಈ ಪ್ರಶ್ನೆ ಕೇಳುವುದನ್ನು ನಿಲ್ಲಿಸ ಬೇಕೆಂದು ಯಡಿಯೂರಪ್ಪ ಹೇಳಿದ್ದಾರೆ.

ಕೆಜೆಪಿ ಯುವ ಘಟಕದ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಬಿಜೆಪಿಯ ರಾಷ್ಟ್ರೀಯ ನಾಯಕರ ನಡುವಳಿಕೆಯಲ್ಲಿ ಬದಲಾವಣೆಯಾಗಿದೆ. ಆದರೆ ರಾಜ್ಯದಲ್ಲಿ ಆಗಲಿಲ್ಲ ಎನ್ನುವುದು ನನಗೆ ಬೇಸರ ಕಾಡುತ್ತಿದೆ.
ಸುಬ್ರಮಣಿಯನ್ ಸ್ವಾಮಿ ಜನತಾಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದಾರೆ. ಹಾಗಾಗಿ ನೇಗಿಲುಹೊತ್ತ ರೈತನ ಚಿಹ್ನೆ ಮುಕ್ತವಾಗಿದೆ. ಧನಂಜಯ್ ಕುಮಾರ್ ಅವರನ್ನು ಈ ಚಿಹ್ನೆ ಪಡೆಯಲು ಚುನಾವಣಾ ಆಯೋಗದ ಜೊತೆ ಮಾತುಕತೆ ನಡೆಸಲು ಸೂಚಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನನ್ನಲ್ಲಿ ಹಣಬಲವಿಲ್ಲ, ಜನಬಲವಿದೆ. ಯುವ ಶಕ್ತಿ ದೇಶದ ಮುಂದಿನ ಶಕ್ತಿ. ಈ ಯುವಶಕ್ತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಕೆಜೆಪಿ ನೆಲೆಯನ್ನು ಗಟ್ಟಿಗೊಳಿಸುತ್ತೇನೆ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications