ಹಾಡಿ ಹೊಗಳದ ಟ್ರಾಫಿಕ್ ಸಿಗ್ನಲ್ ಹೀರೋಗಳು
ಬೆಂಗಳೂರು, ಜೂ. 2 : ಬಿರುಗಾಳಿಯೆ ಬೀಸಲಿ, ಆಕಾಶಕ್ಕೆ ತೂತುಬಿದ್ದು ಮಳೆ ಸುರಿಯುತ್ತಿರಲಿ, ಪ್ರಖರ ಸೂರ್ಯ ನೆತ್ತಿ ಸುಡುತ್ತಿರಲಿ, ಅಡ್ಡಾದಿಡ್ಡಿ ಚಾಲನೆಯಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿರಲಿ ನಿಸ್ವಾರ್ಥದಿಂದ ಕರ್ತವ್ಯನಿಷ್ಠರಾಗಿರುವ ಟ್ರಾಫಿಕ್ ಪೊಲೀಸರನ್ನು ಅಭಿನಂದಿಸುವ, ಒಂದು ಸೆಲ್ಯೂಟ್ ಹೊಡೆಯುವ ಸಂದರ್ಭ ಬಂದಿದೆ.
ಪೊಲೀಸ್ ಇಲಾಖೆಯಲ್ಲಿ ಹಲವಾರು ಜನರು ಭ್ರಷ್ಟರಿರಬಹುದು, ನಿಯಮ ಗಾಳಿಗೆ ತೂರುವವರನ್ನು ಹಿಡಿಯದೆ ಕರ್ತವ್ಯಲೋಪ ಮಾಡುತ್ತಿರಬಹುದು. ಆದರೆ, ಅಲ್ಲಲ್ಲಿ ಎಲ್ಲರ ಮೆಚ್ಚುಗೆ ಪಡೆಯುವಂಥ ಪೊಲೀಸ್ ಪಾಪಣ್ಣರು ನಮ್ಮ ನಿಮ್ಮ ನಡುವೆ ಇದ್ದೇ ಇರುತ್ತಾರೆ. ಅಂಥವರನ್ನು ಗುರುತಿಸಿ, ಶಭಾಸ್ ಎಂದು ಬೆನ್ನು ತಟ್ಟುವ ಕೆಲಸ ಪ್ರಜೆಗಳಾದ ನಾವು ಮಾಡುತ್ತಿರಲೇಬೇಕು.
ಈ ನಿಟ್ಟಿನಲ್ಲಿ ದಿ ವರ್ಲ್ಡ್ ಪೀಸ್ಕೀಪರ್ಸ್ ಮೂವ್ಮೆಂಟ್ ಹಾಗೂ ಬಿ-ಪ್ಯಾಕ್ (Bangalore-Political Action Committee) ಸಂಸ್ಥೆಗಳು ಬೆಂಗಳೂರು ಟ್ರಾಫಿಕ್ ಪೊಲೀಸರ ಸಹಯೋಗದೊಂದಿಗೆ, ಟ್ರಾಫಿಕ್ ಪೊಲೀಸರ ಸೇವೆಯನ್ನು ಗುರುತಿಸಿ, ಅವರ ಮಾನವೀಯ ಮುಖ ತೋರಿಸುವಂಥ ಕೆಲಸಕ್ಕೆ ಮುಂದಾಗಿದೆ. [ಸಂಚಾರ ನಿಯಮ ಪಾಲಿಸಿ ಬಹುಮಾನ ಪಡೆಯಿರಿ]

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಜೂನ್ 3, ಮಂಗಳವಾರ ಮಧ್ಯಾಹ್ನ 12.30ಕ್ಕೆ ಇಂಥದೊಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು ಮಾಡಲಾಗಿದೆ. 'ಹಾಡಿ ಹೊಗಳದ ಟ್ರಾಫಿಕ್ ಸಿಗ್ನಲ್ ಹೀರೋಗಳು' ಎಂಬ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಟ್ರಾಫಿಕ್ ಪೇದೆಗಳಿಗೆ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಅದಕ್ಕೂ ಮುನ್ನ ಇಂಥದೊಂದು ಸನ್ಮಾನ ಮಾಡಲು ಪ್ರೇಕರವಾದ ಘಟನೆಯೊಂದನ್ನು ಮೆಲುಕು ಹಾಕಿ. ಬೆಂಗಳೂರು ನಮ್ಮದು, ಅದನ್ನು ಚೆನ್ನಾಗಿಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ ಎಂಬ ಬಗ್ಗೆ ನಂಬಿಕೆ ಇಟ್ಟವರು ಕಾರ್ಯಕ್ರಮಕ್ಕೆ ಬನ್ನಿ, ಟ್ರಾಫಿಕ್ ಪೊಲೀಸರ ಹಸ್ತಲಾಘವ ಮಾಡಿ ಬೆನ್ನುತಟ್ಟಿ.
ಅಂದು ನಡೆದದ್ದೇನು? : ಅದು ವೈಟ್ಫೀಲ್ಡ್ನಲ್ಲಿರುವ ಗ್ರಾಫೈಟ್ ಇಂಡಿಯಾ ಸಂಸ್ಥೆಯ ಮುಂದಿನ ರಸ್ತೆ. ಅಲ್ಲಿ ದೊಡ್ಡದೊಂದು ರಸ್ತೆಗುಂಡಿ. ಅದನ್ನು ಬಳಸಿ ಸರ್ಕಸ್ ಮಾಡುತ್ತಾ ಗಾಡಿ ಓಡಿಸಲು ಹರಸಾಹಸ ಪಡುತ್ತಿದ್ದ ಬೈಕ್ ಸವಾರರು, ಕಾರು ಚಾಲಕರು.
ಈ ಅವ್ಯವಸ್ಥೆಯನ್ನು ಗಮನಿಸುತ್ತಿದ್ದ ಟ್ರಾಫಿಕ್ ಪೊಲೀಸರಾದ ತುಕಾರಾಂ ಮತ್ತು ಸತ್ಯನಾರಾಯಣ ಅವರು ಪರಸ್ಪರ ಮುಖ ನೋಡಿಕೊಂಡರು. ಏನೋ ನಿರ್ಧರಿಸಿ, ತಮ್ಮ ಲಾಠಿ, ವಾಕಿ-ಟಾಕಿಗಳನ್ನು ಪಕ್ಕಕ್ಕಿಟ್ಟರು. ತೋಳು ಮಡಚಿ, ಪ್ಯಾಂಟು ಏರಿಸಿ, ಗುದ್ದಲಿ ಸಲಾಕೆ ಹಿಡಿದು ಕಾರ್ಯಪ್ರವೃತ್ತರಾದರು. ಸ್ವಲ್ಪ ಸಮಯದಲ್ಲೇ ಗುಂಡಿ ಮಾಯ! ಬೈಕ್ ಸವಾರರು, ವಾಹನ ಚಾಲಕರು ಈ ಇಬ್ಬರ ಕಡೆಗೆ ಕೃತಜ್ಞತೆಯ ನೋಟ ಬೀರಿ ನಸುನಗೆಯೊಂದಿಗೆ ಮುಂದೆ ಸಾಗುತ್ತಿದ್ದರು.
ಬೆಂಗಳೂರಿನ ಬೃಹತ್ ಟ್ರಾಫಿಕ್ ಪೋಲಿಸ್ ಪಡೆಯಲ್ಲಿ ಅನೇಕ ಮಾನವೀಯ ಮುಖವಿರುವ ಪೊಲೀಸ್ ಪೇದೆಗಳಿದ್ದಾರೆ. ವೃತ್ತಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಸುದ್ದಿಯೇ ಈ ಹೊಸ ಉಪಕ್ರಮ ಹಾಡಿಹೊಗಳದ ಟ್ರಾಫಿಕ್ ಸಿಗ್ನಲ್ ಹೀರೋಗಳಿಗೆ ಪ್ರೇರಣೆ.
ಪತ್ರಿಕಾಗೋಷ್ಠಿಯನ್ನು ಹೆಚ್ಚುವರಿ ಟ್ರಾಫಿಕ್ ಆಯುಕ್ತರಾದ ಡಿ.ದಯಾನಂದ್, ಬಿ.ಪ್ಯಾಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್ ಮತ್ತು ದಿ ವರ್ಲ್ಡ್ ಪೀಸ್ ಕೀಪರ್ಸ್ ಮೂವ್ಮೆಂಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪೀಸ್ ಆಟೋ ರೂವಾರಿ ಅನಿಲ್ ಶೆಟ್ಟಿ ನಡೆಸಿಕೊಡಲಿದ್ದಾರೆ.












Click it and Unblock the Notifications