ಬಸ್ ಡಿಕ್ಕಿ ಹೊಡದು ಬೈಕ್ ಸವಾರ ಮೃತ; ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
ಬೆಂಗಳೂರು, ಜ. 24: ಬೆಂಗಳೂರಿನಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅವಘಡಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಒಂದು ಕಾರು ಸುಟ್ಟು ಕರಕಲಾಗಿದೆ.
ಬಿಎಂಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಸಂಭವಿಸಿದೆ. ಸುರೇಶ್ ಬಾಬು ಮೃತಪಟ್ಟ ದುರ್ದೈವಿ. ಜೆ.ಸಿ. ಜನರಲ್ ಆಸ್ಪತ್ರೆ ಬಳಿ ಚಲಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಬೈಕ್ನಿಂದ ಕೆಳಗೆ ಬಿದ್ದ ಸುರೇಶ್ ಬಾಬು ತಲೆಗೆ ಪೆಟ್ಟಾಗಿದ್ದು, ಕೂಡಲೇ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಆತ ಸಾವನ್ನಪ್ಪಿದ್ದು, ಮಲ್ಲೇಶ್ವರದ ಸಂಚಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕೆಂಗೇರಿ: ಕುಡಿದ ಅಮಲಿನಲ್ಲಿ ತೆಂಗಿನ ಮರದ ಏರಿದ್ದ ವ್ಯಕ್ತಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಗೌತಮ್ ಬರ್ಮನ್ ಮೃತಪಟ್ಟವ. ಹಳೇ ತಗಡು ಸಂಗ್ರಹ ಗೋಡನ್ನಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ಭಾನುವಾರ ರಾತ್ರಿ ಕಂಠಪೂರ್ತಿ ಕುಡಿದು ತೆಂಗಿನ ಮರ ಏರಿದ್ದಾನೆ. ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ನೈಸ್ ರಸ್ತೆಯಲ್ಲಿ ಕಾರು ಧಗಧಗ: ಶಾರ್ಟ್ ಸರ್ಕೂಟ್ನಿಂದ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ. ಬನ್ನೇರುಘಟ್ಟದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ತೆರಲಿದ್ದ ಕಾರು ಸುಟ್ಟು ಕರಕಲಾಗಿದ್ದು, ಖಾಸಗಿ ಕಂಪನಿ ಉದ್ಯೋಗಿ ಸುಧಾಕರ್ ಅವರಿಗೆ ಸೇರಿದೆ ಎನ್ನಲಾಗಿದೆ. ಸುಧಾಕರ್ ಎಂದಿನಂತೆ ಕಾರು ಚಲಾವಣೆ ಮಾಡುವಾಗ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ತೆರಳಿ ಬೆಂಕಿ ನಂದಿಸಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.