ಮಾರ್ಚ್ 30ರಿಂದ ರಾಜ್ಯಾದ್ಯಂತ ಟ್ರಕ್ ಮಾಲೀಕರ ಮುಷ್ಕರ?
ವಾಣಿಜ್ಯ ಉದ್ದೇಶಗಳಿಗೆ ಬಳಸುವ ವಾಹನಗಳ ಮೇಲಿನ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ಹೆಚ್ಚಿಸಿರುವುದು ಸೇರಿ ಕೇಂದ್ರದ ಹೊಸ ನೀತಿಗಳ ವಿರುದ್ಧ ಮುನಿದ ಟ್ರಕ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ.
ಬೆಂಗಳೂರು, ಮಾರ್ಚ್ 18: ಕೇಂದ್ರ ಸರ್ಕಾರದ ಕೆಲ ಧೋರಣೆಗಳ ವಿರುದ್ಧ ಸಿಡಿದೆದ್ದಿರುವ ದಕ್ಷಿಣ ವಲಯ ಮೋಟಾರ್ ಟ್ರಾನ್ಸ್ ಪೋರ್ಟರ್ ಗಳ ಕ್ಷೇಮಾಭಿವೃದ್ಧಿ ಸಂಘ (ಎಸ್ ಡಬ್ಲ್ಯೂಎಂಟಿಡಬ್ಲ್ಯೂಎ) ಮಾರ್ಚ್ 30ರಿಂದ ದೇಶಾದ್ಯಂತ ಮುಷ್ಕರ ಹೂಡುವುದಾಗಿ ಎಚ್ಚರಿಸಿದೆ.
ವಾಣಿಜ್ಯ ಉದ್ದೇಶಗಳಿಗೆ ಬಳಸುವ ವಾಹನಗಳ ಮೇಲಿನ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ಹೆಚ್ಚಿಸಿರುವುದು, 15 ವರ್ಷಗಳಿಗೂ ಹಳೆಯದಾದ ವಾಣಿಜ್ಯ ವಾಹನಗಳನ್ನು ನಿಷೇಧಿಸುವುದು ಹಾಗೂ ಟೋಲ್ ಗಳಲ್ಲಿ ಟ್ರಕ್ ಗಳ ಮೇಲೆ ಶುಲ್ಕ ವಿಧಿಸುವ ನಿರ್ಧಾರಗಳನ್ನು ಈ ಕೂಡಲೇ ಮರುಪರಿಶೀಲಿಸಿ ಆ ಆದೇಶಗಳನ್ನು ಹಿಂಪಡೆಯಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಎಸ್ ಡಬ್ಲ್ಯೂಎಂಟಿಡಬ್ಲ್ಯೂಎ ಆಗ್ರಹಿಸಿದೆ.

ಮಾರ್ಚ್ 25ರೊಳಗೆ ಈ ಸಮಸ್ಯೆಗಳನ್ನು ನಿವಾರಿಸದಿದ್ದಲ್ಲಿ, ಮಾರ್ಚ್. 30ರಿಂದ ಅನಿರ್ದಿಷ್ಟಾವಧಿವರೆಗೆ ಮುಷ್ಕರ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಏಪ್ರಿಲ್ 1ರಿಂದ ವಾಣಿಜ್ಯ ಉದ್ದೇಶಗಳ ವಾಹನಗಳ ಮೇಲಿನ ವಿಮೆ ಪ್ರೀಮಿಯಂ ಹೆಚ್ಚಳ ನೀತಿ ಜಾರಿಗೆ ಬರಲಿದೆ. ಹೊಸ ನೀತಿಯಡಿ, ವಿಮೆ ಪ್ರೀಮಿಯಂ ಮೊತ್ತವನ್ನು ಶೇ. 50ರಷ್ಟು ಹೆಚ್ಚಿಸಲಾಗಿದೆ. ಇದು ಆಕ್ಷೇಪಾರ್ಹ ಎಂದರು.
ಅಲ್ಲದೆ, ರಾಷ್ಟ್ರದಲ್ಲಿರುವ ಒಟ್ಟು ಟ್ರಕ್ ಗಳ ಪೈಕಿ 24 ಲಕ್ಷ ಟ್ರಕ್ ಗಳು 15 ವರ್ಷಕ್ಕಿಂತಲೂ ಹಳೆಯದ್ದಾಗಿವೆ. ಇಂಥ ಟ್ರಕ್ ಗಳನ್ನು ನಿಷೇಧಿಸಿದರೆ, ಅವನ್ನೇ ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಲಿವೆ ಎಂಬ ಆತಂಕ ವ್ಯಕ್ತಪಡಿಸಿದರಲ್ಲದೆ, ಇಂಥ ನಿಯಮಗಳನ್ನು ಹಿಂಪಡೆಯುವಂತೆ ಆಗ್ರಹಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಮನವಿಗೆ ಓಗೊಡದಿದ್ದರೆ ಮುಷ್ಕರ ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications