ಹೊಸ ವರ್ಷದಲ್ಲಿ ಪೀಣ್ಯ-ಮಲ್ಲೇಶ್ವರಂ ಮೆಟ್ರೋ ಸಂಚಾರ
ಬೆಂಗಳೂರು, ಡಿ.19 : ಪೀಣ್ಯ ಮತ್ತು ಸಂಪಿಗೆ ರಸ್ತೆ ನಡುವಿನ ನಮ್ಮ ಮೆಟ್ರೋ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಲಖನೌ ಮೂಲದ ವಿನ್ಯಾಸಗಳ ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ ( ಆರ್ಡಿಎಸ್ಓ) ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರದ ವೀಕ್ಷಣೆ ಆರಂಭಿಸಿದೆ. ಆರ್ಡಿಎಸ್ಓ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರೆ, ಸಿಆರ್ಎಸ್ ಕಡೆಯಿಂದ ಸಾರ್ವಜನಿಕರ ಪ್ರಯಾಣಕ್ಕಾಗಿ ಅಂತಿಮ ಪ್ರಮಾಣ ಪತ್ರವನ್ನು ಪಡೆಯುವ ಪ್ರಕ್ರಿಯೆ ಮಾತ್ರ ಬಾಕಿ ಉಳಿಯಲಿದೆ.
ಪೀಣ್ಯ-ಸಂಪಿಗೆ ರಸ್ತೆ ನಡುವಿನ 9.9 ಕಿ.ಮೀ.ಉದ್ದದ ಮಾರ್ಗದಲ್ಲಿ ಲಖನೌದಿಂದ ಆಗಮಿಸಿರುವ ವಿನ್ಯಾಸಗಳ ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ ಬುಧವಾರದಿಂದ ಪರೀಕ್ಷಾರ್ಥ ಸಂಚಾರ ಆರಂಭಿಸಿದೆ. ಕೇಂದ್ರ ರೈಲ್ವೆ ಇಲಾಖೆ ಅಡಿಯಲ್ಲಿ ಬರುವ ಆರ್ಡಿಎಸ್ಓ, ಮೆಟ್ರೊ ರೈಲು ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಾಗಿದೆಯೇ? ಇಲ್ಲವೇ? ಎಂಬುದನ್ನು ಪರೀಕ್ಷೆ ನಡೆಸುತ್ತದೆ. [ಪೀಣ್ಯ-ಸಂಪಿಗೆ ರಸ್ತೆ ಕಾಮಗಾರಿ ವೀಕ್ಷಣೆ]

ಹಳಿಗಳ ಜೋಡಣೆ, ರೈಲು ಸಂಚರಿಸುವಾಗ ಉಂಟಾಗುವ ಕಂಪನ, ಸಂಕೇತ ವ್ಯವಸ್ಥೆ ಹೀಗೆ ನಾನಾ ಆಯಾಮಗಳ ಪರೀಕ್ಷೆಯನ್ನು ಆರ್ಡಿಎಸ್ಓ ತಜ್ಞರ ತಂಡ ನಡೆಸಲಿದ್ದು, ತನ್ನ ಅಭಿಪ್ರಾಯವನ್ನು ಬಿಎಂಆರ್ ಸಿಎಲ್ ಗೆ ತಿಳಿಸಿ, ರೈಲಿನ ವೇಗದ ಬಗ್ಗೆ ಪ್ರಮಾಣ ಪತ್ರ ನೀಡಲಿದೆ. ಆರ್ಡಿಎಸ್ಓ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರೆ, ನಂತರ ರೈಲ್ವೆ ಸುರಕ್ಷತಾ ಆಯುಕ್ತರ ಕಡೆಯಿಂದ ಸಾರ್ವಜನಿಕರ ಪ್ರಯಾಣಕ್ಕಾಗಿ ಅಂತಿಮ ಪ್ರಮಾಣಪತ್ರವನ್ನು ಬಿಎಂಆರ್ಸಿಎಲ್ ಪಡೆದುಕೊಳ್ಳವುದು ಮಾತ್ರ ಬಾಕಿ ಉಳಿಯಲಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲ, ಆರ್ಡಿಎಸ್ಓ ತಂಡದ ಪರಿಶೀಲನೆ ಆರಂಭವಾಗಿದ್ದು, ವಿವಿಧ ಹಂತಗಳಲ್ಲಿ ನಡೆಯವ ಈ ಪ್ರಾಯೋಗಿಕ ಸಂಚಾರ ಮತ್ತು ಇತರ ಪ್ರಕ್ರಿಯೆಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಹೊಸ ವರ್ಷದಲ್ಲಿ ಪೀಣ್ಯ-ಸಂಪಿಗೆ ರಸ್ತೆ ಮೆಟ್ರೋ ಸಂಚಾರ ಆರಂಭವಾಗುವುದು ಖಾತ್ರಿಯಾಗಿದೆ.
ಡಿ.9ರಂದು ಲಖನೌ ಮೂಲದ 'ವಿನ್ಯಾಸಗಳ ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ' (ಆರ್ಡಿಎಸ್ಓ)ಯ ಪ್ರಧಾನ ನಿರ್ದೇಶಕರು ಶಾಂತಿನಗರದಲ್ಲಿರುವ ಬಿಎಂಆರ್ಸಿಎಲ್ನ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾರ್ಗದ ರೈಲು ಓಡಾಟದ ಬಗ್ಗೆ ಚರ್ಚೆ ನಡೆಸಿದ್ದರು. ಪೀಣ್ಯ ಮೆಟ್ರೋ ಡಿಪೋಗೂ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿ, ತಜ್ಞರ ತಂಡವನ್ನು ಪರೀಕ್ಷಾರ್ಥ ಸಂಚಾರ ವೀಕ್ಷಿಸಲು ಕಳುಹಿಸುವುದಾಗಿ ಹೇಳಿದ್ದರು.











Click it and Unblock the Notifications