ಬಸ್ಸು ಕೆಟ್ಟು ನಿಂತಾಗ ಆಪದ್ಬಾಂಧವನಾದ ಟ್ರಾಫಿಕ್ ಪೊಲೀಸ್!
ಹೊಸೂರು ರಸ್ತೆಯ ಮಡಿವಾಳ ಸೇತುವೆ ಮೇಲೆ, ಮಾರ್ಗ ಮಧ್ಯದಲ್ಲಿ ಕೆಟ್ಟು ನಿಂತಿದ್ದ ಬಸ್ಸನ್ನು ರಿಪೇರಿ ಮಾಡಿ ಮಡಿವಾಳ ಟ್ರಾಫಿಕ್ ಪೊಲೀಸ್ ಪೇದೆ ರಾಜೇಸಾಬ್ ಗಂಟಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಬೆಂಗಳೂರು, ಫೆಬ್ರವರಿ 7: ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸುವ ಟ್ರಾಫಿಕ್ ಪೊಲೀಸರನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇವರು ಹಾಗಲ್ಲ. ರಸ್ತೆ ಮಧ್ಯೆ ಹಾಳಾಗಿ ನಿಂತಿದ್ದ ಬಸ್ಸು ರಿಪೇರಿ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹೊಸೂರು ರಸ್ತೆಯ ಮಡಿವಾಳ ಸೇತುವೆ ಮೇಲೆ ಬಿಎಂಟಿಸಿಯ ವೋಲ್ವೋ ಬಸ್ಸೊಂದು ಹಾಳಾಗಿ ನಿಂತಿತ್ತು. ಉಳಿದ ಟ್ರಾಫಿಕ್ ಪೊಲೀಸರಾದರೆ ಸೀಟಿ ಊದಿ ಬಸ್ ಮುಂದೆ ಕೊಡೊಯ್ಯಲು ತಾಕೀತು ಮಾಡುತ್ತಿದ್ದರು. ಆದರೆ ಮಡಿವಾಳದ ಪೊಲೀಸ್ ಪೇದೆ ರಾಜೇಸಾಬ್ ಗಂಟಿ ಹಾಗಲ್ಲ. ನೇರ ಬಸ್ ಹತ್ತಿದವರೆ ರಸ್ತೆ ಮಧ್ಯದಲ್ಲಿ ಕೆಟ್ಟು ನಿಂತಿದ್ದ ಬಸ್ಸು ರಿಪೇರಿ ಮಾಡಲು ಆರಂಭಿಸಿದರು.[ಲೇಖಕ ಅಗ್ನಿ ಶ್ರೀಧರ್ ಮನೆ ಮೇಲೆ ಪೊಲೀಸ್ ದಾಳಿ]
ಸಮಯಕ್ಕೆ ಸರಿಯಾಗಿ ಬಸ್ಸನ್ನು ರಿಪೇರಿ ಮಾಡಿದ್ದರಿಂದ ಚಾಲಕ ಬಸ್ಸನ್ನು ಮುಂದೆ ಕೊಂಡೊಯ್ಯಲು ಸಾಧ್ಯವಾಯಿತು. ಇದರಿಂದ ಹಲವು ಪ್ರಯಾಣಿಕರಿಗೆ ಅನುಕೂಲವಾಯಿತು. ಇಲ್ಲದಿದ್ದಲ್ಲಿ ಟ್ರಾಫಿಕ್ ಜಾಮ್ ಆಗಿ ಸಾವಿರಾರು ಜನ ರಸ್ತೆಯಲ್ಲಿ ಒದ್ದಾಡಬೇಕಾಗಿತ್ತು. ಬಸ್ಸು ರಿಪೇರಿ ಮಾಡಿದ ರಾಜೇಸಾಬ್ ಗೆ ಎಲ್ಲರೂ ಧನ್ಯವಾದ ಹೇಳಿದರೆ, ಅವರು ಮಾತ್ರ "ಇದು ನನ್ನ ಕರ್ತವ್ಯ. ಟ್ರಾಫಿಕ್ ಸುಗಮವಾಗಿರುವಂತೆ ನೋಡಿಕೊಳ್ಳುವುದೇ ನನ್ನ ಕೆಲಸ," ಎಂದು ಅಷ್ಟೇ ವಿನಯದಿಂದ ಕೃತಜ್ಞತೆ ತೋರಿದ್ದಾರೆ.[ಫೆಬ್ರವರಿ 15ರಿಂದ ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ಪಡೆಯಿರಿ]
ಟ್ರಾಫಿಕ್ ಪೊಲೀಸ್ ಪೇದೆಯ ಈ ಕೆಲಸವನ್ನು ಅಲ್ಲೆ ಇದ್ದ ಕೆಲವರು ಮೊಬೈಲ್ ಫೋನಿನಲ್ಲಿ ಫೊಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದದಲ್ಲಿ ಹರಿಯ ಬಿಟ್ಟಿದ್ದಾರೆ. ಟ್ರಾಫಿಕ್ ಪೊಲೀಸ್ ರಾಜೇಸಾಬ್ ರ ಈ ಸಮಯೋಚಿತ ರಿಪೇರಿ ಕೆಲಸಕ್ಕೆ ಇದೀಗ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಹಾಗಂತ ಇದೇ ಮೊದಲಲ್ಲ, 2015ರಲ್ಲಿ ಟ್ರಾಫಿಕ್ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ಟ್ರಕ್ ಒಂದನ್ನು ಇದೇ ರೀತಿ ನೆರವಿಗೆ ಧಾವಿಸಿ ರಾಜೇಸಾಬ್ ಮುಂದೆ ಕಳುಹಿಸಿದ್ದರು.