ವರ್ಷಾಂತ್ಯದ ಪಾರ್ಟಿ ಹಾಳುಗೆಡವಲು ಪೊಲೀಸ್ ಸಿದ್ಧ!
Recommended Video

ಬೆಂಗಳೂರು, ಡಿಸೆಂಬರ್ 29 : "ನಿಮ್ಮ ವರ್ಷಾಂತ್ಯದ ಪಾರ್ಟಿಯನ್ನು ಹಾಳುಗೆಡವಲು ಬೆಂಗಳೂರು ಪೊಲೀಸರು ಸನ್ನದ್ಧರಾಗಿದ್ದಾರೆ!" ಹೀಗೊಂದು ಇಂಟ್ರೆಸ್ಟಿಂಗ್ ಸಂದೇಶವನ್ನು ಹೆಚ್ಚುವರಿ ಪೊಲೀಸ್ ಆಯುಕ್ತ (ಟ್ರಾಫಿಕ್) ಹಿತೇಂದ್ರ ಅವರು ಹಾಕಿದ್ದಾರೆ.
ಈ ಸಂದೇಶವನ್ನು ಅಪಾರ್ಥ ಮಾಡಿಕೊಳ್ಳುವ ಮೊದಲು, ಅವರು ಹೀಗೇಕೆ ಹೇಳುತ್ತಿದ್ದಾರೆ, ಈ ಹೇಳಿಕೆಯ ಹಿಂದಿನ ಉದ್ದೇಶ ಏನು ಎಂಬುದನ್ನು ಬೆಂಗಳೂರಿನ ಜನತೆ ಚೆನ್ನಾಗಿ ಅರಿಯಬೇಕು.
ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸಲು ಯುವ ಹೃದಯಗಳು ಕುಣಿಯುತ್ತಿರುತ್ತಿದ್ದರೆ, ಹಿರಿ ಜೀವಗಳ ಹೃದಯ ಢವಢವ ಎನ್ನುತ್ತಿರುತ್ತದೆ. ಪಾರ್ಟಿಗೆಂದು ಹೋದ ಮಗ ಸುರಕ್ಷಿತವಾಗಿ ಬರಲಿ ಎಂದು ರಾತ್ರಿ ಎರಡು ಗಂಟೆಯವರೆಗೆ ತಂದೆ ತಾಯಿಯರು ಎದ್ದು ಕುಳಿತಿರುತ್ತಾರೆ.
ವರ್ಷಾಂತ್ಯದ ಪಾರ್ಟಿಯಲ್ಲಿ ಕಳೆದುಹೊಗುವ ಮುನ್ನ ಕಳೆದ ವರ್ಷ ಏನಾಗಿತ್ತೆಂದು ಒಮ್ಮೆ ಮೆಲುಕು ಹಾಕುವುದು ಉತ್ತಮ. ಹುಚ್ಚು ಮದವೇರಿದ ಪಡ್ಡೆಗಳ ಮಧ್ಯದಲ್ಲಿ ಕನಕಾಂಗಿಯರು ನಲುಗಿ ಹೋಗಿದ್ದರು. ಕೆಲ ಮಹಿಳೆಯರ ಮೇಲೆ ನಡೆಯಬಾರದ್ದು ನಡೆದುಹೋಗಿತ್ತು.
ಉನ್ಮಾದಿತ ಯುವಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸಂತೋಷವಾಗಿ ಆರಂಭವಾಗಬೇಕಾಗಿದ್ದ ಹೊಸವರ್ಷ ದುಃಖದ ಮಡುವಿನಲ್ಲಿ ತಳ್ಳಿತ್ತು. ಈಗ ಹೆಚ್ಚುವರಿ ಪೊಲೀಸರು ಆಯುಕ್ತರು ಏನು ಹೇಳಿದ್ದಾರೆಂದು ಸರಿಯಾಗಿ ಓದಿ, ನಂತರ ನಿರ್ಧಾರಕ್ಕೆ ಬನ್ನಿ.
|
ಡಿ.30, 31ರಂದು ಪೊಲೀಸರಿಂದ ವಿಶೇಷ ಕಾರ್ಯಾಚರಣೆ
ಪೂರ್ತಿ ಸಂದೇಶ ಹೀಗಿದೆ, "ಬೆಂಗಳೂರು ಟ್ರಾಫಿಕ್ ಪೊಲೀಸರು ಡಿಸೆಂಬರ್ 30 ಮತ್ತು 31ರಂದು ಕುಡಿದು ಓಡಿಸುವವರನ್ನು ಹಿಡಿಯಲು ವಿಶೇಷ ಕಾರ್ಯಾಚರಣೆ ನಡೆಸಲಿದೆ. ಒಂದು ವಾಹನ ಓಡಿಸುವವರು ಕುಡಿದು ಓಡಿಸುತ್ತಿದ್ದಾರೆಂದು ತಿಳಿದುಬಂದರೆ, ಅವರ ವರ್ಷಾಂತ್ಯದ ಪಾರ್ಟಿಯನ್ನು ಹಾಳುಗೆಡವಲು ನಾವು ಸಿದ್ಧ!"
|
ದಂಡಕ್ಕಿಂತ ಮಿಗಿಲಾಗಿ ಯೋಚಿಸಬೇಕು
ಇದಕ್ಕೆ ತರ್ಲೆ ತಿಮ್ಮನವರಿಂದ ಕಾಮೆಂಟೊಂದು ತೂರಿಬಂದಿದೆ. ಅದು, "ನೀವೊಬ್ಬ ಸ್ಮಾರ್ಟ್ ಅಧಿಕಾರಿ. ಆದರೆ, ನೀವು ಹಾಕುವ ಜುಜುಬಿ ದಂಡಕ್ಕೆ ಕುಡಿದು ಗಾಡಿ ಓಡಿಸುವವರು ತಲೆ ಕೆಡಿಸಿಕೊಳ್ಳುತ್ತಾರಾ? ಮದ್ಯಪಾನ ಮಾಡಿ ಗಾಡಿ ಓಡಿಸುವುವುದನ್ನು ನಿಯಂತ್ರಿಸಲು ದಂಡಕ್ಕಿಂತ ಮಿಗಿಲಾಗಿ (ಕಠಿಣ ಶಿಕ್ಷೆಯ ಬಗ್ಗೆ) ಯೋಚಿಸಬೇಕು" ಎಂದು ಅದ್ಭುತ ಉಪದೇಶ ನೀಡಿದ್ದಾರೆ.
|
ವಿದ್ಯಾವಂತ ಮೂರ್ಖರನ್ನು ಹಿಡಿದು ಶಿಕ್ಷಿಸಿ
ಹಿತೇಂದ್ರ ಅವರ ಖಡಕ್ ನುಡಿಗೆ ಹಲವಾರು ಟ್ವಿಟ್ಟಿಗರು ಶಭಾಶ್ ಎಂದು ಹೇಳಿದ್ದಾರೆ. ಕುಡಿದು ವಾಹನ ಚಲಾಯಿಸುವ ಎಲ್ಲ ವಿದ್ಯಾವಂತ ಮೂರ್ಖರನ್ನು ಹಿಡಿದು ಕಠಿಣವಾಗಿ ಶಿಕ್ಷಿಸಬೇಕು. ಅವರು ತಮ್ಮ ಜೀವದೊಂದಿಗೆ ಆಟವಾಡಬಹುದು. ಆದರೆ, ಇತರರ ಜೀವದ ಜೊತೆ ಆಟವಾಡುವ ಯಾವ ಹಕ್ಕೂ ಅವರಿಗಿಲ್ಲ. ನಿಮ್ಮ ಪ್ರಯತ್ನಕ್ಕೆ ನಮ್ಮ ಧನ್ಯವಾದಗಳು ಎಂದು ಅಪ್ಪು ಮೇರು ಎಂಬುವವರು ಕಿಡಿ ಕಾರಿದ್ದಾರೆ.
|
ಪಡ್ಡೆಗಳ ಮೇಲೂ ನಿಯಂತ್ರಣವಿರಲಿ
ಕುಡಿದು ವಾಹನ ಓಡಿಸುವವರನ್ನು ಮಟ್ಟ ಹಾಕುವುದು ಮಾತ್ರವಲ್ಲ, ಬ್ರಿಗೇಡ್ ಮತ್ತು ಎಂಜಿ ರಸ್ತೆಯಲ್ಲಿ ಗಲಾಟೆ ಮಾಡುವ ಪಡ್ಡೆಗಳ ಮೇಲೂ ಒಂದು ನಿಯಂತ್ರಣವಿರಲಿ ಎಂದು ಪೊಲೀಸರನ್ನು ಎಚ್ಚರಿಸಿದ್ದಾರೆ ವಿಶಾಲ್ ಹೆಬ್ಳೆ ಅವರು. ಕಳೆದ ವರ್ಷ ನಡೆದ ಅಸಹ್ಯಕರ ಘಟನೆಯನ್ನು ಯಾರೂ ಮರೆತಿರಲಿಕ್ಕಿಲ್ಲ. ಕಳೆದ ವರ್ಷಾಂತ್ಯದ ಸಂದರ್ಭದಲ್ಲಿ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಪೊಲೀಸರೂ ಮರೆತಿರಲಿಕ್ಕಿಲ್ಲ.
|
ಇತರ ಜೀವನದೊಡನೆ ಚೆಲ್ಲಾಟವಾಡಲು ಹಕ್ಕಿಲ್ಲ
ಬೆಂಗಳೂರು ಟ್ರಾಫಿಕ್ ಪೊಲೀಸರು ಈ ವರ್ಷಾಂತ್ಯದ ಪಾರ್ಟಿಗಳನ್ನು ಹಾಳುಗೆಡವುವುದನ್ನು ನೋಡಲು ನಾವು ನಿಜಕ್ಕೂ ಉತ್ಸುಕರಾಗಿ ಕಾಯುತ್ತಿದ್ದೇವೆ. ನೀವು ಹಾಗೆ ಮಾಡಿದರೆ ನಮಗೆ ತುಂಬಾ ಸಂತೋಷವಾಗುತ್ತದೆ. ಕುಡುಕರು ತಮ್ಮ ಜೀವನದ ಜೊತೆ ಮಾತ್ರ ಚೆಲ್ಲಾಟವಾಡುವುದಿಲ್ಲ, ಇತರರ ಜೀವನದ ಜೊತೆಯೂ ಚೆಲ್ಲಾಟವಾಡುತ್ತಾರೆ. ಇಂಥ ಕೆಲಸವನ್ನು ಮೊದಲು ಮಾಡಿ ಎಂದಿದ್ದಾರೆ ಬಗ್ ಬಸ್ಟಾ.
|
ಓಲಾ ಊಬರ್ ಡ್ರೈವರುಗಳಿಂದ ಸುಲಿಗೆ
ಕುಡಿದು ನಾವು ಗಾಡಿ ಓಡಿಸುವುದು ಸರಿಯಲ್ಲವಾದರೂ, ಆ ಸಮಯದಲ್ಲಿ ಇತರ ವಾಹನ ಸೇವೆಯೂ ಹೆಚ್ಚಾಗಿ ಇರುವುದಿಲ್ಲ. ಓಲಾ, ಊಬರ್ ಟ್ಯಾಕ್ಸಿ ಡ್ರೈವರುಗಳು ಎರಡು ಅಥವಾ ನಾಲ್ಕು ಪಟ್ಟು ಹಣ ಕೀಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಯಾವನಿಗೊತ್ತು ಎಂಬುವವರು. ಇದಕ್ಕೆ ಪ್ರತಿಯಾಗಿ ಅಭಿಜಿತ್ ಮಿಶ್ರಾ ಅವರು, ಆದರೆ ಕುಡಿದು ಓಡಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕುಡಿಯದಿರುವ ನಿಮ್ಮ ಸ್ನೇಹಿತರನ್ನು ವಾಹನ ಚಲಾಯಿಸಲು ಹೇಳಬಹುದಲ್ಲ? ಎಂದಿದ್ದಾರೆ.












Click it and Unblock the Notifications