Deepavali: ಬೆಂಗಳೂರಿಗರ ಹಬ್ಬದ ಸಂಭ್ರಮಕ್ಕೆ ಟ್ರಾಫಿಕ್ ಅಡ್ಡಿ! ಪೊಲೀಸರು ನೀಡಿದ ಎಚ್ಚರಿಕೆ ಏನು?
ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಬೆಂಗಳೂರು ಜನತೆಗೆ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಹಬ್ಬವನ್ನು ಆಚರಿಸಲು ಹಲವಾರು ಜನರು ನಗರದಿಂದ ಹೊರಗೆ ಹೋಗುತ್ತಿದ್ದರೆ, ಅನೇಕರು ಶಾಪಿಂಗ್ ಮಾಡಲು ಮತ್ತು ಸಂಬಂಧಿಕರನ್ನು ಭೇಟಿ ಮಾಡಲು ಹೊರಟರು, ಇದು ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಗೆ ಕಾರಣವಾಯಿತು. ಖಾಸಗಿ ವಾಹನಗಳು ಮತ್ತು ಬಸ್ಗಳು ಬೆಂಗಳೂರಿನಲ್ಲಿ ಗಂಟೆಗಳ ಕಾಲ ಟ್ರಾಫಿಕ್ಗೆ ಕಾರಣವಾಗಿದ್ದವು.

ಹೊಸೂರು ರಸ್ತೆ, ಮೈಸೂರು ರಸ್ತೆ, ಕೃಷ್ಣರಾಜಪುರ ಮತ್ತು ಬನ್ನೇರುಘಟ್ಟದಂತಹ ಸ್ಥಳಗಳಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಕಂಡುಬಂತು. ದಟ್ಟಣೆಯ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲು ಬೆಂಗಳೂರು ಪೊಲೀಸರು ಶುಕ್ರವಾರ ಮತ್ತು ಶನಿವಾರದಂದು ಹಲವು ಸಂಚಾರ ಸಲಹೆಗಳನ್ನು ಬಿಡುಗಡೆ ಮಾಡಿದ್ದರು.
'ದೀಪಾವಳಿ ಹಬ್ಬದ ಪ್ರಯುಕ್ತ ಮೈಸೂರು ರಸ್ತೆ, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗಿದ್ದು, ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳುವುದರಿಂದ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಪರ್ಯಾಯ ರಸ್ತೆಯಲ್ಲಿ ಪ್ರಯಾಣಿಸಿ ಎಂದು ಪೊಲೀಸರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದರು.
ಅಪಾರ ಸಂಖ್ಯೆಯಲ್ಲಿ ರಸ್ತೆಗಿಳಿದ ವಾಹನಗಳು
ಶುಕ್ರವಾರ ರಾತ್ರಿ ಹೆಚ್ಚುವರಿಯಾಗಿ 1,000 ಬಸ್ಗಳು ಮತ್ತು 50,000 ಖಾಸಗಿ ವಾಹನಗಳು ರಸ್ತೆಗಿಳಿದಿವೆ ಎಂದು ಮಾಧ್ಯಮ ವರದಿಗಳು ಸೂಚಿಸಿವೆ. ಬಸ್ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿತ್ತು.
ಹಬ್ಬದ ಬಳಿಕ ಹೆಚ್ಚಿನ ಟ್ರಾಫಿಕ್
ಮಂಗಳವಾರ ಬಲಿಪಾಡ್ಯಮಿ ಇರುವ ಕಾರಣ ಅಂದು ಕೂಡ ಹಲವು ಕಚೇರಿಗಳಿಗೆ ರಜೆ ಇರುವ ಕಾರಣ ಲಕ್ಷಾಂತರ ಬೆಂಗಳೂರಿಗರು ನಗರದಿಂದ ಊರಿಗೆ, ಪ್ರವಾಸಕ್ಕೆ ತೆರಳಿದ್ದಾರೆ.
ಮಂಗಳವಾರ ಸಂಜೆ ನಗರಕ್ಕೆ ವಾಪಸಾಗುವ ಕಾರಣ ಹೆಚ್ಚಿನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಭಾನುವಾರ ಸಂಜೆ ಕೂಡ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.
ಚಿನ್ನಸ್ವಾಮಿ ಅಂಗಳದಲ್ಲಿ ಭಾನುವಾರ ಭಾರತ - ನೆದರ್ಲ್ಯಾಂಡ್ಸ್ ವಿಶ್ವಕಪ್ ಪಂದ್ಯ ಇರುವ ಕಾರಣ ಚಿನ್ನಸ್ವಾಮಿ ಸುತ್ತಮುತ್ತ ಹೆಚ್ಚಿನ ಟ್ರಾಫಿಕ್ ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಈಗಾಗಲೇ ಟ್ರಾಫಿಕ್, ಪರ್ಯಾಯ ಮಾರ್ಗ ಮತ್ತು ಪಾರ್ಕಿಂಗ್ ವಿವರಗಳನ್ನು ಹಂಚಿಕೊಂಡಿದ್ದು ಸಹಕರಿಸುವಂತೆ ಮನವಿ ಮಾಡಿದ್ದಾರೆ.












Click it and Unblock the Notifications