ಬೆಂಗಳೂರಿನಲ್ಲಿ ವಾಹನಗಳ ಟೋಯಿಂಗ್ ಮತ್ತೆ ಶುರು..?
ಬೆಂಗಳೂರು,ಸೆ.14. ಕಳೆದ ಏಳೆಂಟು ತಿಂಗಳಿನಿಂದ ಬೆಂಗಳೂರು ನಗರದಲ್ಲಿ ನಿಂತುಹೋಗಿರುವ ನೋಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮಾಡುವುದು ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.
ನಗರದಲ್ಲಿ ವಾಹನಗಳ ಟೋಯಿಂಗ್ ಕಾರ್ಯಾಚರಣೆ ಮುಂದುವರಿಸಲು ಅನುಮತಿ ಕೋರಿ ಕರ್ನಾಟಕ ಟೋಯಿಂಗ್ ವಾಹನ ಮಾಲೀಕರು ಮತ್ತು ಕಾರ್ಮಿಕರ ಕ್ಷೇಮಾಭಿವದ್ಧಿ ಸಂಘ ಸಲ್ಲಿಸಿರುವ ಮನವಿ ಪತ್ರವನ್ನು ಆರು ವಾರಗಳಲ್ಲಿ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅದರಂತೆ ಮನವಿಯನ್ನು ಸರ್ಕಾರ ಪರಿಗಣಿಸಿದೇ ಆದಲ್ಲಿ ಟೋಯಿಂಗ್ ಮತ್ತೆ ಆರಂಭವಾಗಲಿದೆ.
ಟೋಯಿಂಗ್ ಕಾರ್ಯಚರಣೆ ಮುಂದುವರಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಸಂಘ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಈ ಸೂಚನೆ ನೀಡಿದೆ.
ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾಯಪೀಠ, ಅರ್ಜಿದಾರರು 2022ರ ಮೇ 21 ಮತ್ತು 26ರಂದು ಸಲ್ಲಿಸಿರುವ ಮನವಿ ಶೈತ್ಯಾಗಾರದಲ್ಲಿದೆ. ಅದನ್ನು ಅನಿರ್ದಿಷ್ಟ ಅವಧಿಗೆ ಶೈತ್ಯಾಗಾರದಲ್ಲಿಯೇ ಮುಂದುವರಿಸಿಕೊಂಡು ಹೋಗಬಾರದು. ಆದ್ದರಿಂದ ಸಂಘದ ಮನವಿಯನ್ನು ಆರು ವಾರದಲ್ಲಿ ಮನವಿ ಪತ್ರ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸಂವಿಧಾನದ 350ನೇ ಪರಿಚ್ಛೇದದ ಪ್ರಕಾರ, ಪ್ರತಿ ಭಾರತೀಯ ಪ್ರಜೆ ಸಹ ತನ್ನ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪ್ರಾಧಿಕಾರಗಳಿಗೆ ತನ್ನದೇ ಭಾಷೆಯಲ್ಲಿ ಮನವಿ ಪತ್ರ ಸಲ್ಲಿಸುವ ಹಕ್ಕು ಹೊಂದಿದ್ದಾನೆ. ಅದರಂತೆ ಸರ್ಕಾರಿ ಅಧಿಕಾರಿ ಹಾಗೂ ಪ್ರಾಧಿಕಾರಗಳ ಪ್ರಜೆಗಳ ಮನವಿ ಪತ್ರವನ್ನು ತ್ವರಿತವಾಗಿ ಪರಿಗಣಿಸಿ ಉತ್ತರ ನೀಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬೆಂಗಳೂರು ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಮುಂದುವರೆಸಲು ಅವಕಾಶ ನೀಡಬೇಕು. ಟೋಯಿಂಗ್ ಕಾರ್ಮಿಕರ ಸಮಸ್ಯೆ ಪರಿಹರಿಸಲು ಆಂಧ್ರ ಮತ್ತು ತೆಲಂಗಾಣದಲ್ಲಿ ರಾಜ್ಯದಲ್ಲಿ ಪರಿಚಯಿಸಿರುವ ಯೋಜನೆಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು. ಟೋಯಿಂಗ್ ನಿಂದ ಈಗಾಗಲೇ ಸಂಗ್ರಹಿಸಿರುವ ಮೊತ್ತಕ್ಕೆ ಶೇ.೨ ರಷ್ಟು ಬಡ್ಡಿಯೊಂದಿಗೆ ಕಾರ್ಮಿಕರಿಗೆ ಬಿಡುಗಡೆ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸುವಂತೆ ಸಂಘ ಅರ್ಜಿಯಲ್ಲಿ ಕೋರಿತ್ತು.
ಮಂಕುತಿಮ್ಮನ ಕಗ್ಗ ಉಲ್ಲೇಖ:
ಸರ್ಕಾರದ ನಿರ್ಲಕ್ಷ್ಯ ಧೋರಣೆ ಕುರಿತು ಸಾಹಿತಿ ಡಿ.ಜಿ. ಗುಂಡಪ್ಪ ತಮ್ಮ ಜನಪ್ರಿಯ 'ಮಂಕುತಿಮ್ಮನ ಕಗ್ಗ' ಪುಸ್ತಕದಲ್ಲಿ ಬರೆದಿರುವ ಸಾಲನ್ನು ನ್ಯಾಯಮೂರ್ತಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
'ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ! ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು!! ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು! ಉರುಳದಿಹುದಚ್ಚರಿಯೋ!- ಮಂಕುತಿಮ್ಮ!! ಎಂಬುದಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಡಿಜಿವಿ ಬರೆದಿರುವ ಕಗ್ಗದ ಸಾಲು ಹಿಂದಿಗಿಂತಲೂ ಇಂದು ಪ್ರಸ್ತುತವಾಗಿದೆ. ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಇದಕ್ಕಿಂತ ಇನ್ನೂ ಹೆಚ್ಚು ನಿರ್ದಿಷ್ಟವಾಗಿ ಹೇಳುವ ಅಗತ್ಯ ಇಲ್ಲ. ಕಲ್ಯಾಣ ರಾಜ್ಯವು ಸಂವಿಧಾನದ ಆಶಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.