ಟೂಲ್ ಕಿಟ್ ಪ್ರಕರಣ: ಬೆಂಗಳೂರಿನ ಯುವ ಹೋರಾಟಗಾರ್ತಿ ದಿಶಾ ರವಿ ಸೆರೆ
ಬೆಂಗಳೂರು, ಫೆಬ್ರವರಿ 14: ಅಂತಾರಾಷ್ಟ್ರೀಯ ಖ್ಯಾತಿ ಪರಿಸರವಾದಿ ಗ್ರೇಟಾ ಥನ್ ಬರ್ಗ್ ಟ್ವೀಟ್ ನಾಂದಿ ಹಾಡಿದ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸೈಬರ್ ವಿಭಾಗದ ಪೊಲೀಸರು ಬೆಂಗಳೂರಿನ ಯುವ ಪರಿಸರ ಹೋರಾಟಗಾರ್ತಿಯನ್ನು ಬಂಧಿಸಿದ್ದಾರೆ. ಹವಾಮಾನ ವೈಪರೀತ್ಯ ಬಗ್ಗೆ ಜಾಗೃತಿ ಅಭಿಯಾನ ಕೈಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಕಿರಿಯ ಪರಿಸರವಾದಿ ಎಂದು ಗುರುತಿಸಿಕೊಂಡಿದ್ದ ದಿಶಾ ರವಿ ಬಂಧಿತ ಆರೋಪಿ.
ಧಿಶಾ ರವಿ ಬಂಧನ
ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಯೇಟರ್ಸ್ ಆಫ್ ಟೂಲ್ ಕಿಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಶನಿವಾರ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ದಿಶಾ ರವಿ ಅವರ ನಿವಾಸಕ್ಕೆ ತೆರಳಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿರುವ ಸಂಗತಿಯನ್ನು ಆಂಗ್ಲ ದೈನಿಕಗಳಲ್ಲಿ ವರದಿಯಾಗಿದ್ದು, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
2018 ರಲ್ಲಿ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಕುರಿತು ಬಹುದೊಡ್ಡ ಹೋರಾಟವನ್ನು ಹುಟ್ಟು ಹಾಕಿದ್ದ ಫ್ರೈಡೇ ಫರ್ ಫ್ಯೂಚರ್ ಸಂಸ್ಥೆಯ ಸಹ ಸ್ಥಾಪಕಿಯಾಗಿದ್ದಳು ದಿಶಾ ರವಿ. ಹವಾಮಾನ ಬದಲಾವಣೆ ಕುರಿತು ಜಾಗತಿಕ ಹೋರಾಟಕ್ಕೆ ಸ್ವೀಡನ್ ನ ಗ್ರೇಟಾ ಥನ್ ಬರ್ಗ್ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಹವಾಮಾನ ವೈಪರೀತ್ಯ ಕುರಿತು ಬಹುದೊಡ್ಡ ಜಾಗೃತಿ ಅಭಿಯಾನಕ್ಕೆ ನಾಂದಿಯಾಡಿತ್ತು. ಹೀಗಾಗಿ ಗ್ರೇಟಾ ಥನ್ ಬರ್ಗ್ ಹಾಗೂ ದಿಶಾ ರವಿಗೂ ನಿಕಟ ಸಂಪರ್ಕವಿತ್ತು.
ಗ್ರೆಟಾ ಟ್ವೀಟ್ನಿಂದ ಭಾರತ ವಿರುದ್ಧದ ಅಂತಾರಾಷ್ಟ್ರೀಯ ಸಂಚು ಬಹಿರಂಗವಾಯ್ತೇ?
ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿಬಿಎ ಪದವಿ ಪೂರೈಸಿದ್ದ ದಿಶಾ ರವಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಸೋಲದೇವನಹಳ್ಳಿ ಬಳಿಯಿರುವ ತನ್ನ ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು. ದಿಶಾ ರವಿ ಅವರ ತಂದೆ ಅಥ್ಲೆಟಿಕ್ ಕೋಚ್ ಆಗಿದ್ದು, ಮೈಸೂರಿನಲ್ಲಿದ್ದಾರೆ. ಸ್ಥಳೀಯ ಪೊಲೀಸರ ನೆರವಿನಿಂದ ದಿಶಾ ರವಿ ಅವರ ವಿಳಾಸ ಹುಡುಕಿ ಫೆ. 4 ರಂದು ದೆಹಲಿ ಪೊಲೀಸರು ದಾಖಲಿಸಿರುವ ಟೂಲ್ ಟಿಕ್ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಏನಿದು ಟೂಲ್ ಕಿಟ್ ಪ್ರಕರಣ
ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಅನಿರ್ಧಿಷ್ಟ ಹೋರಾಟ ಕೈಗೊಂಡಿದ್ದಾರೆ. ಈ ರೈತರ ಹೋರಾಟವನ್ನು ಜಾಗತಿಕ ಗಮನ ಸೆಳೆಯುವ ನಿಟ್ಟಿನಲ್ಲಿ ಸ್ವೀಡನ್ ನ ಪರಿಸರ ಕಾರ್ಯಕರ್ತೆ, ಗ್ರೇಟಾ ಥನ್ ಬರ್ಗ್ ಟೂಲ್ ಕಿಟ್ ನ್ನು ಟ್ವೀಟ್ ಮಾಡಿದ್ದರು. ಇದು ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಹೋರಾಟ, ಅವ್ಯವಸ್ಥೆ, ಹಿಂಸಾಚಾರದ ನಂತರ ಥನ್ ಬರ್ಗ್ ಟ್ವೀಟ್ ಜಾಗತಿಕ ಸಮುದಾಯ ಹಂತದಲ್ಲಿ ಭಾರತ ಸರ್ಕಾರದ ವಿರುದ್ಧ ಬಹುದೊಡ್ಡ ಅಭಿಪ್ರಾಯ ವ್ಯಕ್ತವಾಗಲು ಕಾರಣವಾಯಿತು. ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಗ್ರೇಟಾ ಥನ್ ಬರ್ಗ ಟ್ವೀಟ್ ನ ಮಾಹಿತಿ ಆಧರಿಸಿ ಜನವರಿ 26 ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಪೂರ್ವ ನಿಯೋಜಿತ ಕೃತ್ಯ. ಖಲಿಸ್ತಾನಿ ಪ್ರತ್ಯೇಕವಾದಿ ಗುಂಪುಗಳು ರೈತರ ಹೋರಾಟವನ್ನು ಹಿಂಸಾ ರೂಪಕ್ಕೆ ತಿರುಗಿಸಿ ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಟೂಲ್ ಕಿಟ್ ರಚಿಸಲಾಗಿದೆ ಎಂದು ಆಪಾದಿಸಿ ದೆಹಲಿ ಸೈಬರ್ ಪೊಲೀಸರು ಕ್ರಿಯೇಟರ್ಸ್ ಆಫ್ ಟೂಲ್ ಕಿಟ್ ವಿರುದ್ಧ ಫೆ. 4 ರಂದು ಕೇಸು ದಾಖಲಿಸಿಕೊಂಡಿದ್ದರು.
ಪೊಯೇಟಿಕ್ ನಂಟು
ಗ್ರೇಟಾ ಥನ್ ಬರ್ಗ್ ಹಂಚಿಕೊಂಡಿದ್ದ ಟೂಲ್ ಕಿಟ್ ಖಲಿಸ್ತಾನ ಪರವಾದ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ ಎಂಬ ಗುಂಪಿಗೆ ಸೇರಿದ್ದು ಎಂಬುದನ್ನು ದೆಹಲಿ ಪೊಲೀಸರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಜನವರಿ 26 ರಂದು ನಡೆದ ಹಿಂಸಾಚಾರ ಸೇರಿದಂತೆ ಕೆಲವು ದಿನಗಳಲ್ಲಿ ನಡೆದ ಘಟನೆಗಳ ಬಗ್ಗೆ ಟೂಲ್ ಕಿಟ್ ನ ಕ್ರಿಯಾ ಯೋಜನೆಯಲ್ಲಿ ಉಲ್ಲೇಖವಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದರು. ಕ್ಯಾಪಿಕ್ಯಾಟ್ ಪರಿಶೀಲನೆ ವೇಳೆ ಈ ಅಂಶ ಬಹಿರಂಗವಾಗಿದ್ದು, ಇದು ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಯುದ್ಧ ಎಂದು ಹೇಳಿದ್ದರು.
ಜ. 26 ರಂದು ನಡೆದ ರೈತರ ಬಹುದೊಡ್ಡ ಹೋರಾಟ, ಅದಕ್ಕೂ ಮೊದಲು ನಡೆದ ಹ್ಯಾಷ್ ಟ್ಯಾಗ್ ಡಿಜಿಟಲ್ ಸ್ಟ್ರೈಕ್, ಟ್ವೀಟ್ ಗಳ ಬಿರುಗಾಳಿ, ದೆಹಲಿ ಮರವಣಿಗೆ, ಎಲ್ಲವೂ ಟೂಲ್ ಕಿಟ್ ನಿರ್ಧಿಷ್ಟ ವಿಭಾಗ ಹೊಂದಿದೆ. ಟೂಲ್ ಕಿಟ್ ದಾಖಲೆಗಳು ಭಾರತ ಸರ್ಕಾರದ ವಿರುದ್ಧ ಅಸಮಾಧಾನ, ಕೆಟ್ಟ ಭಾವನ ಹರಡುವ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಗುಂಪುಗಳಲ್ಲಿ ಕೆಟ್ಟ ಭಾವನೆ ಹರಡುವ ಉದ್ದೇಶ ಹೊಂದಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಕ್ರಿಯೇಟರ್ಸ್ ಆಫ್ ಟೂಲ್ ಕಿಟ್ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಭಾರಿಗೆ ಬೆಂಗಳೂರಿನ ಯುವ ಪರಿಸರ ವಾದಿ ದಿಶಾ ರವಿಯನ್ನು ಬಂಧಿಸಿದ್ದಾರೆ. ಟೂಲ್ ಕಿಟ್ ತಯಾರಿಕೆಯಲ್ಲಿ ದಿಶಾ ರವಿ ಭಾಗಿಯಾಗಿದ್ದಾರೆ, ಟೂಲ್ ಕಿಟ್ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿದಿಶಾ ರವಿಯನ್ನು ಬಂಧಿಸಿದ್ದಾರೆ.
Recommended Video
ಗೂಗಲ್ ಮಾಹಿತಿ ಕೇಳಿದ್ದ ಪೊಲೀಸರು
ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ರೈತರ ಹೋರಾಟದ ಬಗ್ಗೆ ಜಾಗತಿಕ ಮಟ್ಟದಲ್ಲಿ ಟ್ವೀಟ್ ಮಾಡಿದ್ದ, ಮಾಹಿತಿ ಹಂಚಿಕೊಂಡಿದ್ದವರ ಸಮಗ್ರ ವಿವರಗಳನ್ನು ನೀಡುವಂತೆ ದೆಹಲಿ ಪೊಲೀಸರು ಗೂಗಲ್ ಸಂಸ್ಥೆಗೆ ಮನವಿ ಮಾಡಿದ್ದರು. ಟೂಲ್ ಕಿಟ್ ಸೃಷ್ಟಿಕರ್ತರ ಇಮೇಲ್, ಯು ಆರ್ ಎಲ್ ವಿವರ ನೀಡುವಂತೆ ಕೇಳಿದ್ದರು. ಈ ವಿವಾದಿತ ಸೋಷಿಯಲ್ ಮೀಡಿಯಾ ಖಾತೆ ರಚಿಸಿದ ಹಾಗೂ ಟೂಲ್ ಕಿಟ್ ದಾಖಲೆಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡವರ ಬಗ್ಗೆ ವಿವರಗಳನ್ನು ಕೇಳಿದ್ದರು. ಇದರ ಬೆನ್ನಲ್ಲೇ ಮೊದಲ ಹಂತದಲ್ಲಿ ದಿಶಾ ರವಿ ಅವರನ್ನು ಬಂಧಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ