ಪರಿಸರ ಜಾಗೃತಿಯ ಪಾಠ ಬೋಧಿಸಿದ ಬೆಂಗಳೂರು ವಾಕಥಾನ್
ಬೆಂಗಳೂರು, ಡಿಸೆಂಬರ್ 09 : ಸಮರ್ಥನಂ ಅಂಕವಿಕಲ ಸಂಸ್ಥೆ ಹಾಗೂ ಅಲರ್ಗನ್ ಸಹಯೋಗದಲ್ಲಿ ಹಸಿರಿನೆಡೆಗೆ ನಡಿಗೆ ' ಗ್ರೀನ್ ವಿಷನ್ ಕ್ಲಿಯರ್ ವಿಷನ್' ಎಂಬ ವಿನೂತನ ಕಾರ್ಯಕ್ರಮ ಶನಿವಾರ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸಭಾಂಗಣದಲ್ಲಿ ನಡೆಯಿತು.
ಸಮರ್ಥನಂ ಸಂಸ್ಥೆ ಆಯೋಜಿಸಿದ್ದ 13 ನೇ ವಾಕಥಾನ್ ಇದಾಗಿದೆ. ಈ ಬಾರಿಯ ಪರಿಕಲ್ಪನೆ ಗ್ರೀನ್ ವಿಷನ್ ಕ್ಲಿಯರ್ ಮಿಷನ್ ಆಗಿತ್ತು. ಸಾರ್ವಜನಿಕರಲ್ಲಿ ಪರಿಸರ ಕಾಳಜಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಈ ವಾಕಥಾನ್ ಉದ್ದೇಶವಾಗಿತ್ತು.
ಕಾರ್ಪೊರೇಟ್ ಸಿಬ್ಬಂದಿ, ಸ್ವಯಂ ಸೇವಾ ಸಂಘಟನೆಗಳು, ವಿದ್ಯಾರ್ಥಿಗಳು, ವಿಕಲಚೇತನರು ಸೇರಿದಂತೆ ಹಲವು ಕ್ಷೇತ್ರಗಳ 10 ಸಾವಿರಕ್ಕೂ ಹೆಚ್ಚು ಜನರು ಹಸಿರು ಬದಲಾವಣೆಯ ವಾಕ್ ನಲ್ಲಿ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ವಾತಿ ಸಿಂಗ್ ಮಾತನಾಡಿ, ಇಡೀ ದೇಶದಲ್ಲೇ ಅತಿ ಹೆಚ್ಚು ಅಂಗವಿಕಲರಿರುವ ಪ್ರದೇಶ ಉತ್ತರ ಪ್ರದೇಶವಾಗಿದೆ. ಅವರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಎಂದರು.
ತ್ಯಾಜ್ಯ ಸಂಸ್ಕರಿಸಲು ವಿವಿಧ ರೀತಿಯ ಘಟಕಗಳನ್ನು ತೆರೆಯಲಾಗಿದೆ. ಒಮ್ಮೆ ಎಲ್ಲರೂ ಬೇಟಿ ನೀಡಿ, ಮೊದಲಿನ ಉತ್ತರ ಪ್ರದೇಶವಾಗಿ ಉಳಿದಿಲ್ಲ ಈಗ ಸಾಕಷ್ಟು ಬದಲಾವಣೆಯಾಗಿದೆ. ನನಗೆ ಮಹಿಳಾ ಅಂಧರ ಕ್ರಿಕೇಟ್ ನೋಡಿದರೆ ತುಂಬಾ ಸಂತೋಷವಾಗುತ್ತದೆ.
ಅಂಧರು ತಮ್ಮ ಅಂಧತ್ವವನ್ನು ಬದಿಗೊತ್ತಿ ತಮ್ಮ ಅವಕಾಶ ಕೊಡಿ ಸಾಧಿಸಿ ತೋರಿಸುತ್ತೇವೆ ಎನ್ನುವ ಛಲವನ್ನು ಬೆಳೆಸಿಕೊಂಡಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ನಟಿ ಪ್ರಿಯಾಂಕ ಉಪೇಂದ್ರ, ಇಂಡಿಯನ್ ಯೂತ್ ಕಾಂಗ್ರೆಸ್ನ ಬೆಂಗಳೂರು ಘಟಕದ ಉಪಾಧ್ಯಕ್ಷೆ ಸೌಮ್ಯ ರೆಡ್ಡಿ, ಕಾರ್ಪೊರೇಟರ್ ನಾಗರಾಜು, ಸಮರ್ಥನಂ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಮಹಂತೇಶ್ ಜಿ.ಕೆ ಪಾಲ್ಗೊಂಡಿದ್ದರು.