ದೀಪಾವಳಿ ಪ್ರಯುಕ್ತ ಕೆಎಸ್ಆರ್ ಟಿಸಿ ವಿಶೇಷ ಬಸ್ ಸೌಲಭ್ಯ
ಬೆಂಗಳೂರು, ಅ, 27 : ದೀಪಾವಳಿ ಪ್ರಯುಕ್ತ ಸಾಲು-ಸಾಲು ರಜೆಗಳು ಎದುರಾಗಿರುವುದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಅ.31ರಿಂದ ನ.2ರವರೆಗೆ ಕೆಎಸ್ಆರ್ ಟಿಸಿಯ ಒಂದು ಸಾವಿರ ವಿಶೇಷ ಬಸ್ ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.
ವಿಶೇಷ ಮತ್ತು ಪ್ರತಿದಿನ ಸಂಚರಿಸುವ ಬಸ್ ಗಳ ಮುಂಗಡ ಬುಕ್ಕಿಂಗ್ ಗಾಗಿ ಕೆಎಸ್ಆರ್ ಟಿಸಿ ಬೆಂಗಳೂರಿನಲ್ಲಿ 173 ಕೌಂಟರ್ ಗಳನ್ನು ತೆರೆದಿದೆ. ಮೈಸೂರಿನಲ್ಲಿ 18, ಮಂಗಳೂರಿನಲ್ಲಿ 53 ಸೇರಿದಂತೆ 230 ಕೌಂಟರ್ ಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೆರೆದಿದೆ. ನಾಲ್ಕು ಅಥವ ಅದಕ್ಕಿಂತ ಹೆಚ್ಚಿನ ಟಿಕೆಟ್ ಬುಕ್ ಮಾಡಿದರೆ, ಶೇ ೫ರ ರಿಯಾಯಿತಿ ಘೋಷಿಸಿದೆ.

ಪ್ರಯಾಣ ಮತ್ತು ವಾಪಸ್ ಆಗುವ ಟಿಕೆಟ್ ಅನ್ನು ಮುಂಗಡವಾಗಿ ಕಾಯ್ದಿರಿಸುವ ಪ್ರಯಾಣಿಕರಿಗೆ ಶೇ 10ರಷ್ಟು ರಿಯಾಯಿತಿ ನೀಡುವುದಾಗಿ ಕೆಎಸ್ಆರ್ ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಹೊರ ರಾಜ್ಯಗಳ ಕೆಎಸ್ಆರ್ ಟಿಸಿ ಕೌಂಟರ್ ಗಳಲ್ಲಿಯೂ ಮುಂಗಡ ಟಿಕೆಟ್ ಕಾಯ್ದರಿಸಬಹುದಾಗಿದೆ. ಇ-ಟಿಕೆಟ್ ಬುಕ್ಕಿಂಗ್ ಅನ್ನು www.ksrtc.in ವೆಬ್ಸೈಟ್ ಮೂಲಕ ಮಾಡಬಹುದು.
ಈ ವಿಶೇಷ ಬಸ್ ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಬೆಳಗಾವಿ, ಬಿಜಾಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಗುಲ್ಬರ್ಗಾ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮುಂತಾದ ಜಿಲ್ಲೆಗಳಿಗೆ ತೆರಳಲಿವೆ.
ಮೈಸೂರು, ಹುಣಸೂರು, ಮಡಿಕೇರಿಗಳಿಗೆ ತೆರಳುವ ಬಸ್ ಗಳು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ತೆರಳಲಿವೆ. ಶಾಂತಿನಗರ, ಜಯನಗರ 4ನೇ ಹಂತ, ಜಯನಗರ 9 ನೇ ಹಂತ, ಜಾಲಹಳ್ಳಿ ಕ್ರಾಸ್, ರಾಜಾಜಿನಗರ, ಮಲ್ಲೇಶ್ವರಂ, ಕೆಂಗೇರಿ ಬಸ್ ನಿಲ್ದಾಣದಿಂದಲೂ ತೆರಳಲಿವೆ.
ವಿಶೇಷ ರೈಲು ವ್ಯವಸ್ಥೆ : ದೀಪಾವಳಿ ಪ್ರಯುಕ್ತ ಬೆಂಗಳೂರು- ಹುಬ್ಬಳ್ಳಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಟೋಬರ್ 31 ರಂದು ರಾತ್ರಿ 8 ಗಂಟೆಗೆ 06589 ಸಂಖ್ಯೆಯ ರೈಲು ಬೆಂಗಳೂರು ನಗರ ರೈಲು ನಿಲ್ದಾಣದಿಂದ ಹೊರಡಲಿದೆ.
ಈ ರೈಲು ತುಮಕೂರು, ತಿಪಟೂರು, ಅರಸಿಕೆರೆ, ಬೀರೂರು, ದಾವಣಗೆರೆ, ರಾಣೆಬೆನ್ನೂರು, ಹಾವೇರಿಯಲ್ಲಿ ನಿಲುಗಡೆ ಹೊಂದಿದೆ. ನವೆಂಬರ್ 4 ರಂದು ರಾತ್ರಿ 8.25ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ವಿಶೇಷ ರೈಲಿನಲ್ಲಿ ಒಟ್ಟು 17 ಕೋಚ್ಗಳಿದ್ದು, 9 ಸ್ಲೀಪರ್ ಕೋಚ್, 1 ಎಸಿ 3 ಟೈರ್ ಕೋಚ್, 5 ಜನರಲ್ ಕೋಚ್ಗಳು, 2 ಲಗೇಜ್ ಕಂ ಜನರಲ್ ಕೋಚ್ ಹೊಂದಿರಲಿವೆ.












Click it and Unblock the Notifications