ಅಂಧರ ಪರೀಕ್ಷೆಗೆ ಸೋಮನಾಥ ಗೌಡರ ದೀವಿಗೆ
ಬೆಂಗಳೂರು, ಮೇ. 7 : ಸಾಮಾಜಿಕ ಕೆಲಸ ಮಾಡುವ ಇಚ್ಛೆ ಇದ್ದವರು ರಾಜಕಾರಣಿಯೇ ಆಗಬೇಕೆಂದೇನಿಲ್ಲ ಅಥವಾ ಐಎಎಸ್ ಅಧಿಕಾರಿಯೇ ಆಗಬೇಕೆಂದೇನಿಲ್ಲ. ಅಥವಾ ಮಾಧ್ಯಮ ಶೂರರು ಆಗಬೇಕೆಂದೇನಿಲ್ಲ ಎಂದು ನಿರೂಪಿಸುತ್ತಿರುವವರ ಜೀವನಗಾಥೆಯನ್ನು ಓದಲೇಬೇಕು.
ಅಣೆಕಟ್ಟು ನಿರ್ಮಿಸಿಯೋ, ರಸ್ತೆ ನಿರ್ಮಾಣ ಮಾಡಿಯೇ ಗುರುತಿಸಿಕೊಳ್ಳಬೇಕು ಎಂದೇನಿಲ್ಲ. ಚಿಕ್ಕ ಚಿಕ್ಕ ರೀತಿಯ ಸಮಾಜ ಸೇವೆ ಮಾಡುತ್ತಿರುವ ಸಾವಿರಾರು ಮಂದಿ ನಮ್ಮ ಸುತ್ತಲೇ ಇರುತ್ತಾರೆ. ಅವರಿಗೆ ಪ್ರಚಾರವೂ ಬೇಕಿಲ್ಲ. ಅದರ ಅನಿವಾರ್ಯವೂ ಇಲ್ಲ.[ಅಂಧರ ಬಾಳಿನ ಬೆಳಕು 'ದೃಷ್ಟಿದೇವತೆ' ಮೈಸೂರಿನ ಮಧುರ]

ವಿಕಲ ಚೇತನ ಮಕ್ಕಳ ಪಿಯುಸಿ ಪರೀಕ್ಷೆಯನ್ನೋ, ಡಿಗ್ರಿ ಪರೀಕ್ಷೆಯನ್ನೋ ಬರೆಯುವ ಸಮಾಜ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಬಿಡಿ. ಅನಿವಾರ್ಯ ಸಂದರ್ಭದಲ್ಲಿ ರಕ್ತದಾನ ಮಾಡುವುದು. ಸಾಮಾಜಿಕ ಜಾಲತಾಣದ ಮೂಲಕ ಸಮಸ್ಯೆಗಳನ್ನು ಸಂಬಂಧಿಸಿದವರ ಗಮನಕ್ಕೆ ತರುವುದು ಎಲ್ಲವೂ ಸಮಾಜ ಸೇವೆಯೇ ಒಂದು ಭಾಗವೇ.
ಇಂಥದ್ದೇ ಇಂದು ಕೆಲಸವನ್ನು ಕಳೆದ ಒಂದುವರೆ ವರ್ಷದಿಂದ ಮಾಡಿಕೊಂಡು ಬರುತ್ತಿರುವವರು ಒನ್ ಇಂಡಿಯಾ ಕ್ಲಿಕ್ ಇನ್ ನಲ್ಲಿ ಕೆಲಸ ಮಾಡುತ್ತಿರುವ ಸೋಮನಾಥ ಗೌಡ. ಡಿಪ್ಲೋಮಾ ವ್ಯಾಸಂಗ ಮಾಡಿರುವ ಗೌಡರು ಅನೇಕ ಅಂಧ ಮಕ್ಕಳ ಪರೀಕ್ಷೆ ಬರೆದಿದ್ದಾರೆ ಮತ್ತು ಬರೆಯುತ್ತಲೂ ಇದ್ದಾರೆ.
ತಮ್ಮ ದೈನಂದಿನ ಕೆಲಸಗಳನ್ನು ಹೊರತುಪಡಿಸಿ ಇಂಥ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಯುತ್ ಫಾರ್ ಸೇವಾ ಎಂಬ ಎನ್ ಜಿಒ ದ ಅಡಿಯಲ್ಲಿ ಪರೀಕ್ಷೆಗೆ ನೆರವಾಗುತ್ತಿದ್ದಾರೆ. ಕಳೆದ ವಾರ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಬಸವರಾಜ್ ಎಂಬ ಅಂಧ ವಿದ್ಯಾರ್ಥಿಯ ಬಿಎ (ಮನಶಾಸ್ತ್ರ) ಪರೀಕ್ಷೆ ಬರೆದು ಬಂದಿದ್ದಾರೆ. ಮುಂದಿನ ವಾರ ಮತ್ತೆರಡು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ.

ಗೌಡರು ಏನಂತಾರೆ?
ಇದು ನಾವು ಪರೀಕ್ಷೆ ಬರೆದಂತೆ ಅಲ್ಲ. ಅಂಧ ವಿದ್ಯಾರ್ಥಿ ಉತ್ತರಗಳನ್ನು ಡಿಕ್ಟೇಟ್ ಮಾಡುತ್ತಾರೆ. ಅದನ್ನು ನಾವು ಕೇಳಿಕೊಂಡು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಬರೆಯುತ್ತಿರುವ ವಿಷಯದ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರಬೇಕಾದದ್ದು ಅಗತ್ಯ ಎಂದು ಹೇಳುತ್ತಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗೌಡರಿಗೆ ಇಂಥ ಪರೀಕ್ಷೆ ಬರೆಯೋದ್ರಲ್ಲೇ ಒಂದು ಬಗೆಯ ಆತ್ಮ ತೃಪ್ತಿಯಿದೆ. ಕ್ಲಿಕ್ ಇನ್ ನಲ್ಲಿ ಸೀನಿಯರ್ ಬಿಸಿನಸ್ ಪ್ರೋಸೆಸಿಂಗ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿರುವ ಗೌಡರಿಗೆ ಕೆಲ ಸಂದರ್ಭ ರಜಾ ಕೊರತೆ ಎದುರಾಗಿದ್ದು ಇದೆ. ಇಲ್ಲಿವರೆಗೆ ಈ ಬಗೆಯ ಹತ್ತಕ್ಕೂ ಅಧಿಕ ಪರೀಕ್ಷೆ ಬರೆದಿದ್ದಾರೆ. ಬರೆದ ವಿದ್ಯಾರ್ಥಿ ಪಾಸ್ ಆದರೆ ತಾವೇ ಡಿಸ್ಟಿಂಕ್ ಶನ್ ಬಂದಂತೆ ಸಂಭ್ರಮಿಸಿದ್ದಾರೆ.[ಬೆಸ್ಕಾಂ ಎಂಡಿ ಮಣಿವಣ್ಣನ್ ಗೆ ನಮ್ಮ ಬೆಂಗಳೂರು ಪ್ರಶಸ್ತಿ]
ಸಾಮಾನ್ಯ ವಿಭಾಗವೇ ಬೆಸ್ಟ್ ಎಂದ ಬಸವರಾಜ್
ಮೊದಲು ಅಂಧರಿಗೆ ಮೀಸಲಿದ್ದ ಬ್ರೈಲ್ ಲಿಪಿಯಲ್ಲಿ ಅಭ್ಯಾಸ ಮಾಡಿದ ಬಸವರಾಜ್ ಗೆ ಅದು ಯಾಕೋ ರುಚಿಸಲಿಲ್ಲ. ಅವರು ನಂತರ ಸಾಮಾನ್ಯ ವಿಭಾಗದಲ್ಲೇ ವ್ಯಾಸಂಗ ಮುಂದುವರಿಸಲು ಸಿದ್ಧರಾದರು. ಉಪನ್ಯಾಸಕರು ಹೇಳಿದ್ದನ್ನು ಮನನ ಮಾಡಿಕೊಳ್ಳುವ ಅಥವಾ ತಂತ್ರಜ್ಞಾನ ಬಳಸಿ ರೆಕಾರ್ಡ್ ಮಾಡಿಕೊಂಡು ಕೇಳಿ ಅಭ್ಯಸಿಸುವ ಬಸವರಾಜ್ ಉಳಿದ ವಿದ್ಯಾರ್ಥಿಗಳಿಗಿಂತಲೂ ಉತ್ತಮವಾಗಿಯೇ ಪರೀಕ್ಷೆ ಬರೆದಿದ್ದಾರೆ ಎಂಬುದು ಸೋಮನಾಥ್ ಗೌಡ ಅವರ ಅಭಿಪ್ರಾಯ.
ಸರ್ಕಾರಿ ಉದ್ಯೋಗದ ಆಸೆಯನ್ನು ಕಣ್ಣಲ್ಲಿ ತುಂಬಿಕೊಂಡ ಅಂಧ ಬಸವರಾಜ್ ನಂಥ ಸಾವಿರಾರು ಜನರಿಗೆ ಸೋಮನಾಥ ಗೌಡ ರಂಥ ಸಹೃದಯಿಗಳ ನೆರವು ಖಂಡಿತ ಅಗತ್ಯ. ನಮ್ಮ ನಮ್ಮ ಪರೀಕ್ಷೆ ಅಟೆಂಡ್ ಮಾಡಲು ಒದ್ದಾಡುವ ಕಾಲದಲ್ಲಿ ಅಂಧರ ಪರೀಕ್ಷೆಯನ್ನು ತನ್ನದೆಂದೂ ಭಾವಿಸಿ ಬರೆಯುತ್ತಿರುವ ಗೌಡರಿಗೆ ಅಭಿನಂದನೆ. ವಿದ್ಯಾರ್ಥಿ ಬಸವರಾಜ್ ಕನಸಿಗೆ ಗುಡ್ ಲಕ್.












Click it and Unblock the Notifications