ಮಹಾಲಕ್ಷ್ಮಿ ಕೊಲೆ ಕೇಸ್ಗೆ ಸಿಕ್ತು ಹೊಸ ಟ್ವಿಸ್ಟ್! ಎಲ್ಲದಕ್ಕೂ ಕಾರಣ ಅದೇ..
ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ನಡೆದಿರುವ ಮಹಾಲಕ್ಷ್ಮಿ ಎಂಬುವವರ ಕೊಲೆ ಪ್ರಕರಣವು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಮಾಡಿ ಫ್ರಿಡ್ಜ್ನಲ್ಲಿ ಇಡಲಾಗಿದ್ದು, ಈ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಸದ್ಯ ಈ ಕೊಲೆ ಮಾಡಿರುವ ಆರೋಪಿ ಯಾರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಬಂಧಿಸಿ ಕರೆತರಲು ಹೊರರಾಜ್ಯಗಳಿಗೆ ತೆರಳಿದ್ದಾರೆ.
ಮೊದಲಿಗೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಅಶ್ರಫ್ ಎಂಬಾತನ ಮೇಲೆ ಎಲ್ಲರೂ ಅನುಮಾನ ಪಟ್ಟಿದ್ದರು. ಮಹಾಲಕ್ಷ್ಮಿ ಕುಟುಂಬದವರು ಕೂಡ ಈತನ ಮೇಲೆ ಆರೋಪ ಮಾಡಿದ್ದರು. ಆದರೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರ ಮಧ್ಯೆ ಸಂಬಂಧ ಇದ್ದಿದ್ದು ನಿಜ ಎಂದು ಒಪ್ಪಿಕೊಂಡಿದ್ದ. ಆದರೆ, ಈ ಕೊಲೆ ನಾನು ಮಾಡಿಲ್ಲ. ನಮ್ಮಿಬ್ಬರ ವಿಚಾರ ಅವರ ಕುಟುಂಬಕ್ಕೆ ತಿಳಿದು ಗಲಾಟೆಯಾದ ಕಾರಣ ಆರು ತಿಂಗಳಿನಿಂದ ಇಬ್ಬರೂ ದೂರವಿದ್ದೆವು ಎಂದು ಹೇಳಿದ್ದಾನೆ.

ಹಾಗಾಗಿ ಪೊಲೀಸರು ಅಶ್ರಫ್ನನ್ನು ಬಿಟ್ಟು ಕಳಿಸಿದ್ದಾರೆ. ಹಾಗಾದರೆ ಕೊಲೆ ಆರೋಪಿ ಯಾರಿರಬಹುದು ಎಂದು ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಸದ್ಯ ಆರೋಪಿ ಯಾರು? ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕೇಸ್ಗೆ ಹೊಸ ತಿರುವು ಪಡೆದುಕೊಂಡಿದೆ. ಮಹಾಲಕ್ಷ್ಮಿಯ ಮೊಬೈಲ್ ಪರಿಶೀಲಿಸಿದಾಗ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಒಡಿಶಾ ಮೂಲದ ವ್ಯಕ್ತಿ ಮೇಲೆ ಕೊಲೆ ಅನುಮಾನ ದಟ್ಟವಾಗಿದೆ.
ಮಾಲ್ನಲ್ಲಿ ಮೃತ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದವನೇ ಆರೋಪಿ ಎಂದು ಪೊಲೀಸರು ಅನುಮಾನಗೊಂಡಿದ್ದಾರೆ. ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಮಹಾಲಕ್ಷ್ಮಿ ಪತಿಯನ್ನು ಬಿಟ್ಟು, ವೈಯಾಲಿಕಾವಲ್ನಲ್ಲಿ ಬಾಡಿಗೆಗೆ ಇದ್ದರು. ಈಗ ಕೆಲಸ ಮಾಡುವ ಮಾಲ್ನಲ್ಲಿ ಆರೋಪಿಯ ಪರಿಚಯ ಮಹಾಲಕ್ಷ್ಮಿಗೆ ಆಗಿತ್ತು. ಇಬ್ಬರ ನಡುವೆ ಸ್ನೇಹ ಶುರುವಾಗಿ ಅಕ್ರಮ ಸಂಬಂಧದವರೆಗೂ ಮುಂದುವರಿದಿತ್ತು ಎಂಬುದು ತಿಳಿದುಬಂದಿದೆ.
ಇದರ ನಡುವೆ ಮಹಾಲಕ್ಷ್ಮಿ ಅಶ್ರಫ್ ಜೊತೆಗೂ ಸಲುಗೆಯಿಂದ ಇದ್ದರು. ಈ ವಿಚಾರ ಆರೋಪಿಗೆ ಗೊತ್ತಾಗಿ ಅಶ್ರಫ್ನಿಂದ ದೂರ ಇರುವಂತೆ ವಾರ್ನಿಂಗ್ ಕೂಡ ಕೊಟ್ಟಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆರೋಪಿ ಹಾಗೂ ಮಹಾಲಕ್ಷ್ಮಿ ನಡುವೆ ಜಗಳ ನಡೆದಿದ್ದು, ಆರೋಪಿ ಕೋಪಗೊಂಡು ಈ ರೀತಿ ಕೃತ್ಯ ಎಸಗಿರುವ ಸಾಧ್ಯತೆ ಎಂದು ವರದಿಯಾಗಿದೆ.
ಹಾಗಾಗಿ ಒಡಿಶಾ ಮೂಲದ ಆ ವ್ಯಕ್ತಿಯೇ ಮಹಾಲಕ್ಷ್ಮಿಯ ಕೊಲೆ ಮಾಡಿರುವುದು ಬಹುತೇಕ ಕನ್ಫರ್ಮ್ ಎನ್ನಲಾಗಿದೆ. ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ ಬಳಿಕ ಆತ ಬೆಂಗಳೂರಿನಿಂದ ಎಸ್ಕೇಪ್ ಆಗಿದ್ದು, ಕೊಲೆ ಬಳಿಕ ತನ್ನ ಸಹೋದರಿಗೆ ಫೋನ್ ಕೂಡ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ನನ್ನನ್ನು ಬಂಧಿಸಬಹುದು. ಹಾಗಾಗಿ ನಾನು ಇಲ್ಲಿಂದ ಹೊರಡುತ್ತಿದ್ದೇನೆ ಎಂದು ಆರೋಪಿ ಹೇಳಿಯೇ ನಾಪತ್ತೆಯಾಗಿದ್ದಾನೆ.
ಸದ್ಯ ಆರೋಪಿ ಸಹೋದರನನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಮೃತ ಮಹಾಲಕ್ಷ್ಮಿ ಮೊಬೈಲ್ ಕರೆಗಳಲ್ಲಿ ಆರೋಪಿಯೂ ಸೇರಿದಂತೆ ಮೂವರ ಜೊತೆ ಹೆಚ್ಚು ಮಾತನಾಡಿರುವುದು ಗೊತ್ತಾಗಿದೆ. ಇದರಲ್ಲಿ ಇಬ್ಬರನ್ನು ಪೊಲೀಸರು ಸಿಕ್ಕಿದ್ದು, ಆರೋಪಿ ಪತ್ತೆಯಾಗಿಲ್ಲ. ಈತನ ಮೊಬೈಲ್ ವಿವರಗಳನ್ನು ಬೆನ್ನತ್ತಿದಾಗ ಕೊನೆಯ ಬಾರಿ ಪಶ್ಚಿಮ ಬಂಗಾಳದಲ್ಲಿ ಈತನ ಮೊಬೈಲ್ ಲೊಕೇಶನ್ ಪತ್ತೆಯಾಗಿದೆ. ಸದ್ಯ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಎರಡು ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಏನಿದು ಪ್ರಕರಣ?: ಈ ಹಿಂದೆ ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಮಾದರಿಯಲ್ಲೇ ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ಮಹಾಲಕ್ಷ್ಮಿ ಎನ್ನುವ ಮಹಿಳೆಯ ಶವವನ್ನು ಫ್ರಿಡ್ಜ್ನಲ್ಲಿ ಪೀಸ್ ಪೀಸ್ ಮಾಡಿ ಇಡಲಾಗಿದೆ. ಮೃತದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಮನೆಯ ಫ್ರಿಡ್ಜ್ನಲ್ಲಿ ಇಟ್ಟಿದ್ದು, ಕೆಟ್ಟ ವಾಸನೆ ಬರುತ್ತಿದ್ದ ಅನುಮಾನದ ಮೇರೆಗೆ ಮಾಲೀಕರು ಈಕೆಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಬಳಿಕ ಮೃತಳ ತಾಯಿ ಮನೆಗೆ ಬಂದು ಫ್ರಿಡ್ಜ್ ತೆರೆದು ನೋಡಿದಾಗ ಒಳಗೆ ಮಹಾಲಕ್ಷ್ಮಿಯ ಮೃತದೇಹ ಕಂಡು ಕಿರುಚಿಕೊಂಡು ಓಡಿದ್ದರು.
ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಮೊದಲಿಗೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಎನ್ನಲಾದ ಅಶ್ರಫ್ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅಶ್ರಫ್ ಅಲ್ಲದೆ ಮಹಾಲಕ್ಷ್ಮಿ ಜೊತೆಗೆ ಕೆಲಸ ಮಾಡುತ್ತಿದ್ದರು ಎನ್ನಲಾದ ಮುಕ್ತ, ಶಶಿಧರ್, ಸುನೀಲ್ ಎಂಬುವವರ ಮೇಲೆಯೂ ಕುಟುಂಬಸ್ಥರು ದೂರು ನೀಡಿದ್ದರು.
ಮಹಾಲಕ್ಷ್ಮಿಯ ಮೃತದೇಹ ಪೀಸ್ ಪೀಸ್ ಆಗಿದ್ದರಿಂದ ಅದರ ಮರಣೋತ್ತರ ಪರೀಕ್ಷೆಯು ವೈದ್ಯರಿಗೆ ದೊಡ್ಡತಲೆನೋವಾಗಿತ್ತು. ಮೊದಲಿಗೆ ಪೀಸ್ ಆಗಿರುವ ತುಂಡುಗಳನ್ನು ಜೋಡಿಸಿ, ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಇಂದು ಮಹಾಲಕ್ಷ್ಮಿಯ ಮರಣೋತ್ತರ ಪರೀಕ್ಷೆಯ ವರದಿ ಹೊರಬರುವ ಸಾಧ್ಯತೆ ಇದೆ.












Click it and Unblock the Notifications