ಕಿಡ್ನಿ ಮಾರಾಟ ದಂಧೆಯ ಐವರು ಆರೋಪಿಗಳ ಬಂಧನ
ಬೆಂಗಳೂರು, ಜುಲೈ, 15 : ಕೆಲವು ದಿನಗಳ ಹಿಂದೆ ಮಾಗಡಿ ಮಹಿಳೆಯ ಮೂತ್ರಪಿಂಡ ಮಾರಾಟಕ್ಕೆ ಸಂಬಂಧಿಸಿದಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ಮುಖ್ಯ ಆರೋಪಿ ಸುರೇಶ್ ಎಂಬಾತನನ್ನು ಮಂಗಳವಾರ ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಖ್ಯ ಆರೋಪಿ ಸುರೇಶ್ ಬೆಂಗಳೂರಿನ ಕಾಮಾಕ್ಷಿಪಾಳ್ಯಾದ ನಿವಾಸಿ ಎಂಬುದಾಗಿ ತಿಳಿದು ಬಂದಿದ್ದು, ಕಿಡ್ನಿ ಮಾರಾಟ ದಂಧೆಯಲ್ಲಿ ಈತನಿಗೆ ಸಹಕರಿಸಿದ ಇನ್ನೂ 5 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.[ರಾಮನಗರ ಮಹಿಳೆ ಕಿಡ್ನಿಯನ್ನೇ ಕಿತ್ತುಕೊಂಡ ಸಾಲದ ಹೊರೆ]

ಮಾಗಡಿಯ ನಾಗಶೆಟ್ಟಿ ಹಳ್ಳಿ ನಿವಾಸಿ ಶಶಿಕಲಾ ಚುನಾವಣೆ ಸಾಲ ಭರಿಸಲು ತನ್ನ ಕಿಡ್ನಿ ಮಾರಿಕೊಂಡ ಘಟನೆ ಕುರಿತು ತನಿಖೆ ಕೈಗೊಂಡ ಪೊಲೀಸರು, ಕಿಡ್ನಿಗೆ ಹಣ ನೀಡಿದ ಬೆಂಗಳೂರಿನ ಶ್ರೀನಿವಾಸ್, ಈತನ ಸಂಬಂಧಿ ಹೇಮಂತ್, ರಾಮನಗರದ ನಿವಾಸಿ ಗೋಪಾಲ್, ಮಾಗಡಿಯ ಕಿಡ್ನಿ ಮಂಜ ಸೇರಿದಂತೆ ಈ ದಂಧೆಯಲ್ಲಿ ಮಧ್ಯಸ್ಥಿಕೆ ವಹಿಸಿದ 5 ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಮಾಕ್ಷಿ ಪಾಳ್ಯಾ ಮುಖ್ಯ ಆರೋಪಿ ಸುರೇಶ್ ಡಯಾಲಿಸಿಸ್ ಮಾಡಿಸಿಕೊಳ್ಳುವ ಶ್ರೀಮಂತರಿಗೆ ಹೊಸ ಕಿಡ್ನಿ ಕೊಡಿಸುವುದಾಗಿ ಮನವೊಲಿಸುತ್ತಾನೆ. ಕಿಡ್ನಿ ಪಡೆಯಲು ಶ್ರೀಮಂತರು ಒಪ್ಪಿದ ಬಳಿಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಹುಡುಕಿ ಅವರಿಗೆ ಹಣದ ಆಮಿಷ ಒಡ್ಡುತ್ತಾನೆ. ಕಿಡ್ನಿ ಕಸಿ ಮಾಡಲು ಬೇಕಾದ ಎಲ್ಲಾ ದಾಖಲೆಗಳನ್ನು ಈತನೇ ಸೃಷ್ಟಿಮಾಡಿ ಈ ಕಾರ್ಯ ಮಾಡುತ್ತಿದ್ದ ಎಂಬ ಮಾಹಿತಿ ದೊರೆತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications