ಬೆಂಗಳೂರು ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಬಿಜೆಪಿ ಕಾಲೆಳೆದ ಕಾಂಗ್ರೆಸ್
ಬೆಂಗಳೂರು, ಸೆ.14: ಬೆಂಗಳೂರಿನ ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಲಿಂಬಾವಳಿ vs ಅಶೋಕ್ ಕಿತ್ತಾಟವು ಬೆಂಗಳೂರಿನ ಹಿಡಿತಕ್ಕೆ ಬಿಜೆಪಿಯಲ್ಲಿ ನಡೆಯುತ್ತಿರುವ ಪೈಪೋಟಿ ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿ ಕಾಲೆಳೆದಿದೆ.
ಮಾಧ್ಯಮ ವರದಿಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಸರಕಾರದಲ್ಲಿ ಬಿಜೆಪಿ vs ಬಿಜೆಪಿ ಕಿತ್ತಾಟ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದೆ.
ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿರುವ ಕಾಂಗ್ರೆಸ್, ಬಿಜೆಪಿಯ ದಮ್ಮು ತಾಕತ್ತು ಎಲ್ಲವೂ ಅಮಾಯಕರ, ಬಡವರ ಮೇಲೆ ಮಾತ್ರವೇ..? ಪ್ರಭಾವಿಗಳ ಅತಿಕ್ರಮಣದ ಮೇಲೆ ಜೆಸಿಬಿಗಳು ಹೋಗುವುದಿಲ್ಲವೆ ಎಂದು ಕಿಡಿ ಕಾರಿದೆ.
ಒತ್ತುವರಿ ಬಗ್ಗೆ ಸರ್ಕಾರದಲ್ಲೇ ಸ್ಪಷ್ಟತೆ ಇಲ್ಲದಾಗಿದೆ
"ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಲಿಂಬಾವಳಿ vs ಅಶೋಕ್ ಕಿತ್ತಾಟವು ಬೆಂಗಳೂರಿನ ಹಿಡಿತಕ್ಕೆ ಬಿಜೆಪಿಯಲ್ಲಿ ನಡೆಯುತ್ತಿರುವ ಪೈಪೋಟಿ. ಒತ್ತುವರಿ ಬಗ್ಗೆ ಸರ್ಕಾರದಲ್ಲೇ ಸ್ಪಷ್ಟತೆ ಇಲ್ಲದಾಗಿದೆ, ಶಾಸಕರದ್ದು ಒಂದು ಮಾತು, ಸಚಿವರದ್ದು ಮತ್ತೊಂದು ಮಾತು. ಇದು ಉಸ್ತುವಾರಿಗಾಗಿ ಮೇಲಾಟವೋ, ಪ್ರಭಾವಿಗಳ ಪರ ಲಾಭಿಯೋ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ..?" ಎಂದು ಪ್ರಶ್ನಿಸಿದೆ.
ದಮ್ಮು ತಾಕತ್ತು ಎಲ್ಲವೂ ಅಮಾಯಕರ, ಬಡವರ ಮೇಲೆ ಮಾತ್ರವೇ?
" 40 ಪರ್ಸೆಂಟ್ ಸರ್ಕಾರದ ದಮ್ಮು ತಾಕತ್ತು ಎಲ್ಲವೂ ಅಮಾಯಕರ, ಬಡವರ ಮೇಲೆ ಮಾತ್ರವೇ..? ಬಡವರ ಮೇಲೆ ನುಗ್ಗುವ ಜೆಸಿಬಿಗಳು ಪ್ರಭಾವಿಗಳ ಅತಿಕ್ರಮಣದ ಕಡೆ ಹೋಗದಿರುವುದೇಕೆ..?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
"ಸರ್ಕಾರ ಪ್ರಭಾವಿಗಳ ರಕ್ಷಣೆಗೆ ನಿಂತಿರುವುದಕ್ಕೆ ಲಿಂಬಾವಳಿ vs ಅಶೋಕ್ ಗುದ್ದಾಟವು ಪುಷ್ಠಿ ಕೊಡುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬಡವರ ಮೇಲೆ ಸವಾರಿ ಮಾಡುವುದು ಮಾತ್ರ ಶೌರ್ಯವೇ..?" ಎಂದು ಟೀಕಿಸಿದೆ.
ಬಿಜೆಪಿಯವರೇ ಕಮಿಷನ್ ಸತ್ಯ ಹೇಳುತ್ತಿರುವಾಗ ಇನ್ಯಾವ ಸಾಕ್ಷಿ ಬೇಕು?
ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿರುವ ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್, ತಮ್ಮದೆ ಪಕ್ಷದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿನ ಪೈಪ್ಲೈನ್ ಕಾಮಗಾರಿಗಳು, ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂದು ಆರೋಪಿಸಿದ್ದಾರೆ.
ಈ ವಿಷಯವನ್ನು ಹಂಚಿಕೊಂಡಿರುವ ಕಾಂಗ್ರೆಸ್, "40 ಪರ್ಸೆಂಟ್ ಸರ್ಕಾರದ ಕಮಿಷನ್ ಕರ್ಮಕಾಂಡಗಳು ಸ್ವತಃ ಬಿಜೆಪಿಗರೇ ಬಯಲು ಮಾಡುತ್ತಿದ್ದಾರೆ. ಕಮಿಷನ್ ಆರೋಪಕ್ಕೆ ಸಾಕ್ಷಿ, ದಾಖಲೆ ಕೇಳುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಈಗ ನಿಮ್ಮವರೇ ನಿಮ್ಮವರ ಬಗ್ಗೆ ಕಮಿಷನ್ ಆರೋಪ ಮಾಡಿದ್ದಾರೆ, ಈ ಸಾಕ್ಷಿ ಸಾಕೇ? ನಿಮ್ಮವರೇ ಕಮಿಷನ್ ಸತ್ಯ ಹೇಳುತ್ತಿರುವಾಗ ಇನ್ಯಾವ ಸಾಕ್ಷಿ ಬೇಕು ಕರ್ನಾಟಕ ಬಿಜೆಪಿಗೆ?" ಎಂದು ಪ್ರಶ್ನಿಸಿದೆ.
ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಯೋಜನೆಯಲ್ಲಿ ವಂಚನೆ
"40 ಪರ್ಸೆಂಟ್ ಸರ್ಕಾರದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆಯಲ್ಲಿ ಮಹಾ ವಂಚನೆ ನಡೆಸಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19 ಕೊನೆಯ ದಿನಾಂಕವೆಂದು ಘೋಷಿಸಿದೆ ಬಿಬಿಎಂಪಿ, ಆದರೆ ಅರ್ಜಿ ಸಲ್ಲಿಸುವ ವೆಬ್ ಸೈಟನ್ನು ನಿಷ್ಕ್ರೀಯಗೊಳಿಸಿ ವಂಚಿಸುತ್ತಿದೆ. ಬಿಬಿಎಂಪಿ ಆಯುಕ್ತರೇ ವೆಬ್ಸೈಟ್ ಲೋಪಕ್ಕೆ ಕಾರಣವೇನು?" ಎಂದು ಕೇಳಿದೆ.
"ಹೆಸರು ಬದಲಿಸುವುದೇ ಸಾಧನೆ ಎಂದುಕೊಂಡಿರುವ ಬಿಜೆಪಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ನಾಮಕರಣಕ್ಕೆ ಮಾತ್ರ ಸೀಮಿತಗೊಳಿಸಿದೆ! KKRDB ಅವ್ಯವಹಾರ ತಡೆಗಟ್ಟಲಿಲ್ಲ, ಅನುದಾನ ನೀಡಲಿಲ್ಲ, ಘೋಷಣೆಯಾದ ಅನುದಾನ ತಲುಪಲಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಿಸುವ ಯಾವುದೇ ಕೆಲಸವನ್ನೂ 40 ಪರ್ಸೆಂಟ್ ಸರ್ಕಾರ ಮಾಡಲಿಲ್ಲ" ಎಂದು ಕಿಡಿ ಕಾರಿದೆ.