ಬೆಂಗಳೂರಿನ ರಸ್ತೆ ಅಭಿವೃದ್ಧಿಗಾಗಿ ಟೆಂಡರ್ ಶೂರ್ ಯೋಜನೆ
ಬೆಂಗಳೂರು, ಅ.18 : ಉದ್ಯಾನಗರಿ ಬೆಂಗಳೂರಿನಲ್ಲಿ ಯಾವಾಗಲೂ ರಸ್ತೆ ಅಗೆಯುತ್ತಾರೆ ಎಂಬ ಸಾರ್ವಜನಿಕರ ಆರೋಪಗಳಿಗೆ ತಡೆ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬಿಬಿಎಂಪಿಯ ಟೆಂಡರ್ ಶೂರ್ ಯೋಜನೆ ಅನುಷ್ಟಾನಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಏಳು ರಸ್ತೆಗಳನ್ನು 78.83 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ದೊರಕಿದೆ. ಈ ರಸ್ತೆಯ ಕಾಮಗಾರಿಯನ್ನು ಟೆಂಡರ್ ಶೂರ್ ಯೋಜನೆಯಡಿ ಕೈಗೊಳ್ಳಲಾಗುತ್ತದೆ.

ವಾಣಿಜ್ಯ ವಹಿವಾಟು ಹೆಚ್ಚಿರುವ ಏಳು ಪ್ರಮುಖ ರಸ್ತೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ಇವುಗಳನ್ನು ಮೊದಲು ಟೆಂಡರ್ ಶೂರ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಬಿಬಿಎಂಪಿ ಟೆಂಡರ್ ಶೂರ್ ಯೋಜನೆ ಜಾರಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಯೋಜನೆ ಅನ್ವಯ ಸೇಂಟ್ ಮಾರ್ಕ್ಸ್ ರಸ್ತೆ, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ವಿಠಲ್ ಮಲ್ಯ ರಸ್ತೆ, ಚರ್ಚ್ಸ್ಟ್ರೀಟ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಎರಡನೇ ಹಂತದಲ್ಲಿ 13ರಿಂದ 14 ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ತಯಾರಿಸಲಾಗಿದೆ.
ಎರಡನೇ ಹಂತದಲ್ಲಿ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಲು 122.5 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ವ್ಯಾಪ್ತಿಯಲ್ಲಿ 13 ರಿಂದ 14 ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ. ಮೊದಲ ಹಂತದ ಯೋಜನೆ ಮುಗಿದ ಬಳಿಕ ಇದು ಆರಂಭವಾಗಲಿದೆ.
ಏನಿದು ಟೆಂಡರ್ ಶೂರ್ : ಟೆಂಡರ್ ಶೂರ್ ಎಂಬುದುವುದು ರಸ್ತೆಗಳ ತಾಂತ್ರಿಕ ಅಧ್ಯಯನ ನಡೆಸಿ ಅದನ್ನು ಅಭಿವೃದ್ಧಿ ಪಡಿಸುತ್ತದೆ. ರಸ್ತೆ ನಿರ್ಮಾಣವಾದ ನಂತರ ಪಾದಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೂ ರಸ್ತೆಯಲ್ಲಿ ಸ್ಥಳವಕಾಶ ನೀಡುತ್ತದೆ.
ಒಎಫ್ ಸಿ ಅಳವಡಿಕೆ, ಚರಂಡಿ ಸ್ವಚ್ಛತೆ, ವಿದ್ಯುತ್ ಕೇಬಲ್ ಅಳವಡಿಕೆಗೆ ರಸ್ತೆಯನ್ನು ಅಗೆಯದಂತೆ ಟೆಂಡರ್ ಶೂರ್ ರಸ್ತೆ ನಿರ್ಮಾಣ ಮಾಡಲಿದೆ. ಆದ್ದರಿಂದ ಇನ್ನೂ ನಗರದ ರಸ್ತೆಗಳನ್ನು ಪದೇ-ಪದೇ ಅಗೆಯುವ ಕೆಲಸಕ್ಕೆ ತಡೆ ಬೀಳಲಿದೆ.(ಸಚಿವ ಸಂಪುಟ ಸಭೆಯ ನಿರ್ಣಯಗಳು)











Click it and Unblock the Notifications