ತಂತ್ರಜ್ಞಾನದಿಂದ ಮನುಷ್ಯ ಸಂಬಂಧಗಳು ಬೆಸೆದಿವೆ: ಸಚಿವ ದೇಶಪಾಂಡೆ
ಬೆಂಗಳೂರು, ನವೆಂಬರ್ 18: ತಂತ್ರಜ್ಞಾನವು ಜನಜೀವನಕ್ಕೆ ಹಲವು ಅನುಕೂಲಗಳನ್ನು ತಂದುಕೊಟ್ಟಿದೆ. ಆದರೆ ವ್ಯಕ್ತಿಗಳ ಮಟ್ಟದ ಜತೆಗೆ ಉದ್ಯಮ ಮತ್ತು ಪರಿಸರದ ದೃಷ್ಟಿಯಿಂದ ಇದು ವಿರೋಧಾಭಾಸ ಸೃಷ್ಟಿಸಿದೆ. ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಸಮಗ್ರ- ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಸಚಿವ ಆರ್.ವಿ.ದೇಶಪಾಂಡೆ ಬುಧವಾರ ಅಭಿಪ್ರಾಯ ಪಟ್ಟರು.
ನಗರದ ಖಾಸಗಿ ಹೋಟೆಲಿನಲ್ಲಿ '23ನೇ ವರ್ಷದ ಗ್ಲೋಬಲ್ ಫೋರಂ ಆನ್ ಸ್ಟ್ರಾಟೆಜಿಕ್ ಚೇಂಜ್, ಲೀಡರ್ ಶಿಪ್ ಅಂಡ್ ಲರ್ನಿಂಗ್' ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿದರು.
ತಂತ್ರಜ್ಞಾನವು ಮನುಷ್ಯರನ್ನು ಬೆಸೆದಿದೆ. ಆದರೆ ಮನುಷ್ಯರ ನಡುವಿನ ಪರಸ್ಪರ ಬಾಂಧವ್ಯ ಶಿಥಿಲವಾಗಿರುವ ವೈರುಧ್ಯ ನಮ್ಮ ಮುಂದಿದೆ. ಸುತ್ತಲಿನ ಸಂಗತಿಗಳು ವ್ಯವಸ್ಥಿತ ಆಗಿರುವಂತೆ ತೋರುತ್ತಿದ್ದರೂ ವಾಸ್ತವದಲ್ಲಿ ಕ್ಷೋಭೆಯ ವಾತಾವರಣವಿದೆ. ಜೀವನಮಟ್ಟ ಸುಧಾರಿಸಿರುವುದು ನಿಜವಾದರೂ ಬಡವ-ಶ್ರೀಮಂತರ ನಡುವಿನ ಅಂತರ ಜಾಸ್ತಿಯಾಗುತ್ತಲೇ ಇದೆ. ತಂತ್ರಜ್ಞಾನವು ಇವುಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂದರು.

ತಂತ್ರಜ್ಞಾನ ರಂಗದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಅದ್ಭುತವಾದ ಜಗತ್ತಿನಲ್ಲಿ ನಾವೆಲ್ಲರೂ ಇದ್ದೇವೆ. ಇದೇ ತಂತ್ರಜ್ಞಾನ ನಮ್ಮ ಭೂಮಿಯನ್ನೇ ನಾಶ ಮಾಡುವ ಭೀತಿಯನ್ನೂ ನಾವು ಎದುರಿಸುತ್ತಿದ್ದೇವೆ. ಜನರ ಅಭ್ಯುದಯವೇ ಮುಖ್ಯವಾಗಿರುವಂತಹ ನೀತಿಗಳನ್ನು ಜಾರಿಗೆ ತರುವುದೇ ಇದಕ್ಕೆ ಪರಿಹಾರ ಎಂದು ಸಚಿವರು ಸಲಹೆ ನೀಡಿದರು.
ತಂತ್ರಜ್ಞಾನವು ಜನರು ಘನತೆಯಿಂದ ಬದುಕಲು ಸಾಧ್ಯವಾಗುವಂಥ ಉದ್ಯೋಗಗಳನ್ನು ಸೃಷ್ಟಿಸಬೇಕು. ಕರ್ನಾಟಕವನ್ನು ಸುಸ್ಥಿರ ಅಭಿವೃದ್ಧಿ ಮಾದರಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಬೇಕೆಂಬುದೇ ಸರಕಾರದ ಗುರಿಯಾಗಿದೆ. ಇದರ ಜತೆಯಲ್ಲೇ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಯ ಬಲವರ್ಧನೆಗೂ ಇದು ಕಾರಣವಾಗಬೇಕು ಎಂದರು.
ತಂತ್ರಜ್ಞಾನದಿಂದಾಗಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಒಂದು ಮಟ್ಟದ ಪಾರದರ್ಶಕತೆ ಬಂದಿದೆ. ವಿದ್ಯುನ್ಮಾನ ಆಡಳಿತವು ಸರಕಾರದ ಪಾತ್ರವನ್ನು ಸರಳಗೊಳಿಸುತ್ತಿದೆ. ಇದನ್ನು ಮನಗಂಡೇ ಸರಕಾರವು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವನ್ನು ವ್ಯಾಪಕ ಪ್ರಮಾಣದಲ್ಲಿ ಬಳಸುತ್ತಿದೆ ಎಂದು ದೇಶಪಾಂಡೆ ವಿವರಿಸಿದರು.
ಹಲವು ರಾಷ್ಟ್ರಗಳ ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಮಾವೇಶವು ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದೆ.












Click it and Unblock the Notifications