ಪರಿಷತ್ ಅಧಿವೇಶನದಲ್ಲೂ ಕಾಡಿದ ಕೊರೊನಾ ವೈರಸ್ ಆತಂಕ
ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಕರ್ನಾಟಕ ಶಾಸಕರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಇಂದು ನಡೆದ ಉಭಯ ಸದನಗಳಲ್ಲೂ ಕೊರೊನಾ ವೈರಸ್ ಸದ್ದು ಮಾಡಿದೆ.
ವಿಧಾನಸಭೆ ಕಲಾಪದ ನಡುವೆ ಶಾಸಕರು ಕೊರೊನಾ ವೈರಸ್ ಬಗ್ಗೆ ಚರ್ಚೆ ಮಾಡಿದ್ದು ಗಮನಕ್ಕೆ ಬಂತು. ಆ ಕಡೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಅವರು ಮಾಸ್ಕ್ ಧರಿಸಿ ಅಧಿವೇಶನದಲ್ಲಿ ಭಾಗಿಯಾಗಿದ್ದು ಕೇಂದ್ರಬಿಂದು ಆಗಿತ್ತು.
ಕೊರೊನಾ ವೈರಸ್ ಸೋಂಕಬಹುದು ಎಂಬ ಆತಂಕದಿಂದ ಅಧಿವೇಶನದಲ್ಲೂ ಮಾಸ್ಕ್ ಧರಿಸಿದ್ದ ಶರವಣ ಇಂದು ಕ್ಯಾಮೆರಾ ಕಣ್ಣಿಗೆ ಬಿದ್ದರು. ಮತ್ತೊಂದೆಡೆ ಕೊರೊನಾ ವೈರಸ್ ಸೋಂಕಿನಿಂದ ರಾಜ್ಯದ ಜನ ಆತಂಕದಲ್ಲಿ ಇದ್ದಾರೆ ಎಂದು ಸರಕಾರದ ಗಮನ ಸೆಳೆಯಲು ಇಂತಹ ಪ್ರಯತ್ನ ಮಾಡಿದರು ಎನ್ನಲಾಗಿದೆ.

ಕೊರೊನಾ ವೈರಸ್ ಕುರಿತು ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು, ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಇಂದು ಸುದ್ದಿಗೋಷ್ಠಿ ಮಾಡಿ ''ರಾಜ್ಯದ ಜನತೆಗೆ ಯಾವುದೇ ಆತಂಕ ಬೇಡ. ಕೊರೊನಾ ಸೋಂಕು ಹರಡದಂತೆ ಎಲ್ಲ ರೀತಿಯಲ್ಲೂ ಮುಂಜಾಗೃತೆ ಕ್ರಮ ಕೈಗೊಂಡಿದ್ದೇವೆ'' ಎಂದು ತಿಳಿಸಿದ್ದರು.
ಇನ್ನು ಭಾರತದಲ್ಲಿ ಕೊರೊನಾ ವೈರಸ್ ಗೆ ಸಂಬಂಧಪಟ್ಟಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿದೆ. ತೆಲಂಗಾಣ ಮೂಲದ ಟೆಕ್ಕಿಯೊಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆ ವ್ಯಕ್ತಿಯಿಂದ ಕೊರೊನಾ ವೈರಸ್ ಸಿಲಿಕಾನ್ ಸಿಟಿಗೂ ತಟ್ಟಿರಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ. ಆದರೆ, ಇದುವರೆಗೂ ಕರ್ನಾಟಕದಲ್ಲಾಗಲಿ ಅಥವಾ ಬೆಂಗಳೂರಿನಲ್ಲಾಗಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ.












Click it and Unblock the Notifications